ಆ್ಯಪ್ನಗರ

ಕಬ್ಬಿನ ದರ ನಿಗದಿಗೆ ರೈತರ ಆಗ್ರಹ: ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ

ಘಟಪ್ರಭಾ: ಕಬ್ಬಿನ ದರ ನಿಗದಿ ...

Vijaya Karnataka 12 Nov 2018, 5:00 am
ಘಟಪ್ರಭಾ : ಕಬ್ಬಿನ ದರ ನಿಗದಿ ಮಾಡುವವರೆಗೆ ಯಾವುದೇ ಸಕ್ಕರೆ ಕಾರ್ಖಾನೆ ಕಬ್ಬು ನುರಿಸಬಾರದು ಎಂದು ಆಗ್ರಹಿಸಿ ಕಬ್ಬು ಬೆಳೆಗಾರರು ಭಾನುವಾರ ಗೋಕಾಕ ತಾಲೂಕಿನ ಸಂಗನಕೇರಿ ಸರ್ಕಲ್‌ನಲ್ಲಿ ಮೂರು ಗಂಟೆ ಕಾಲ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಿದರು.
Vijaya Karnataka Web BEL-11GPB-1


ದರ ನಿಗದಿ ಕುರಿತು ಕೂಡಲೇ ಮುಖ್ಯಮಂತ್ರಿಗಳು ಮಧ್ಯಸ್ಥಿಕೆ ವಹಿಸಬೇಕು. ನ.15ರಂದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಹಮ್ಮಿಕೊಂಡಿರುವ ಕಬ್ಬು ಬೆಳೆಗಾರರ ಬೃಹತ್‌ ಪ್ರತಿಭಟನೆಗೆ ಮುನ್ನ ಕಾರ್ಖಾನೆ ಮಾಲೀಕರು ದರ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ರಾಜ್ಯ ಕಬ್ಬು ಬೆಳೆಗಾರರ ಸಲಹಾ ಸಮಿತಿ ಸದಸ್ಯ ಚೂನಪ್ಪ ಪೂಜೇರಿ ಮಾತನಾಡಿ, ಕಬ್ಬಿಗೆ ದರ ನಿಗದಿ ಮಾಡಲು ಜಿಲ್ಲಾಡಳಿತ ವಿಫಲವಾಗಿದೆ. ದರ ನಿಗದಿ ಆಗುವ ತನಕ ರೈತರು ಕಬ್ಬು ಕಟಾವು ನಿಲ್ಲಿಸಬೇಕು. ಕಾರ್ಖಾನೆಗೆ ಕಬ್ಬು ಕಳುಹಿಸಬಾರದು ಎಂದರು. 15ರಿಂದ ಬೆಳಗಾವಿಯಲ್ಲಿ ನಡೆಯುವ ಪ್ರತಿಭಟನೆಗೆ ರಾಜ್ಯದ ಎಲ್ಲ ರೈತ ಮುಖಂಡರು, ಕಬ್ಬು ಬೆಳೆಗಾರರು ಆಗಮಿಸುತ್ತಿದ್ದು, ದರ ನಿಗದಿ ಮಾಡುವವರೆಗೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಸಿದರು.

ರೈತ ಮುಖಂಡ ಸತೀಶ ವಂಟಗೂಡೆ ಮಾತನಾಡಿ, ಸಕ್ಕರೆ ಕಾರ್ಖಾನೆ ಮಾಲೀಕರು ನಾಲ್ಕು ಪಟ್ಟು ಲಾಭ ಮಾಡಿಕೊಂಡರೂ ರೈತರ ಕಬ್ಬಿಗೆ ಸರಿಯಾದ ಬಿಲ್‌ ಕೊಡದೆ ವಂಚಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್‌ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ ಸೋನವಾಲ್ಕರ ಮಾತನಾಡಿ, ಎಸ್‌ಎಪಿ ಕಾನೂನಿನ ಪ್ರಕಾರ ದರ ನಿಗದಿ ಮಾಡದೆ ಯಾವುದೇ ಕಾರ್ಖಾನೆಗಳು ಕಬ್ಬು ನುರಿಸಲು ಪ್ರಾರಂಭಿಸಬಾರದು. ಟನ್‌ ಕಬ್ಬಿಗೆ 3 ಸಾವಿರ ರೂ.ಗಿಂತ ಹೆಚ್ಚಿನ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾಕಾರರು ಅರಬಾವಿ ನಾಡಕಚೇರಿಯ ಉಪತಹಸೀಲ್ದಾರ ಎಲ್‌.ಎಚ್‌. ಭೋವಿ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಲಖನ್‌ ಸಂಸುದ್ದಿ, ಶಿವನಗೌಡ ಗೌಡರ, ಈರಣ್ಣ ಕೊಣ್ಣೂರು, ಪರಪ್ಪ ಕಾಡಡಿ, ಪಾಂಡು ಬೀರನಗಡ್ಡಿ, ಶಿಲ್ಪಗೌಡರ, ಪಿ.ಎಂ. ಪಾಟೀಲ, ಈರಣ್ಣ ಸಸಾಲಿಟಿ, ಶ್ರೀಶೈಲ ಅಂಗಡಿ, ಗುರುನಾಥ ಹುಕ್ಕೇರಿ ಸೇರಿದಂತೆ ನೂರಾರು ಕಬ್ಬು ಬೆಳೆಗಾರರು, ರೈತ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಯಾಣಿಕರಿಗೆ ತೊಂದರೆ : ರಸ್ತೆ ತಡೆ ಪ್ರತಿಭಟನೆಯಿಂದಾಗಿ ಪ್ರಯಾಣಿಕರು ತುಂಬಾ ತೊಂದರೆ ಅನುಭವಿಸಿದರು. ಕಬ್ಬು ತುಂಬಿಕೊಂಡು ಸಕ್ಕರೆ ಕಾರ್ಖಾನೆಗಳಿಗೆ ತೆರಳುತ್ತಿದ್ದ ಟ್ರ್ಯಾಕ್ಟ್ರ್‌ಗಳು ನಿಂತಲ್ಲೇ ನಿಂತಿದ್ದರಿಂದ ಟ್ರಾಫಿಕ್‌ ಸಮಸ್ಯೆ ಉಂಟಾಯಿತು. ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ