ಆ್ಯಪ್ನಗರ

ದೇವರ ಹೆಸರಿನಲ್ಲಿ ಪ್ರಾಣಿ ಬಲಿ ಬೇಡ

ಬೆಳಗಾವಿ: ಪ್ರಾಣಿಗಳನ್ನು ಬಲಿಕೊಟ್ಟರೆ ದೇವರ ಆಶೀರ್ವಾದ ...

Vijaya Karnataka 21 Aug 2018, 5:00 am
ಬೆಳಗಾವಿ: ಪ್ರಾಣಿಗಳನ್ನು ಬಲಿಕೊಟ್ಟರೆ ದೇವರ ಆಶೀರ್ವಾದ ಸಿಗುವುದಿಲ್ಲ. ಬದಲಾಗಿ ಪ್ರಾಣಿಗಳನ್ನು ರಕ್ಷಣೆ ಮಾಡಿ ಶಾಂತಿ-ಸೌಹಾರ್ದತೆ ಹಂಚಿದರೆ ಇಡೀ ಸಮಾಜವೇ ಮೆಚ್ಚಿ ಅಭಿನಂದಿಸುತ್ತದೆ ಎಂದು ಜಿಲ್ಲಾಧಿಕಾರಿ ಎಸ್‌.ಜಿಯಾವುಲ್ಲಾ ಹೇಳಿದರು.
Vijaya Karnataka Web do not sacrifice animals in the name of god
ದೇವರ ಹೆಸರಿನಲ್ಲಿ ಪ್ರಾಣಿ ಬಲಿ ಬೇಡ


ಬಕ್ರಿದ್‌ ಹಬ್ಬದ ಹಿನ್ನೆಲೆಯಲ್ಲಿ ಸೋಮವಾರ ನಗರ ಪೊಲೀಸ್‌ ಆಯುಕ್ತ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಶಾಂತಿ ಪಾಲನಾ ಸಭೆಯಲ್ಲಿ ಮಾತನಾಡಿದ ಅವರು, ದೇವರ ಹೆಸರಿನಲ್ಲಿ ಪ್ರಾಣಿ ಬಲಿ ಕೊಡುವುದು ಸರಿಯಲ್ಲ. ತ್ಯಾಗ, ಬಲಿದಾನದ ಸ್ಮರಣೆಯಲ್ಲಿ ಆಚರಿಸಲ್ಪಡುವ ಬ್ರಕೀದ್‌ ಸೇರಿದಂತೆ ಯಾವುದೇ ಸಮಾಜ, ಧರ್ಮದ ಜಾತ್ರೆ, ಹಬ್ಬಗಳು ಸೌಹಾರ್ದತೆಗೆ ವೇದಿಕೆಯಾಗಬೇಕು. ವಿಶೇಷವಾಗಿ ಪ್ರಾಣಿ ಬಲಿ ತಡೆದು ಶಾಂತಿ ಪಾಲನೆ ಮಾಡುವ ಚಿಂತನೆ ಬೆಳೆಸಿಕೊಳ್ಳಬೇಕು ಎಂದರು.

ವಿದ್ಯುತ್‌ ಅಲಂಕಾರದ ಉದ್ದೇಶದಿಂದ ಪಡೆದುಕೊಳ್ಳುವ ವಿದ್ಯುತ್‌ ಸಂಪರ್ಕಕ್ಕೆ ಹೆಸ್ಕಾಂ ಹೆಚ್ಚು ಶುಲ್ಕ ಸಂಗ್ರಹಿಸುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಹೆಸ್ಕಾಂ ಹಬ್ಬದ ಸಂದರ್ಭದಲ್ಲಿ ಬಳಕೆ ಮಾಡುವ ವಿದ್ಯುತ್‌ಗೆ ಶುಲ್ಕ ನಿಗದಿ ಮಾಡಿದೆ. ಅದೇ ಆಧಾರದ ಮೇಲೆ ವಿದ್ಯುತ್‌ ಸಂಪರ್ಕ ನೀಡಲಾಗುವುದು ಎಂದರು.

ದಾಲ್ಬಿ ಬಳಕೆ ಬೇಡ: ನಗರ ಪೊಲೀಸ್‌ ಆಯುಕ್ತ ಡಿ.ಸಿ.ರಾಜಪ್ಪ ಮಾತನಾಡಿ, ಹಬ್ಬದಾಚರಣೆ ಸಡಗರ-ಸಂಭ್ರಮದಿಂದ ನಡೆಯಬೇಕು. ಆದ್ದರಿಂದ, ಬಕ್ರೀದ್‌, ಮೋಹರಂ ಹಾಗೂ ಗಣೇಶ ಹಬ್ಬಗಳಲ್ಲಿ ನಗರ ಪ್ರದೇಶದಲ್ಲಿ ಡಾಲ್ಬಿ ಬಳಕೆ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿ ಡಾಲ್ಬಿ ಬಳಕೆ ಮಾಡಿದರೆ ಮುಲ್ಲಾಜಿಲ್ಲದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರಕುಮಾರ ರೆಡ್ಡಿ ಮಾತನಾಡಿ, ಯಾವುದೇ ಹಬ್ಬಗಳಲ್ಲಿ ಕಿಡಿಗೇಡಿಗಳು ಸಮಸ್ಯೆ ಮಾಡಿದರೆ ಅಂಥವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುವುದು ಅನಿವಾರ್ಯ. ಅದಕ್ಕೂ ಮೊದಲೆ ಆಯಾ ಸಮಾಜದ ಮುಖಂಡರು ಅಂಥ ಯುವಕರನ್ನು ಗುರುತಿಸಿ ಬುದ್ಧಿ ಹೇಳುವ ಕಾರ್ಯ ಮಾಡಬೇಕು. ಕಠಿಣ ಕ್ರಮದ ನಂತರ ಪೊಲೀಸರ ಬಳಿ ಬರುವ ಬದಲು ಸಮಸ್ಯೆಯೇ ಆಗದಂತೆ ಎಚ್ಚರಿಕೆ ವಹಿಸುವುದು ಜಾಣತನ ಎಂದರು.

ಪಾಲಿಕೆ ಸದಸ್ಯ ರಮೇಶ ಸೊಂಟಕ್ಕಿ, ಡಿಸಿಪಿ ಮಹಾನಿಂಗ ನಂದಗಾವಿ ಸೇರಿದಂತೆ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ