ಬೆಳಗಾವಿ: ಅಪಾರ್ಟ್ಮೆಂಟ್ವೊಂದರಲ್ಲಿ ಮಕ್ಕಳೊಂದಿಗೆ ವಾಸವಿದ್ದ ವೃದ್ಧ ದಂಪತಿ ಭಾನುವಾರ ರಾತ್ರಿ ಒಂದೇ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಬೆಳಗಾವಿ ಪಾಲಿಕೆಯ ಮಾಜಿ ಉಪಮೇಯರ್, ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮಹಿಳಾ ಘಟಕದ ಅಧ್ಯಕ್ಷೆ ರೇಣು ಕಿಲ್ಲೇಕರ ಅವರ ಮಾವ ನಾರಾಯಣ ಕಿಲ್ಲೇಕರ (80), ಅತ್ತೆ ವಸುಂಧರಾ ಕಿಲ್ಲೇಕರ (68) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಇಲ್ಲಿನ ಗೂಡ್ಶೆಡ್ ರಸ್ತೆಯ ಅಪಾರ್ಟ್ಮೆಂಟ್ನ ತಮ್ಮ ಬೆಡ್ರೂಮ್ ಬಾಗಿಲಿನ ಹೊರಭಾಗದಲ್ಲಿ ದಂಪತಿ ಒಟ್ಟಿಗೇ ನೇಣು ಹಾಕಿಕೊಂಡಿದ್ದಾರೆ.
ನಾರಾಯಣ ಅವರು ಏರ್ ಫೋರ್ಸ್ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಇವರು ಪತ್ನಿ, ಮಗ ಸುಹಾಸ್, ಸೊಸೆ ರೇಣು ಅವರ ಜತೆ ಒಂದೇ ಮನೆಯಲ್ಲಿ ವಾಸವಿದ್ದರು. ಮೂರು ಬೆಡ್ರೂಮ್ ಇರುವ ಮನೆಯಲ್ಲಿ ಇವರಿಗೆ ಪ್ರತ್ಯೇಕ ಕೋಣೆ ಇತ್ತು. ರಾತ್ರಿ ಊಟ ಮಾಡಿ ಎಲ್ಲರೂ ಮಲಗಿದ ನಂತರ ದಂಪತಿ ಛಾವಣಿಯ ಸರಳಿಗೆ ಹಗ್ಗ ಜೋಡಿಸಿ ಅದರ ಎರಡೂ ತುದಿಯಿಂದ ನೇಣು ಬಿಗಿದುಕೊಂಡಿದ್ದಾರೆ. ಸೋಮವಾರ ಬೆಳಗ್ಗೆ ಅಪಾರ್ಟ್ಮೆಂಟ್ನ ಭದ್ರತಾ ಸಿಬ್ಬಂದಿ ನೋಡಿದಾಗ ವಿಷಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದರು.
ವಸುಂಧರಾ ಮತ್ತು ನಾರಾಯಣ ದಂಪತಿ ಇಬ್ಬರೂ ಊಟ, ತಿಂಡಿ, ವಾಯು ವಿಹಾರ ಹೀಗೆ ಎಲ್ಲ ಕೆಲಸದಲ್ಲಿಯೂ ಒಟ್ಟಿಗೇ ಇರುತ್ತಿದ್ದರು. ವಸುಂಧರಾ ಅವರು ವಯೋಸಹಜವಾಗಿ ಮಾನಸಿಕ ದುರ್ಬಲರಾಗಿದ್ದರು ಎಂದು ಸ್ಥಳಿಯರು ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಯಾವುದೇ ಅನುಮಾನಾಸ್ಪದ ಸನ್ನಿವೇಶಗಳು ಕಂಡು ಬಂದಿಲ್ಲ. ಪ್ರಕರಣ ದಾಖಲಾಗಿದೆ ಎಂದು ಖಡೇಬಜಾರ್ ಎಸಿಪಿ ಜಯಕುಮಾರ ತಿಳಿಸಿದ್ದಾರೆ.