ಆ್ಯಪ್ನಗರ

ನೆರೆಯಿಂದ ರಕ್ಷಿಸಿದ ಅಂಬಿಗರಿಗೆ ಧ್ವಜಾರೋಹಣದ ಗೌರವ

ಕಾಗವಾಡ (ಬೆಳಗಾವಿ): ಈಚೆಗೆ ಬಂದ ಪ್ರವಾಹದಿಂದಾಗಿ ತಾಲೂಕಿನ ಜುಗೂಳ ಗ್ರಾಮದಲ್ಲಿ ಈಗಲೂ ...

Vijaya Karnataka 16 Aug 2019, 5:00 am
ಕಾಗವಾಡ (ಬೆಳಗಾವಿ): ಈಚೆಗೆ ಬಂದ ಪ್ರವಾಹದಿಂದಾಗಿ ತಾಲೂಕಿನ ಜುಗೂಳ ಗ್ರಾಮದಲ್ಲಿ ಈಗಲೂ ಸುಮಾರು ನಾಲ್ಕು ಅಡಿಗಳಷ್ಟು ನೀರು ತುಂಬಿಕೊಂಡಿದೆ. ಅಲ್ಲಿನ ಜನರೆಲ್ಲ ಸಂಬಂಧಿಕರು, ಪರಿಚಯಸ್ಥರ ಮನೆಗಳು ಹಾಗೂ ಕಾಳಜಿ ಕೇಂದ್ರಗಳಲ್ಲಿದ್ದಾರೆ. ಆದರೂ ದೇಶಪ್ರೇಮ ಉಕ್ಕಿಸುವ ಸ್ವಾತಂತ್ರ್ಯದ ಹಬ್ಬವನ್ನು ಆಚರಿಸದೇ ಬಿಡಲಾದೀತೇ?
Vijaya Karnataka Web BEL-15 KAGWAD 3 NEWS PHOTO


ಹೇಗಾದರೂ ಸರಿ, ಸ್ವಾತಂತ್ರ್ಯೋತ್ಸವ ಆಚರಿಸಬೇಕು ಎಂದು ನಿರ್ಧರಿಸಿದ ಜನರೆಲ್ಲ ನೀರಿನಲ್ಲೇ ತೆರಳಿ, ನೀರಿನಲ್ಲೇ ನಿಂತು ಆಯಾಯ ಸ್ಥಳಗಳಲ್ಲಿ ಗುರುವಾರ ಧ್ವಜಾರೋಹಣ ಮಾಡಿಯೇ ಬಿಟ್ಟರು. ಇಷ್ಟಕ್ಕೂ ಅಲ್ಲೆಲ್ಲ ಪ್ರಮುಖವಾಗಿ ಧ್ವಜಾರೋಹಣ ಮಾಡಿದ್ದು ಯಾರು ಗೊತ್ತೇ? ದೋಣಿ ಮೂಲಕ ನದಿ ದಾಟಿಸುವ ಅಂಬಿಗ!

ಹೌದು. ಚಿಕ್ಕೋಡಿ ಉಪವಿಭಾಗದಲ್ಲಿ ತಮ್ಮನ್ನು ಕಾಪಾಡಿದ ಯೋಧರಿಗೆ ಮಹಿಳೆಯರು ಆರತಿ ಎತ್ತಿ, ರಾಖಿ ಕಟ್ಟಿ ಕಳಿಸಿಕೊಟ್ಟರೆ ಜುಗೂಳದ ಜನರು ತುರ್ತು ಸಂದರ್ಭದಲ್ಲಿ ಪ್ರವಾಹದಿಂದ ತಮ್ಮನ್ನು ರಕ್ಷಿಸಿದ ದೋಣಿಗಳ ಅಂಬಿಗರನ್ನು ಕರೆಸಿ ಅವರ ಕೈಯಿಂದ ಧ್ವಜಾರೋಹಣ ಮಾಡಿಸಿದರು. ಆ ಮೂಲಕ ಅವರನ್ನು ಗೌರವಿಸಿದರು.

ಗ್ರಾಪಂ ಅಧ್ಯಕ್ಷ ಸಂಜಯ ಮಿಣಚೆ, ಸದಸ್ಯರಾದ ರವೀಂದ್ರ ವಾಟೆ, ಬಾಬಾಸಾಬ ಪಾಟೀಲ, ಸುರೇಶ್‌ ಪಾಟೀಲ, ಅರುಣ ಗಣೇಶವಾಡಿ, ಸುಧಾಕರ ಗಣೇಶವಾಡಿ, ಭಾಸ್ಕರ ಮಿಣಚೆ, ಪಿಂಟು ಮೋಳೆ, ಆನಂದ ಕುಲಕರ್ಣಿ, ಸಂಜಯ ಕಾನಡೆ, ಅಸ್ಲಂ ಅಪರಾಜ, ಪಿಡಿಒ ಅನಿಲ್‌ ಸಂತೆ, ಗ್ರಾಮ ಲೆಕ್ಕಾಧಿಕಾರಿ ಎಸ್‌.ಎಂ.ಜೋರೆ ಮತ್ತಿತರರು ಉಪಸ್ಥಿತರಿದ್ದರು.

ಧ್ವಜಾರೋಹಣಗೈದ ಅಂಬಿಗರಿವರು... :
ಜುಗೂಳ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಅಪ್ಪಾಸಾಹೇಬ ಅಂಬಿಗೇರ, ಗ್ರಾಮ ಪಂಚಾಯಿತಿಯಲ್ಲಿ ಶಿವಾನಂದ ಅಂಬಿ, ಜನತಾ ಬ್ಯಾಂಕ್‌ನಲ್ಲಿ ಬಾಬಾಸಾಹೇಬ ಅಂಬಿ, ಮಲ್ಲಿಕಾರ್ಜುನ ಬ್ಯಾಂಕ್‌ನಲ್ಲಿ ಭರಮು ಅಂಬಿ, ಪಿಕೆಪಿಎಸ್‌ನಲ್ಲಿ ಅಶೋಕ ಅಂಬಿ, ರಾವಸಾಹೇಬ ಅಂಬಿ, ಆದಿನಾಥ ಬ್ಯಾಂಕ್‌ನಲ್ಲಿ ಮುಕುಂದ ಅಂಬಿ, ಹೆಣ್ಣುಮಕ್ಕಳ ಶಾಲೆಯಲ್ಲಿ ವಿಶ್ವನಾಥ ಅಂಬಿ ಧ್ವಜಾರೋಹಣ ನೆರವೇರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ