ಆ್ಯಪ್ನಗರ

ಪ್ರವಾಹ ಸಂತ್ರಸ್ತರ ಪರ ಸಿಡಿದೆದ್ದ ರೈತರು

ಪ್ರವಾಹ ಸಂತ್ರಸ್ತರ ಪರ ಸಿಡಿದೆದ್ದ ರೈತರು ...

Vijaya Karnataka 17 Sep 2019, 5:00 am
ಬೆಳಗಾವಿ: ಪ್ರವಾಹ ಸಂತ್ರಸ್ತರಿಗೆ ಪರಿಹಾರ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದ ಚನ್ನಮ್ಮ ವೃತ್ತದಲ್ಲಿರಸ್ತೆ ತಡೆದು, ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
Vijaya Karnataka Web 16 LBS 16 _53


ನಗರದ ಅಶೋಕ ವೃತ್ತದಿಂದ ಚನ್ನಮ್ಮ ವೃತ್ತದವರೆಗೆ ಬಾರಕೋಲು ಚಳವಳಿ ನಡೆಸುವ ಮೂಲಕ 200ಕ್ಕೂ ಹೆಚ್ಚು ರೈತರು ಪ್ರತಿಭಟನೆ ನಡೆಸಿದರು. ನಂತರ ಚನ್ನಮ್ಮ ವೃತ್ತದಲ್ಲಿಪ್ರತಿಭಟನಾಕಾರರು ಮೂರು ಗಂಟೆಗಳ ಕಾಲ ರಸ್ತೆ ತಡೆ ನಡೆಸಿ, ಕೇಂದ್ರ ಮತ್ತು ರಾಜ್ಯ ಸರಕಾರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಹಿರಣ್ಯಕೇಶಿ ಹಾಗೂ ಬಳ್ಳಾರಿ ನಾಲಾ ಪ್ರವಾಹದಿಂದ ಬೆಳೆಗಳು ಕೊಚ್ಚಿ ಹೋಗಿವೆ. 1 ಲಕ್ಷಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಆದರೆ, ಕೇಂದ್ರ ಮತ್ತು ರಾಜ್ಯ ಸರಕಾರ ಸೂಕ್ತ ಪರಿಹಾರ ನೀಡುತ್ತಿಲ್ಲ. ಪರಿಹಾರ ನೀಡುವಲ್ಲಿವಿಳಂಬವಾಗುತ್ತಿದೆ ಎಂದು ದೂರಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಮುಂದಾಗಬೇಕು. ಪ್ರತಿ ಎಕರೆ ಕಬ್ಬಿನ ಬೆಳೆಗೆ 1.50 ಲಕ್ಷ ರೂ. ಹಾಗೂ ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳಿಗೆ 1 ಲಕ್ಷ ರೂ., ತೋಟಗಾರಿಕೆ ಬೆಳೆಗಳಿಗೆ 2 ಲಕ್ಷ ರೂ. ಪರಿಹಾರ ನೀಡಬೇಕು. ಮನೆ ಕಳೆದುಕೊಂಡವರಿಗೆ 15 ಲಕ್ಷ ರೂ., ಮನೆ ಹಾನಿಗೆ 10 ಲಕ್ಷ ರೂ., ಮೃತಪಟ್ಟವರ ಕುಟುಂಬಕ್ಕೆ 15 ಲಕ್ಷ ರೂ., ಬೆಳೆ, ಹೈನುಗಾರಿಕೆ, ಟ್ರ್ಯಾಕ್ಟರ್‌ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಬೇಕು. ಮಹಿಳಾ ಸ್ವ-ಸಹಾಯ ಸಂಘ ಹಾಗೂ ಮೈಕ್ರೋ ಫೈನಾನ್ಸ್‌ಗಳಲ್ಲಿನ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಮಾತಿನ ಚಕಮಕಿ: ಚನ್ನಮ್ಮ ವೃತ್ತದಲ್ಲಿಪ್ರತಿಭಟನೆ ನಡೆಸಿದ ರೈತರು ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಕೆಲ ಹೊತ್ತು ಗದ್ದಲದ ವಾತಾವರಣ ನಿರ್ಮಾಣವಾಯಿತು. ನಂತರ ಪೊಲೀಸರು ರೈತರನ್ನು ತಡೆದು ಪರಿಸ್ಥಿತಿ ನಿಯಂತ್ರಿಸಿದರು.

ರೈತ ಮುಖಂಡರಾದ ಚೂನಪ್ಪ ಪೂಜಾರಿ, ರಾಘವೇಂದ್ರ ನಾಯಕ, ಮಂಜು ಗದಾಡಿ, ಜಾವೀದ್‌ ಮುಲ್ಲಾ, ಮಲ್ಲಪ್ಪ್ಪ ಅಂಗಡಿ, ಅಶೋಕ ಯಮಕನಮರಡಿ ಮತ್ತಿತರರು ಉಪಸ್ಥಿತರಿದ್ದರು.

ಸಂಚಾರ ಅಸ್ತವ್ಯಸ್ತ: ರೈತರು ಏಕಾಏಕಿ ಚನ್ನಮ್ಮ ವೃತ್ತದ ರಸ್ತೆಗಳನ್ನು ತಡೆದು ಪ್ರತಿಭಟನೆ ನಡೆಸಿದ್ದರಿಂದ ಗಂಟೆಗೂ ಹೆಚ್ಚು ಕಾಲ ನಾಲ್ಕು ಕಡೆಯ ರಸ್ತೆಗಳಲ್ಲಿವಾಹನಗಳು ನಿಲುಗಡೆಯಾಗಿದ್ದವು. ರಸ್ತೆಯಲ್ಲಿಗಂಟೆವರೆಗೂ ಕಾಲಕಳೆದ ವಾಹನ ಸವಾರರು ನಂತರ ಬೇರೊಂದು ಮಾರ್ಗದ ಮೂಲಕ ತೆರಳಿದರು.

ಜನಪ್ರತಿನಿಧಿಗಳ ಹೆಸರಲ್ಲಿ ಚಪ್ಪಲಿ ಹರಾಜು
ಬೆಳಗಾವಿ: ಪ್ರವಾಹದಿಂದ ತತ್ತರಿಸಿರುವ ಉತ್ತರ ಕರ್ನಾಟಕಕ್ಕೆ ಕೇಂದ್ರ ಸರಕಾರ ಬಿಡಿಗಾಸು ಸಹ ಬಿಡುಗಡೆ ಮಾಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ ರೈತರು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಜನಪ್ರತಿನಿಧಿಗಳ ಹೆಸರಲ್ಲಿಚಪ್ಪಲಿ ಹರಾಜು ಹಾಕಿ ವಿನೂತನವಾಗಿ ಪ್ರತಿಭಟಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಪ್ರತಿಭಟಿಸಿದ ರೈತರು, ತಮ್ಮ ಚಪ್ಪಲಿಗಳನ್ನು ಜನಪ್ರತಿನಿಧಿಗಳ ಹೆಸರಿನಲ್ಲಿಹರಾಜು ಹಾಕಿದರು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಸುರೇಶ್‌ ಅಂಗಡಿ, ಸಂಸದ ಅನಂತ್‌ಕುಮಾರ ಹೆಗಡೆ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಎಚ್‌.ಡಿ. ರೇವಣ್ಣ ಹಾಗೂ ಶಾಸಕರ ಹೆಸರಲ್ಲಿಚಪ್ಪಲಿ ಹರಾಜು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ರೈತ ಮುಖಂಡರಾದ ಜಯಶ್ರೀ ಗುರನ್ನವರ ಕೈಯಲ್ಲಿಚಪ್ಪಲಿ ಹಿಡಿದು ಜನಪ್ರತಿನಿಧಿಗಳ ಹೆಸರು ಕೂಗಿ ಸವಾಲು ಹಾಕಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ