ಆ್ಯಪ್ನಗರ

3ನೇ ರೇಲ್ವೆಗೇಟ್‌ ರಸ್ತೆ ಮೇಲ್ಸೇತುವೆಗೆ ಶಂಕುಸ್ಥಾಪನೆ

ಬೆಳಗಾವಿ: ಜಿಲ್ಲೆಯ ಸಮಗ್ರ ಅಭಿವೃದ್ಧಿ ...

Vijaya Karnataka 7 Jan 2019, 5:00 am
ಬೆಳಗಾವಿ : ಜಿಲ್ಲೆಯ ಸಮಗ್ರ ಅಭಿವೃದ್ಧಿ ಮತ್ತು ಜನ ಕಲ್ಯಾಣಕ್ಕೆ ಒಟ್ಟಾಗಿ ಶ್ರಮಿಸಲು ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರು ಪ್ರತಿಜ್ಞೆ ಮಾಡುವ ಮೂಲಕ ಗಮನ ಸೆಳೆದರು.
Vijaya Karnataka Web BLG-0601-2-52-6RAJU-2


ಭಾನುವಾರ ಇಲ್ಲಿನ ಟಿಳಕವಾಡಿಯ 3ನೇ ರೈಲ್ವೆ ಗೇಟ್‌ನಲ್ಲಿ ಜರುಗಿದ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾವುಕರಾಗಿ ಮಾತನಾಡಿದ ಇವರೆಲ್ಲ, ''ಅಭಿವೃದ್ಧಿಯಲ್ಲಿ ರಾಜಕೀಯ ಮಾಡುವುದಿಲ್ಲ. ಪಕ್ಷ ರಾಜಕಾರಣ ಏನಿದ್ದರೂ ಚುನಾವಣೆಗೆ ಸೀಮಿತ. ಎಲ್ಲರೂ ಕೈಜೋಡಿಸಿದರೆ ಮಾತ್ರ ಜನರಿಗೆ ಬೇಕಿರುವ ಮೂಲಸೌಕರ್ಯ ಮತ್ತು ಶಾಶ್ವತ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯ'' ಎಂದು ಹೇಳಿದರು.

ಅರಣ್ಯ ಸಚಿವ ಸತೀಶ್‌ ಜಾರಕಿಹೊಳಿ ಮಾತನಾಡಿ, ''ಬೆಂಗಳೂರಿಗೆ ಪರಾರ‍ಯಯ ನಗರವಾಗಿ ಬೆಳಗಾವಿ ಬೆಳೆಯಬೇಕಿದೆ. ಈ ನಿಟ್ಟಿನಲ್ಲಿ ನಾವೆಲ್ಲ ಪಕ್ಷಾತೀತವಾಗಿ ಕೆಲಸ ಮಾಡುತ್ತೇವೆ. ಕೂಡಿ ಕೆಲಸ ಮಾಡುವಾಗ ರಾಜಕೀಯ ಎಣಿಸುವುದಿಲ್ಲ. ರಸ್ತೆ ಮೇಲ್ಸೇತುವೆಗಳು ಇಲ್ಲಿನ ಜನರ ದಶಕಗಳ ಕನಸಾಗಿದೆ. ಅವು ಈಗ ಒಂದೊಂದಾಗಿ ಈಡೇರುತ್ತ ಹೊರಟಿವೆ. ಸಂಸದ ಸುರೇಶ ಅಂಗಡಿಯವರು ವಿಶೇಷ ಆಸಕ್ತಿ ವಹಿಸಿದ್ದಾರೆ. ಈಗ ಕೈಗೆತ್ತಿಕೊಂಡಿರುವ ಕಾಮಗಾರಿಯೂ ಬೇಗ ಪೂರ್ಣಗೊಂಡು ಜನರ ಉಪಯೋಗಕ್ಕೆ ಸಿಗುವಂತಾಗಬೇಕು. ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಈ ಕುರಿತು ಕಾಳಜಿ ವಹಿಸಬೇಕು. ಒಳ್ಳೆಯ ಕೆಲಸಕ್ಕೆ ಎಲ್ಲರ ಬೆಂಬಲವಿದೆ'' ಎಂದರು.

ಚುನಾವಣೆಗೆ ಸೀಮಿತ: ಅಧ್ಯಕ್ಷತೆ ವಹಿಸಿದ್ದ ಶಾಸಕ ಅಭಯ ಪಾಟೀಲ ಮಾತನಾಡಿ, ''ರಾಜಕೀಯ ಏನಿದ್ದರೂ ಚುನಾವಣೆಗೆ ಸೀಮಿತ. ನಂತರ ಚುನಾಯಿತ ಪ್ರತಿನಿಧಿಗಳು ಒಟ್ಟಾಗಿ ಕೆಲಸ ಮಾಡಿ ಕ್ಷೇತ್ರ ಮತ್ತು ಜಿಲ್ಲೆಗೆ ನಾನಾ ಯೋಜನೆಗಳನ್ನು ತೆಗೆದುಕೊಂಡು ಬರಬೇಕು. ಜಿಲ್ಲೆಯ ರಾಜಕೀಯ ನಾಯಕರು ಈ ವಿಷಯದಲ್ಲಿ ಒಗ್ಗಟ್ಟು ತೋರುತ್ತಿರುವುದು ಖುಷಿ ಸಂಗತಿಯಾಗಿದೆ. ಅರಣ್ಯ ಸಚಿವರಾಗಿರುವ ಸತೀಶ್‌ ಜಾರಕಿಹೊಳಿ ಅವರು, ಜಂಗಲ್‌ ಸಫಾರಿ ಸೇರಿದಂತೆ ನಾನಾ ಯೋಜನೆಗಳನ್ನು ತರಲು ಸಾಧ್ಯವಿದೆ. ಜನರ ಈ ಅಪೇಕ್ಷೆಯನ್ನು ಈಡೇರಿಸಬೇಕು. ನಗರದ ರಸ್ತೆಗಳು ಕಾಂಕ್ರಿಟೀಕರಣ ಗೊಳ್ಳಬೇಕು'' ಎಂದರು.

ಜಿಪಂ ಅಧ್ಯಕ್ಷೆ ಆಶಾ ಐಹೊಳೆ ಮಾತನಾಡಿದರು. ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅಜಯಕುಮಾರ ಸಿಂಗ್‌, ಯೋಜನೆಯ ವಿವರ ನೀಡಿದರು. ಮೇಯರ್‌ ಬಸಪ್ಪ ಚಿಕ್ಕಲದಿನ್ನಿ, ಉಪಮೇಯರ್‌ ಮಧುಶ್ರೀ ಪೂಜಾರ, ಶಾಸಕ ಅನಿಲ ಬೆನಕೆ, ಜಿಲ್ಲಾಧಿಕಾರಿ ಡಾ. ಎಸ್‌.ಬಿ. ಬೊಮ್ಮನಹಳ್ಳಿ, ಪಾಲಿಕೆ ಆಯುಕ್ತ ಶಶಿಧರ ಕುರೇರ ಇತರರು ವೇದಿಕೆಯಲ್ಲಿದ್ದರು.

ಕಾಮಗಾರಿಗೆ 180 ದಿನಗಳ ಗಡುವು :
27.28 ಕೋಟಿ ರೂ.ಗಳ ರಸ್ತೆ ಮೇಲ್ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಸಂಸದ ಸುರೇಶ ಅಂಗಡಿ ಮಾತನಾಡಿ, ''ಸಾರಿಗೆ ಸಂಪರ್ಕ ಸಾಧನಗಳ ಅಭಿವೃದ್ಧಿ ಮಾಜಿ ಪ್ರಧಾನಿ ದಿ. ಅಟಲ್‌ಬಿಹಾರಿ ವಾಜಪೇಯಿ ಕನಸಾಗಿತ್ತು. ಆ ನಿಟ್ಟಿನಲ್ಲಿಯೇ ದೇಶದಲ್ಲಿ ಕೆಲಸಗಳು ನಡೆದಿವೆ. ಈ ರಸ್ತೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು ಕೇವಲ 180 ದಿನಗಳಲ್ಲಿ ಪೂರ್ಣಗೊಳಿಸಲು ರೈಲ್ವೆ ಅಧಿಕಾರಿಗಳಿಗೆ ಗಡುವು ನೀಡಲಾಗಿದೆ. ಇಂಜಿನಿಯರ್‌ಗಳು ಇದನ್ನು ಸವಾಲಾಗಿ ಸ್ವೀಕರಿಸಿ ನಿಭಾಯಿಸಬೇಕೆಂದು'' ಕರೆ ನೀಡಿದರು.

''ವಾಣಿಜ್ಯೋದ್ಯಮ ಮತ್ತು ಕೃಷಿ ಕ್ಷೇತ್ರದ ಅಭಿವೃದ್ಧಿ ಹಾಗೂ ರಫ್ತು ಹೆಚ್ಚಳವಾಗದೇ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ನಾವು ಗಂಭೀರವಾಗಿ ಯೋಚಿಸಬೇಕಿದೆ. ದುಡಿಯುವ ಯುವ ಕೈಗಳಿಗೆ ಉದ್ಯೋಗ ನೀಡಬೇಕಿದೆ. ಈ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಪಕ್ಷಭೇದ ಮರೆತು ಕೈಜೋಡಿಸಿ ದುಡಿಯಬೇಕು. ಜಿಲ್ಲೆಯ ನಾವು ಒಂದಾಗಿ ಇದ್ದೇವೆ'' ಎಂದರು.

ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್‌ಗೆ 24 ಬೋಗಿಗಳನ್ನು ಅಳವಡಿಸಬೇಕು. ರೈಲ್ವೆ ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನ ವಹಿಸಬೇಕು. ಘಟಪ್ರಭಾ ಮತ್ತು ಬೆಳಗಾವಿ ರೈಲು ನಿಲ್ದಾಣಗಳ ಮಾದರಿ ನಿರ್ಮಾಣ ಕೆಲಸಕ್ಕೆ ಆದಷ್ಟು ಬೇಗ ಚಾಲನೆ ನೀಡಲಾಗುವುದು.
- ಸುರೇಶ ಅಂಗಡಿ, ಸಂಸದ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ