ಆ್ಯಪ್ನಗರ

ಶಾಂತಿನಗರ ಸರ್ಕಲ್‌ ಶಾಲೆಯಲ್ಲಿ 50 ವರ್ಷದಿಂದ ನಡೆದಿಲ್ಲ ಧ್ವಜಾರೋಹಣ

ಬೋರಗಾಂವ: ಎಲ್ಲ ಶಾಲೆಗಳಲ್ಲಿ ರಾಷ್ಟ್ರೀಯ ಹಬ್ಬಗಳಂದು ತಳಿರು ತೋರಣ, ರಂಗುರಂಗಿನ ರಂಗೋಲಿ, ವಿದ್ಯಾರ್ಥಿಗಳ ಶಿಸ್ತಿನ ಪಾಲ್ಗೊಳ್ಳುವಿಕೆಯಿಂದ ಹಬ್ಬದ ಸಂಭ್ರಮ ...

Vijaya Karnataka 16 Feb 2019, 5:00 am
ಬೋರಗಾಂವ : ಎಲ್ಲ ಶಾಲೆಗಳಲ್ಲಿ ರಾಷ್ಟ್ರೀಯ ಹಬ್ಬಗಳಂದು ತಳಿರು ತೋರಣ, ರಂಗುರಂಗಿನ ರಂಗೋಲಿ, ವಿದ್ಯಾರ್ಥಿಗಳ ಶಿಸ್ತಿನ ಪಾಲ್ಗೊಳ್ಳುವಿಕೆಯಿಂದ ಹಬ್ಬದ ಸಂಭ್ರಮ ಮನೆಮಾಡುವುದು ಸಾಮಾನ್ಯ. ಆದರೆ ನಾಲೈದು ಸರಕಾರಿ ಶಾಲೆಗಳ ಗುಚ್ಛದಂತಿರುವ ಬೇಡಕಿಹಾಳ ಗ್ರಾಮದ ಶಾಂತಿನಗರ ಸರ್ಕಲ್‌ನ ಸರಕಾರಿ ಪ್ರಾಥಮಿಕ ಶಾಲೆಗೆ ಕಳೆದ 50 ವರ್ಷಗಳಿಂದ ರಾಷ್ಟ್ರೀಯ ಹಬ್ಬದ ದಿನಗಳಂದು ಬೀಗಮುದ್ರೆ! ಶಿಕ್ಷಕರಾಗಲಿ, ಮಕ್ಕಳಾಗಲೀ ಈ ದಿನಗಳಂದು ಶಾಲೆಯನ್ನು ಇಣುಕಿಯೂ ನೋಡದಿರುವುದರಿಂದ ಆವರಣವೆಲ್ಲ ನೀರವತೆ !!
Vijaya Karnataka Web BEL-15ICH2


1950ರಲ್ಲಿ ಆರಂಭವಾದ ಈ ಶಾಲೆಯಲ್ಲಿ ಕನ್ನಡ ಹೆಣ್ಣುಮಕ್ಕಳ ಶಾಲೆ, ಕನ್ನಡ ಗಂಡುಮಕ್ಕಳ ಶಾಲೆ, ಎಲ್‌ಕೆಜಿ ಮತ್ತು ಯುಕೆಜಿ ಮರಾಠಿ ಹೆಣ್ಣುಮಕ್ಕಳ ಶಾಲೆ, ಮರಾಠಿ ಗಂಡುಮಕ್ಕಳ ಶಾಲೆ, ಉರ್ದು ಶಾಲೆ, ಹಾಗೂ ಶಮನೇವಾಡಿಯ ಕನ್ನಡ ಗಂಡುಮಕ್ಕಳ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಸದ್ಯ 532 ವಿದ್ಯಾರ್ಥಿಗಳು, 26 ಶಿಕ್ಷಕರು, ನಾಲ್ವರು ಮುಖ್ಯಶಿಕ್ಷಕರು, ನಾಲ್ಕು ಎಸ್‌ಡಿಎಂಸಿಗಳಿದ್ದರೂ ಶಾಲೆಯಲ್ಲಿ ರಾಷ್ಟ್ರಧ್ವಜ ಹಾರಿಸಬೇಕೆಂಬ ಬಯಕೆಯೂ ಬಾರದಿರುವುದು ವಿಪರ್ಯಾಸ.

35 ವರ್ಗಕೋಣೆಗಳು, ವಿಶಾಲವಾದ ಕ್ರೀಡಾಂಗಣ ಸೇರಿದಂತೆ ಸಕಲ ಸೌಲಭ್ಯಗಳಿದ್ದರೂ ಶಿಕ್ಷಕರ ನಿರ್ಲಕ್ಷ್ಯದಿಂದ ಶಾಲೆಯಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಲ್ಲ ಎನ್ನುವುದು ಸ್ಥಳೀಯರ ಬೇಸರದ ನುಡಿ.

ಈ ಬಗ್ಗೆ ಕೆಬಿಎಸ್‌ ಶಾಲೆಯ ಮುಖ್ಯಶಿಕ್ಷಕ ಜೆ.ಎ. ಮಗದುಮ್‌ ಅವರನ್ನು ವಿಚಾರಿಸಿದರೆ 'ಶಾಲೆಯಲ್ಲಿ ನಾನು ಬರುವುದಕ್ಕೂ ಮುಂಚಿನಿಂದಲೇ ರಾಷ್ಟ್ರೀಯ ಹಬ್ಬಗಳು ಆಚರಣೆಯಲ್ಲಿಲ್ಲ. ಶಾಲೆಯಲ್ಲಿ ಧ್ವಜಾರೋಹಣ ಮಾಡಬೇಕೆಂದು ಗ್ರಾಪಂನಲ್ಲಿ ಠರಾವು ಮಾಡಿದರೆ ಮಾತ್ರ ಇಲ್ಲಿ ಧ್ವಜಾರೋಹಣ ಸಾಧ್ಯವಿದೆ. ಇಲ್ಲವಾದರೆ ಇದೇ ಸ್ಥಿತಿ ಮುಂದುವರಿಯಲಿದೆ' ಎನ್ನುತ್ತಾರೆ.

ಧ್ವಜ ಕಟ್ಟೆ ನಿರ್ಮಿಸಿಕೊಡುವಂತೆ ಗ್ರಾಪಂಗೆ ಬೇಡಿಕೆ ಇಡಬಹುದಲ್ಲ ಎಂದು ಕೇಳಿದರೆ 'ನಾವೇಕೆ ಧ್ವಜಕಟ್ಟೆ ನಿರ್ಮಿಸಿಕೊಡುವಂತೆ ಕೇಳಬೇಕು' ಎಂದು ಉತ್ತರಿಸುವ ಮೂಲಕ ಧ್ವಜಾರೋಹಣದ ವಿಷಯದಲ್ಲಿ ತಮ್ಮ ನಿರ್ಲಕ್ಷ್ಯ ವ್ಯಕ್ತಪಡಿಸುತ್ತಿದ್ದಾರೆ.

ಶಾಲೆ ಸ್ಥಗಿತಗೊಂಡರೂ ಧ್ವಜಾರೋಹಣ :
ಈ ಶಾಲೆಯಲ್ಲಿ ರಾಷ್ಟ್ರಧ್ವಜಾರೋಹಣಕ್ಕೆ ಇಷ್ಟು ನಿಷ್ಕಾಳಜಿ ಇದ್ದರೂ ಇದೇ ಗ್ರಾಮದ ಮತ್ತೊಂದು ಶಾಲೆಯಲ್ಲಿ ಮಾದರಿಯಾಗಿ ರಾಷ್ಟ್ರೀಯ ಹಬ್ಬಗಳು ಆಚರಣೆಯಾಗುತ್ತವೆ. ಬೇಡಕಿಹಾಳದ ಮಧ್ಯಮ ಕನ್ನಡ ಪ್ರಾಥಮಿಕ ಗಂಡು ಮಕ್ಕಳ ಶಾಲೆ ಮೂರು ದಶಕಗಳಿಂದ ಸ್ಥಗಿತಗೊಂಡಿದ್ದರೂ ಪ್ರತಿ ರಾಷ್ಟ್ರೀಯ ಹಬ್ಬದಂದು ಶಾಲೆಯ ಬಾಗಿಲು ತೆರೆದು, ಸ್ವಚ್ಛಗೊಳಸಿ ರಾಷ್ಟ್ರಧ್ವಜಾರೋಹಣ ಮಾಡಲಾಗುತ್ತದೆ. 'ವರ್ಷ ಪೂರ್ತಿ ಶಾಲೆ ಮುಚ್ಚಿದರೂ ಹಿಂದಿನ ನಿಯಮದಂತೆ ಶಾಲೆಯಲ್ಲಿ ಧ್ವಜಾರೋಹಣ ಮಾಡುತ್ತೇವೆ' ಎಂದು ಇಲ್ಲಿನ ಮುಖ್ಯಶಿಕ್ಷಕರು ಹೇಳುತ್ತಾರೆ.

ಗ್ರಾಪಂ ಕಾರ್ಯಕ್ರಮಕ್ಕೆ ತಡ :
500 ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ರಾಷ್ಟ್ರೀಯ ದಿನಾಚರಣೆಗಳಂದು ಧ್ವಜಾರೋಹಣ ಮಾಡಿ ಗ್ರಾಪಂ ಧ್ವಜಾರೋಹಣಕ್ಕೆ ಬರುವುದು ತಡವಾಗುತ್ತದೆ. ಹೀಗಾಗಿ ಈ ಶಾಲೆಯಲ್ಲಿ ಧ್ವಜಾರೋಹಣ ನಡೆಯುತ್ತಿಲ್ಲ ಎಂದು ಕೆಲ ಗ್ರಾಪಂ ಸದಸ್ಯರು ಹೇಳುತ್ತಿದ್ದಾರೆ.

'ನಾನು ಬೇಡಕಿಹಾಳದ ಇನ್‌ಚಾರ್ಜ್‌ ಪಿಡಿಒ ಆಗಿದ್ದು ನನಗೆ ಈ ಕುರಿತು ಯಾವುದೇ ಮಾಹಿತಿ ಇಲ್ಲ. ಐದು ದಶಕಗಳಿಂದ ಆ ಶಾಲೆಯಲ್ಲಿ ಧ್ವಜಾರೋಹಣ ನಡೆಯದಿರುವುದಕ್ಕೆ ಶಾಲೆಯ ಶಿಕ್ಷಕರು, ಮುಖ್ಯಶಿಕ್ಷಕರೇ ಕಾರಣ'
-ಕೆ.ಎ. ಮೋಮಿನ, ಶಮನೇವಾಡಿ ಪಿಡಿಒ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ