ಆ್ಯಪ್ನಗರ

ನನ್ನ ಮಾತು ಕೇಳದಿದ್ದಕ್ಕೆ ಸಮ್ಮಿಶ್ರ ಸರಕಾರ ಪತನ

ಅಥಣಿ : ''ನನ್ನ ಮಾತು ಕೇಳದಿರುವುದಕ್ಕೆ ಸಮ್ಮಿಶ್ರ ಸರಕಾರ ಪತನವಾಯ್ತು ...

Vijaya Karnataka 29 Jul 2019, 5:00 am
ಅಥಣಿ : ''ನನ್ನ ಮಾತು ಕೇಳದಿರುವುದಕ್ಕೆ ಸಮ್ಮಿಶ್ರ ಸರಕಾರ ಪತನವಾಯ್ತು. ಸುಮಾರು ಮೂರು ತಿಂಗಳಿಗಿಂತ ಮೊದಲೇ ನನಗೆ ಈ ವಿಷಯ ತಿಳಿದು ಪಕ್ಷ ದ ಹೈಕಮಾಂಡ್‌ಗೆ ತಿಳಿಸುತ್ತಾ ಬಂದಿದ್ದು, ಇದೀಗ ನಿಜವಾಗಿದೆ'' ಎಂದು ಮಾಜಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.
Vijaya Karnataka Web BEL-28 ATHANI-03


ಸ್ಥಳೀಯ ಪ್ರವಾಸಿಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಗೆ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ''ಅಪರೇಶನ್‌ ಕಮಲದ ಬಗ್ಗೆ ನನಗೆ ಮೊದಲೇ ಗೊತ್ತಿತ್ತು. ಅದನ್ನು ಹೈಕಮಾಂಡ್‌ಗೆ ತಿಳಿಸಿದರೂ ಗಂಭೀರವಾಗಿ ಪರಿಗಣಿಸಲಿಲ್ಲ. ಅಪರೇಶನ್‌ ಕಮಲ ಬಿಜಿಪಿಗೇ ಮುಳವಾಗಲಿದೆ. ಈ ಸರಕಾರಕ್ಕೆ ಬಹಳ ದಿನ ಆಯುಷ್ಯವಿಲ್ಲ'' ಎಂದರು.

''ಆಪರೇಶನ್‌ ಕಮಲದ ಹಿಂದೆ ಮಾಜಿ ಮುಖ್ಯಮಂತ್ರಿಗಳ ಕೈವಾಡವಿದೆ ಎಂದು ಹೇಳುತ್ತಿರುವುದು ಸರಿಯಲ್ಲ. ಆಪರೇಶನ್‌ ಕಮಲವನ್ನು ನಾಲ್ಕು ಭಾಗಗಳಲ್ಲಿ ಮಾಡಿದ್ದಾರೆ. ಒಂದು ರಮೇಶ ಜಾರಕಿಹೊಳಿ, ಎರಡನೆಯದು ಬೆಂಗಳೂರಿನ ಶಾಸಕರ ಗುಂಪು, ಮೂರನೆಯದು ಜೆಡಿಎಸ್‌ ಶಾಸಕರ ಗುಂಪು, ನಾಲ್ಕನೆಯದು ಬಳ್ಳಾರಿಯ ಒಂದು ಗುಂಪು. ಹೀಗೆ ನಾಲ್ಕು ಗುಂಪುಗಳಲ್ಲಿ ಆಪರೇಶನ್‌ ಕಮಲ ನಡೆಸಿದ್ದಾರೆ'' ಎಂದು ಅವರು ಸ್ಪಷ್ಟಪಡಿಸಿದರು.

ಆಪರೇಶನ್‌ ಕಮಲಕ್ಕೆ ರಮೇಶ್‌ ಮುನ್ನುಡಿ: ''ಆಪರೇಶನ್‌ ಕಮಲಕ್ಕೆ ಮುನ್ನುಡಿ ಬರೆದಿದ್ದೇ ರಮೇಶ ಜಾರಕಿಹೊಳಿ. ಕಳೆದ ಒಂದು ವರ್ಷದಿಂದ ಅದೇ ದಾರಿಯಲ್ಲಿ ಸಾಗಿದ್ದರು. ಆದರೆ, ಅಥಣಿ ಶಾಸಕರು ನನ್ನ ಮತ್ತು ರಮೇಶ ಜಾರಕಿಹೊಳಿ ಇಬ್ಬರ ನಾಯಕತ್ವ ಒಪ್ಪಿದ್ದರು. ಕೊನೆಯ ಕ್ಷ ಣದಲ್ಲಿ ಯಾವುದೋ ಒತ್ತಡಕ್ಕೆ ಮಣಿದು ಹೋಗಿದ್ದಾರೆ. ಅವರನ್ನು ಸಂಧಾನ ಮಾಡಿ ಇರುವ ಇಚ್ಛೆ ಇತ್ತು. ಕಾಗವಾಡ ಶಾಸಕರು ಅತೃಪ್ತರೊಂದಿಗೆ ಹೋಗಿರುವುದೇ ಆಶ್ಚರ್ಯ. ಅವರು ಹೋಗುವ ಮನಸ್ಥಿತಿಯಲ್ಲಿ ಇರಲಿಲ್ಲ'' ಎಂದು ಸತೀಶ್‌ ಹೇಳಿದರು.

ಡಿಕೆಶಿ ಜತೆ ಭಿನ್ನಾಭಿಪ್ರಾಯವಿಲ್ಲ: ''ನನ್ನ ಮತ್ತು ಡಿ.ಕೆ.ಶಿವಕುಮಾರ ಅವರ ಮಧ್ಯ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಜಿಲ್ಲೆಯ ಉಪಚುನಾವಣೆಯಲ್ಲಿ ಇಬ್ಬರೂ ಕೂಡಿ ಕೆಲಸ ಮಾಡಿ ಎಂದು ಹೈಕಮಾಂಡ್‌ ಸೂಚಿಸಿದರೆ ಅವರೊಂದಿಗೆ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಎಲ್ಲ ಅಭ್ಯರ್ಥಿಗಳನ್ನು ಗೆಲ್ಲಿಸಿ ತೋರಿಸುತ್ತೇವೆ'' ಎಂದು ಸತೀಶ್‌ ಜಾರಕಿಹೊಳಿ ತಿಳಿಸಿದರು.

ಮಾಜಿ ಸಚಿವ ವೀರಕುಮಾರ ಪಾಟೀಲ, ಗಜಾನನ ಮಂಗಸೂಳಿ, ಲಕ್ಷ ್ಮಣರಾವ ಚಿಂಗಳೆ, ಜಿಪಂ ಮಾಜಿ ಸದಸ್ಯ ಬಸವರಾಜ ಬುಟಾಳಿ, ಧರೆಪ್ಪ ಠಕ್ಕಣ್ಣವರ, ಸುನಿಲ ಸಂಕ, ಶಿವಾನಂದ ಗುಡ್ಡಾಪುರ, ನಿಶಾಂತ ದಳವಾಯಿ, ತೌಸಿಫ್‌ ಸಾಂಗಲೀಕರ ಮತ್ತಿತರರು ಉಪಸ್ಥಿತರಿದ್ದರು.

ಉಪಚುನಾವಣೆಗೆ ಸಜ್ಜಾಗಿ:
''ಉಪಚುನಾವಣೆ ಯಾವ ಸಂದರ್ಭದಲ್ಲಿ ಬೇಕಾದರೂ ಬರಬಹುದು. ಅದಕ್ಕಾಗಿ ತಾಲೂಕಿನ ಎಲ್ಲರೂ ಚುನಾವಣೆ ಎದುರಿಸಲು ಸಿದ್ಧರಾಗಿ ಎಂದು ಸತೀಶ್‌ ಜಾರಕಿಹೊಳಿ ಹೇಳಿದರು. ಎಲ್ಲ ಮುಖಂಡರು ಸೇರಿ ಪಕ್ಷ ದ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮಿಸಬೇಕು. ಅಭ್ಯರ್ಥಿ ಯಾರು ಆಗಬೇಕು ಎಂದು ಇನ್ನೂ ತೀರ್ಮಾನವಾಗಿಲ್ಲ. ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿ ಆಯ್ಕೆ ಮಾಡಲಾಗುವುದು'' ಎಂದರು.

ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಶಾಸಕರನ್ನು ಸ್ಪೀಕರ್‌ ಅನರ್ಹಗೊಳಿಸಿರುವುದು ಸ್ವಾಗತಾರ್ಹ. ಈ ಕ್ರಮ ಪ್ರಜಾಪ್ರಭುತ್ವಕ್ಕೆ ಸಂದ ಜಯ. ಇನ್ನು ಮುಂದೆ ಪಕ್ಷಾಂತರ ಮಾಡುವವರಿಗೆ ಇದು ತಕ್ಕ ಪಾಠವಾಗಲಿದೆ.
-ಸತೀಶ್‌ ಜಾರಕಿಹೊಳಿ, ಮಾಜಿ ಸಚಿವ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ