ಆ್ಯಪ್ನಗರ

ಮಾದಕ ವಸ್ತು ಮಾರುತ್ತಿದ್ದ ಖದೀಮರು ಅಂದರ್‌

ಬೆಳಗಾವಿ: ಕಾಲೇಜು ವಿದ್ಯಾರ್ಥಿಗಳನ್ನು ಟಾರ್ಗೆಟ್‌ ಮಾಡಿ ...

Vijaya Karnataka 18 Jul 2019, 5:00 am
ಬೆಳಗಾವಿ : ಕಾಲೇಜು ವಿದ್ಯಾರ್ಥಿಗಳನ್ನು ಟಾರ್ಗೆಟ್‌ ಮಾಡಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಜಾಲವನ್ನು ಬೆಳಗಾವಿ ನಗರ ಪೊಲೀಸರು ಭೇದಿಸಿ, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಜಾಲದಲ್ಲಿ ಓರ್ವ ಎಂಜಿನಿಯರಿಂಗ್‌ ವಿದ್ಯಾರ್ಥಿ ಹಾಗೂ ಜಮ್ಮು ಕಾಶ್ಮೀರದ ವ್ಯಕ್ತಿಯೂ ಇರುವುದು ವಿಶೇಷ.
Vijaya Karnataka Web BLG-1707-2-52-17 GANJA


ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್‌ ಆಯುಕ್ತ ಬಿ.ಎಸ್‌. ಲೋಕೇಶಕುಮಾರ ಮಾಹಿತಿ ನೀಡಿದರು. ಧಾರವಾಡ ತಾಲೂಕಿನ ಅಳ್ನಾವರ ಪಟ್ಟಣದ ನೆಹರು ನಗರದ ಅಖಿಲಹ್ಮದ ಕುತಬುದ್ದೀನ ಮುನವಳ್ಳಿ, ಬೆಳಗಾವಿಯ ಮಹಾಂತೇಶ ನಗರದ ಆತೀಫ್‌ ನಜೀರಅಹ್ಮದ ಚಚಡಿ, ಕಾಕತಿಯ ಸೂರಜ ಕಲ್ಲಪ್ಪ ಅಗಸರ, ಜಮ್ಮು-ಕಾಶ್ಮೀರ ಮೂಲದ ಅಮೀರ ಅಬ್ದುಲ ಲತೀಫ್‌ ಬೇಗ್‌, ಬೆಳಗಾವಿಯ ಸಲ್ಮಾನ ಪತ್ತೆಖಾನ ಮತ್ತು ಬೆಳಗಾವಿಯ ಚವಾಟ ಗಲ್ಲಿಯ ಅನಿಕೇಶ ಅನಿಲ ಮಧುಮತ್ತ, ವೀರಭದ್ರ ನಗರದ ಸಮೀರ ಸಾಧಿಕ ದೇಸಾಯಿ, ಮಾರುತಿ ನಗರದ ರಾಮಚಂದ್ರ ಪರಶುರಾಮ ಪವಾರ ಬಂಧಿತ ಆರೋಪಿಗಳು.

ಬಂಧಿತರಿಂದ ಒಟ್ಟು 21,500 ರೂ. ಮೌಲ್ಯದ 2.19 ಕೆಜಿ ಗಾಂಜಾ, 25 ಸಾವಿರ ರೂ. ಮೌಲ್ಯದ ಪನ್ನಿ ತುಂಬಿದ 126 ಪ್ಯಾಕೆಟ್‌, 1.10 ಲಕ್ಷ ರೂ. ಮೌಲ್ಯದ ಮೂರು ದ್ವಿಚಕ್ರ ವಾಹನ ಮತ್ತು ಮೊಬೈಲ್‌ ವಶಪಡಿಸಿಕೊಳ್ಳಲಾಗಿದೆ. ನಗರದ ಮಾಳಮಾರುತಿ ಹಾಗೂ ಮಾರ್ಕೆಟ್‌ ಠಾಣೆ ಪೊಲೀಸರು ಎರಡು ಪ್ರತ್ಯೇಕ ದಾಳಿ ನಡೆಸಿದ್ದರು ಎಂದು ಅವರು ತಿಳಿಸಿದರು.

ವ್ಯವಸ್ಥಿತ ಜಾಲ: ವೃತ್ತಿಯಲ್ಲಿ ಟ್ರಕ್‌ ಚಾಲಕನಾಗಿರುವ ಪ್ರಮುಖ ಆರೋಪಿ ಅಖಿಲಅಹ್ಮದ ಮುನವಳ್ಳಿ ಮಧ್ಯಪ್ರದೇಶದ ಇಂದೋರ, ಮಹಾರಾಷ್ಟ್ರದ ಶಿರಡಿ ಇನ್ನಿತರ ಸ್ಥಳಗಳಿಂದ ಗಾಂಜಾ ತಂದು ಆತೀಫ್‌ ಚಚಡಿ ಹಾಗೂ ಸಲ್ಮಾನ ಪತ್ತೆಖಾನ್‌ಗೆ ಮಾರಾಟ ಮಾಡುತ್ತಿದ್ದ. ನಂತರ ಸೂರಜ ಅಗಸರ, ಅಮೀರ ಬೇಗ್‌ ಸಹಾಯದಿಂದ ಸಣ್ಣ ಸಣ್ಣ ಪ್ಯಾಕೆಟ್‌ಗಳನ್ನಾಗಿಸಿ ನಗರದ ಮೆಡಿಕಲ್‌ ಹಾಗೂ ಎಂಜಿನಿಯರಿಂಗ್‌ ಕಾಲೇಜುಗಳ ವಿದ್ಯಾರ್ಥಿಗಳನ್ನು ಟಾರ್ಗೆಟ್‌ ಮಾಡಿ ಮಾರಾಟ ಮಾಡಲಾಗುತ್ತಿತ್ತು. ಬಂಧಿತರ ಪೈಕಿ ಒಂದು ತಂಡ ವಿದ್ಯಾರ್ಥಿಗಳಲ್ಲದೆ ಇಲ್ಲಿನ ಆಜಾದ್‌ ನಗರ, ವೈಭವ ನಗರ ಮತ್ತಿತರ ಪ್ರದೇಶಗಳಲ್ಲೂ ಗಾಂಜಾ ಮಾರಾಟ ಮಾಡುತ್ತಿತ್ತು. ಗಾಂಜಾ ಮಾರಾಟ ಮಾಡುತ್ತಿರುವವರ ಪೈಕಿ ಸೂರಜ್‌ ಆಗಸರ ಎಂಜಿನಿಯರಿಂಗ್‌ ವಿದ್ಯಾರ್ಥಿ.

ಇನ್ನೊಂದು ತಂಡದ ಆರೋಪಿ ಅನಿಕೇಶ ಮಧುಮತ್ತ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ತಂದ ಗಾಂಜಾವನ್ನು ಸಮೀರ ದೇಸಾಯಿ, ರಾಮಚಂದ್ರ ಪವಾರ ಮೂಲಕ ಮಾರಾಟ ಮಾಡುತ್ತಿದ್ದ. ಗಾಂಜಾ ಜತೆಗೆ ಮತ್ತೊಂದು ಮಾದಕ ವಸ್ತು ಪನ್ನಿಯನ್ನೂ ಸಣ್ಣ ಸಣ್ಣ ಪ್ಯಾಕೆಟ್‌ಗಳಲ್ಲಿ ತಯಾರಿಸಿ ವಿದ್ಯಾರ್ಥಿಗಳು ಮತ್ತು ಯುವಕರನ್ನು ಗುರಿಯಾಗಿರಿಸಿ ಮಾರಾಟ ಮಾಡುತ್ತಿರುವುದು ತನಿಖೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸ್‌ ಆಯುಕ್ತ ಲೋಕೇಶಕುಮಾರ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಸೀಮಾ ಲಾಟ್ಕರ, ಯಶೋಧಾ ವಂಟಗೂಡಿ, ಎಸಿಪಿ ನಾರಾಯಣ ಬರಮನಿ ಮತ್ತಿತರರು ಉಪಸ್ಥಿತರಿದ್ದರು.

ಪೊಲೀಸರಿಗೆ ಬಹುಮಾನ :
ಎಂಜಿನಿಯರಿಂಗ್‌, ಮೆಡಿಕಲ್‌ ಕಾಲೇಜುಗಳ ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡು ಮಾದಕ ವಸ್ತು ಮಾರಾಟ ಮಾಡುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್‌ ಬಿ.ಆರ್‌. ಗಡ್ಡೆಕರ್‌ ನೇತೃತ್ವದಲ್ಲಿ ಮಾಳಮಾರುತಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಪ್ರಮುಖ ಆರೋಪಿ ಅಖಿಲಹ್ಮದ ಮುನವಳ್ಳಿ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿತ್ತು. ನಂತರ ಬಂಧಿತರ ವಿಚಾರಣೆ ವೇಳೆ ಇನ್ನೊಂದು ತಂಡ ಕೂಡ ಮಾದಕ ವಸ್ತು ಮಾರಾಟ ಮಾಡುತ್ತಿರುವುದು ತಿಳಿದಿದ್ದರಿಂದ ಇನ್ಸ್‌ಪೆಕ್ಟರ್‌ ವಿಜಯಕುಮಾರ ಮುರುಗುಂಡಿ ನೇತೃತ್ವದಲ್ಲಿ ಮಾರ್ಕೆಟ್‌ ಠಾಣೆ ಪೊಲೀಸರು ದಾಳಿ ನಡೆಸಿ ಅನಿಕೇಶ ಮಧುಮತ್ತ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಅತ್ಯುತ್ತಮ ಕೆಲಸ ನಿರ್ವಹಿಸಿರುವ ಎರಡೂ ಪೊಲೀಸ್‌ ಠಾಣೆ ತಂಡಗಳಿಗೆ ಪೊಲೀಸ್‌ ಕಮಿಶ್ನರ್‌ 25 ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ