ಆ್ಯಪ್ನಗರ

ಕೃಷ್ಣಾ ನದಿ ತೀರದ ಈ ಗ್ರಾಮದಲ್ಲಿ ಎಲ್ಲರಿಗೂ ಶುದ್ಧ ಕುಡಿವ ನೀರು

ಕಾಗವಾಡ: ಕಳೆದ ಎರಡು ತಿಂಗಳಿಂದ ಅಥಣಿ, ಕಾಗವಾಡ ...

Vijaya Karnataka 28 May 2019, 5:00 am
ಕಾಗವಾಡ : ಕಳೆದ ಎರಡು ತಿಂಗಳಿಂದ ಅಥಣಿ, ಕಾಗವಾಡ ತಾಲೂಕಿನ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾಗಿದೆ. ಆದರೆ, ನದಿ ತೀರದ ಶಿರಗುಪ್ಪಿ ಗ್ರಾಮದಲ್ಲಿ ಮಾತ್ರ ಕುಡಿಯುವ ನೀರಿಗೆ ಸ್ವಲ್ಪವೂ ಸಮಸ್ಯೆಯೇ ಇಲ್ಲ. ಎಲ್ಲರಿಗೂ ಶುದ್ಧ ನೀರು ಸಿಗುತ್ತಿದೆ. ಪಕ್ಕದ ಮಹಾರಾಷ್ಟ್ರ ರಾಜ್ಯದ ಕೆಲ ಹಳ್ಳಿಗಳ ಜನರೂ ಶಿರಗುಪ್ಪಿಯಿಂದ ಕುಡಿಯಲು ಶುದ್ಧ ನೀರು ಒಯ್ಯುವುದುಂಟು!
Vijaya Karnataka Web BEL-27 KAGWAD 1 A NEWS PHOTO


ಈ ಭಾಗದ ಜೀವನದಿ ಕೃಷ್ಣಾ ಬತ್ತಿದ್ದರಿಂದ ಬಹುತೇಕ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಜನ ಟ್ಯಾಂಕರ್‌ ನೀರಿಗೆ ಮೊರೆ ಹೋಗಿದ್ದಾರೆ. ಈ ನೀರು ಶುದ್ಧವಾಗಿರದೇ ಇದ್ದರೂ ಅನಿವಾರ್ಯವಾಗಿ ಕುಡಿಯುತ್ತಿದ್ದಾರೆ. ಹೀಗಿರುವಾಗ ಶಿರುಗುಪ್ಪಿ ಗ್ರಾಮದ ಚಿತ್ರಣವೇ ಬೇರೆ.

ಮಹಾರಾಷ್ಟ್ರ ಸರಕಾರ ರಾಜಾಪುರ ಜಲಾಶಯದಿಂದ ತನ್ನ ವ್ಯಾಪ್ತಿಯ ಗ್ರಾಮಗಳ ಜನರಿಗಾಗಿ ಕೃಷ್ಣಾ ನದಿಗೆ ಬೇಸಿಗೆಯಲ್ಲಿ ನಿರಂತರವಾಗಿ ನೀರು ಹರಿಸುತ್ತಿರುತ್ತದೆ. ಕೃಷ್ಣಾ ನದಿಗೆ ಒಂದು ದಂಡೆಯಲ್ಲಿ ಮಹಾರಾಷ್ಟ್ರದ ಹಳ್ಳಿಗಳು ಹಾಗೂ ಇನ್ನೊಂದು ಕಡೆ ಕರ್ನಾಟಕದ ಶಿರಗುಪ್ಪಿ ಸೇರಿದಂತೆ ಇತರ ಗ್ರಾಮಗಳಿವೆ. ಜಲಾಶಯದಿಂದ ಬಿಟ್ಟ ನೀರು ಮಂಗಾವತಿ ಮೂಲಕ ಜುಗೂಳ ಗ್ರಾಮದ ವರೆಗೆ ಬರುತ್ತದೆ. ಶಿರಗುಪ್ಪಿಗೆ ನೀರು ಪೂರೈಸುವ ಜಾಕ್‌ವೆಲ್‌ ಜುಗೂಳ ಗ್ರಾಮದಲ್ಲಿದ್ದು ಹೀಗಾಗಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಿಗುತ್ತದೆ.

ಪ್ರತಿದಿನ ಸುಮಾರು 50 ಲಕ್ಷ ಲೀಟರ್‌ ನೀರನ್ನು ಶುದ್ಧೀಕರಿಸಿ ಶಿರಗುಪ್ಪಿ ಗ್ರಾಮಕ್ಕೆ ಪೂರೈಕೆ ಮಾಡಲಾಗುತ್ತದೆ. ಅಲ್ಲದೇ ಸಮೀಪದ ಮಾಂಜರಿ, ಇಂಗಳಿ, ಯಡೂರ, ಕಾಗವಾಡ, ಶೇಡಬಾಳ, ಉಗಾರ ಹಾಗೂ ಮಹಾರಾಷ್ಟ್ರದ ಅಲಾಸ, ಬುಬನಾಳ, ಶಿರೋಳ, ಸೇರಿದಂತೆ ಅನೇಕ ಗ್ರಾಮದ ಜನರು ಇಲ್ಲಿಂದ ಶುದ್ಧ ನೀರು ಒಯ್ಯುತ್ತಾರೆ. 20 ಲೀ. ಕ್ಯಾನ್‌ಗೆ 30 ರೂ. ನಿಗದಿ ಪಡಿಸಲಾಗಿದೆ. ಈ ನೀರು ಶುದ್ಧವಾಗಿರುವುದಲ್ಲದೇ ಕೋಲ್ಡ್‌ ಆಗಿರುವುದು ವಿಶೇಷ.

''ಕೃಷ್ಣಾ ನದಿಯಿಂದ ಪಂಪ್‌ಸೆಟ್‌ ಮೂಲಕ ನೀರೆತ್ತಿ ನೀರನ್ನು ಶುದ್ಧೀಕರಿಸಲಾಗುತ್ತದೆ. ಜರ್ಮನ್‌ ದೇಶದಲ್ಲಿ ನಿರ್ಮಿಸಿದ ನೀರಿನ ಶುದ್ಧೀಕರಣ ಘಟಕ ಸ್ಥಾಪಿಸಲಾಗಿದ್ದು, ಇಂದು ಸಂಪೂರ್ಣ ಆಟೋಮೆಟಿಕ್‌ ತಂತ್ರಜ್ಞಾನ ಹೊಂದಿದೆ'' ಎಂದು ಗ್ರಾಮ ಪಂಚಾಯಿತಿ ಸದಸ್ಯ ರಾಮಗೌಡ ಪಾಟೀಲ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ