ಆ್ಯಪ್ನಗರ

ಮುಂಗಾರು ಬಿತ್ತನೆಗೆ ಅಣಿಯಾದ ಅನ್ನದಾತ

ಮಲ್ಲಿಕಾರ್ಜುನರಡ್ಡಿ ಗೊಂದಿ ರಾಮದುರ್ಗ ಮುಂಗಾರು ಮಳೆಯ ಆಗಮನದ ...

Vijaya Karnataka 30 May 2018, 5:00 am
ಮಲ್ಲಿಕಾರ್ಜುನರಡ್ಡಿ ಗೊಂದಿ ರಾಮದುರ್ಗ
Vijaya Karnataka Web BEL-29RD1


ಮುಂಗಾರು ಮಳೆಯ ಆಗಮನದ ನಿರೀಕ್ಷೆಯಲ್ಲಿ ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳು ಭರದಿಂದ ಸಾಗಿವೆ. ರೈತರು ಹೊಲಗದ್ದೆಗಳನ್ನು ಹಸನುಗೊಳಿಸಿ ಮುಂಗಾರು ಬೆಳೆಗಳ ಬಿತ್ತನೆಗೆ ತಯಾರಾಗುತ್ತಿದ್ದಾರೆ.

ಕಳೆದ ಐದು ವರ್ಷಗಳಿಂದ ಮುಂಗಾರು ಹಾಗೂ ಹಿಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದು, ಬರಗಾಲದ ಬವಣೆಯಿಂದ ಬಸವಳಿದಿರುವ ರೈತರಿಗೆ ಈ ಬಾರಿ ಹವಾಮಾನ ಇಲಾಖೆಯು ಮುಂಗಾರು ಮಳೆ ಉತ್ತಮ ರೀತಿಯಲ್ಲಿ ಆಗುವ ಮುನ್ಸೂಚನೆ ನೀಡಿರುವುದು ಸ್ಪಲ್ಪಮಟ್ಟಿನ ಸಂತಸ ಮೂಡಿಸಿದೆ.

ತಾಲೂಕು 1,21,542 ಹೆಕ್ಟೇರ್‌ ಭೌಗೋಳಿಕ ವಿಸ್ತೀರ್ಣ ಹೊಂದಿದ್ದು, 96,117 ಹೆಕ್ಟೇರ್‌ ಭೂ ಪ್ರದೇಶ ಸಾಗುವಳಿಯಾಗುತ್ತಿದೆ. 25,425 ಹೆಕ್ಟೇರ್‌ ಸಾಗುವಳಿ ರಹಿತ ಭೂಮಿ ಹೊಂದಿದ್ದು, ಅದರಲ್ಲಿ ಬಹುಪಾಲು ಅರಣ್ಯ ಪ್ರದೇಶವಿದೆ. ತಾಲೂಕಿನಲ್ಲಿ 5,268 ಹೆಕ್ಟೇರ್‌ ಭೂಮಿ ಕಾಲುವೆಯಿಂದ, 267 ಹೆಕ್ಟೇರ್‌ ಕೆರೆಯಿಂದ, 4547 ಹೆಕ್ಟೇರ್‌ ಬಾವಿಯಿಂದ, 3724 ಹೆಕ್ಟೇರ್‌ ಕೊಳವೆ ಬಾವಿಯಿಂದ, 79 ಹೆಕ್ಟೇರ್‌ ಏತ ನೀರಾವರಿಯಿಂದ, 5427 ಹೆಕ್ಟೇರ್‌ ಇತರ ಮೂಲಗಳಿಂದ ಹೀಗೆ ಒಟ್ಟು 19,312 ಹೆಕ್ಟೇರ್‌ ಭೂಮಿ ನೀರಾವರಿಯಾಗುತ್ತಿದೆ. ಉಳಿದ ಭೂಮಿ ಸಂಪೂರ್ಣ ಮಳೆಯನ್ನು ಆಶ್ರಯಿಸಿದೆ.

ಮಳೆ ಪ್ರಮಾಣ: ಪೂರ್ವ ಮುಂಗಾರು ಹಂಗಾಮಿನ ಮೇ ಅಂತ್ಯಕ್ಕೆ 100.8 ಮಿಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ ಇಲ್ಲಿಯವರೆಗೆ 80.5 ಮಿಮೀ ಮಳೆಯಾಗಿದೆ. ಒಟ್ಟು ಮುಂಗಾರು ಮಳೆ ಪ್ರಮಾಣ ಸರಾಸರಿ 562.5 ಮಿಮೀ ಮಳೆ ಆಗುವ ನಿರೀಕ್ಷೆ ಇದೆ.

ಬಿತ್ತನೆ ಪ್ರಮಾಣ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 52,400 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿದ್ದು, ಈಗ ಒಟ್ಟು 13,400 ಹೆಕ್ಟೇರ್‌ ಬಿತ್ತನೆಯಾಗಿದೆ. ಮುಂಗಾರು ಪ್ರಮುಖ ಬೆಳೆಗಳಾದ ಹೆಸರು, ಸಜ್ಜೆ, ಗೋವಿನಜೋಳ, ತೊಗರಿ, ಹುರುಳಿ, ಶೇಂಗಾ, ಸೂರ್ಯಕಾಂತಿ ಬೆಳೆಗಳ ಬಿತ್ತನೆಯ ಕೆಲಸ ಜೋರಾಗಿ ನಡೆದಿದೆ.

ಬೀಜ, ಗೊಬ್ಬರ ದಾಸ್ತಾನು: ಮುಂಗಾರು ಮಳೆ ಉತ್ತಮ ಆಗುವ ನಿರೀಕ್ಷೆ ಇದ್ದ ಕಾರಣ ರೈತರಿಗೆ ಕೊರತೆಯಾಗದಂತೆ ಅಗತ್ಯ ಬೀಜ, ಗೊಬ್ಬರ ದಾಸ್ತಾನು ಮಾಡಲಾಗಿದೆ. ಈಗಾಗಲೇ ಖಾಸಗಿ ಹಾಗೂ ಪಿಕೆಪಿಎಸ್‌ ಸೊಸೈಟಿ ಸೇರಿದಂತೆ 474 ಟನ್‌ ಯೂರಿಯಾ, 254 ಟನ್‌ ಡಿಎಪಿ, 192 ಟನ್‌ ಎಂಒಪಿ ಹಾಗೂ 467 ಟನ್‌ ಕಾಂಪ್ಲೆಕ್ಸ್‌ ಗೊಬ್ಬರ ದಾಸ್ತಾನು ಮಾಡಲಾಗಿದೆ. 802.5 ಕ್ವಿಂಟಲ್‌ ಗೋವಿನ ಜೋಳದ ಬೀಜ, 220.8 ಕ್ವಿಂ. ಹೆಸರು, 6.3 ಕ್ವಿಂ. ಜೋಳ, 138.35 ಕ್ವಿಂ. ಸಜ್ಜೆ, 65.1 ಕ್ವಿಂ, ಸೂರ್ಯಕಾಂತಿ ಬೀಜ ದಾಸ್ತಾನು ಮಾಡಲಾಗಿದೆ.


ರಾಮದುರ್ಗ ತಾಲೂಕಿನಲ್ಲಿ ಕಳೆದ ಐದು ವರ್ಷಗಳ ಭೀಕರ ಬರಗಾಲದಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದರು. ಈ ವರ್ಷ ಉತ್ತಮ ಮಳೆಯಾಗುವ ಲಕ್ಷ ಣಗಳು ಗೋಚರಿಸುತ್ತಿವೆ. ಅಗತ್ಯ ಬೀಜ, ಗೊಬ್ಬರ ದಾಸ್ತಾನು ಮಾಡಲಾಗಿದೆ. ರೈತರಿಗೆ ಸರಕಾರ ನೀಡಿದ ರಿಯಾಯಿತಿ ದರದಲ್ಲಿ ಬೀಜ, ಗೊಬ್ಬರ ಮಾರಾಟ ಮಾಡಿ, ರಸೀದಿ ನೀಡುವಂತೆ ಖಾಸಗಿ ವ್ಯಾಪಾರಸ್ಥರಿಗೆ ಸೂಚಿಸಲಾಗಿದೆ. ಒಂದು ವೇಳೆ ಹೆಚ್ಚು ಹಣ ಪಡೆದರೆ ಕ್ರಮ ಕೈಗೊಳ್ಳಲಾಗುವುದು.
-ಆರ್‌.ಡಿ.ಕಟಗಲ್ಲ, ಸಹಾಯಕ ಕೃಷಿ ನಿರ್ದೇಶಕ, ರಾಮದುರ್ಗ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ