ಆ್ಯಪ್ನಗರ

ಲಂಚ ಪಡೆದ ಎಫ್‌ಡಿಎಗೆ 4 ವರ್ಷ ಜೈಲು

ಬೆಳಗಾವಿ: ಗಿಡ ಕಟಾವು ಮಾಡುವ ಅನುಮತಿ ಅರ್ಜಿಗೆ ಶಿಫಾರಸ್ಸು ಮಾಡಲು ಲಂಚ ಪಡೆದ ಜಿಲ್ಲಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕನಿಗೆ ಇಲ್ಲಿನ 4ನೇ ಅಧಿಕ ಜಿಲ್ಲಾ ...

Vijaya Karnataka 5 Jun 2019, 5:00 am
ಬೆಳಗಾವಿ : ಗಿಡ ಕಟಾವು ಮಾಡುವ ಅನುಮತಿ ಅರ್ಜಿಗೆ ಶಿಫಾರಸ್ಸು ಮಾಡಲು ಲಂಚ ಪಡೆದ ಜಿಲ್ಲಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕನಿಗೆ ಇಲ್ಲಿನ 4ನೇ ಅಧಿಕ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯ ದಂಡ ಸಹಿತ ನಾಲ್ಕು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಮಂಗಳವಾರ ತೀರ್ಪು ನೀಡಿದೆ.
Vijaya Karnataka Web fda who received bribe imprisoned for 4 years
ಲಂಚ ಪಡೆದ ಎಫ್‌ಡಿಎಗೆ 4 ವರ್ಷ ಜೈಲು


ಜಿಲ್ಲಾಧಿಕಾರಿ ಕಚೇರಿಯ ಕಂದಾಯ ವಿಭಾಗದಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ, ಮೂಲತಃ ರಾಯಬಾಗ ಪಟ್ಟಣದ ಸಂತೋಷಕುಮಾರ ಭಗವಂತ ಕಾಂಬಳೆ ಶಿಕ್ಷೆಗೆ ಗುರಿಯಾದ ಅಧಿಕಾರಿ. ಖಾನಾಪುರ ತಾಲೂಕಿನ ಹಿರೇಮುನವಳ್ಳಿಯ ಬಾಹುಬಲಿ ಅರ್ಜುನ ಪಾಟೀಲ ತಮ್ಮ ಪುತ್ರನ ಹೆಸರಿನಲ್ಲಿರುವ ಜಮೀನಿನಲ್ಲಿನ ಸಾಗವಾನಿ ಗಿಡ ಕಟಾವು ಮಾಡುವ ಕುರಿತು ಖಾನಾಪುರ ತಹಸೀಲ್ದಾರ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ಮುಂದಿನ ಕ್ರಮಕ್ಕಾಗಿ ಬೆಳಗಾವಿಯ ಉಪವಿಭಾಗಾಧಿಕಾರಿ ಕಚೇರಿ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಹಸ್ತಾಂತರಿಸಲಾಗಿತ್ತು.

ಅರ್ಜಿ ವಿಲೇವಾರಿಗೆ ಆಪಾದಿತ ಅಧಿಕಾರಿ 4000 ರೂ.ಲಂಚದ ಬೇಡಿಕೆ ಇಟ್ಟಿದ್ದರು. 2015ರ ಜ.19ರಂದು 3000 ರೂ.ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದರು. ಈ ಕುರಿತು ಅಂದಿನ ಲೋಕಾಯುಕ್ತ ಪೊಲೀಸ್‌ ಉಪಾಧೀಕ್ಷಕ ಜಿ.ಆರ್‌.ಪಾಟೀಲ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಉಪಾಧೀಕ್ಷಕ ಆರ್‌.ಆರ್‌.ಅಂಬಡಗಟ್ಟಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 4ನೇ ಅಧಿಕ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯ ಲಂಚ ಪ್ರತಿಬಂಧಕ ಕಾಯಿದೆ ಅಡಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಂಗಳವಾರ 13 ಸಾವಿರ ದಂಡ ಮತ್ತು ನಾಲ್ಕು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕರಾದ ಕೆ.ಆರ್‌. ಎಕ್ಸಂಬಿ ಹಾಗೂ ಪ್ರವೀಣ ಅಗಸಗಿ ವಾದ ಮಂಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ