ಆ್ಯಪ್ನಗರ

ಸುಳಕೂಡಕ್ಕೆ ‘ಮಹಾ’ ಸರಕಾರದಿಂದ ಭರ್ಜರಿ ಗಿಫ್ಟ್‌

- 140 ಕೋಟಿ ರೂ...

Vijaya Karnataka 4 Oct 2018, 5:00 am
ಬೆಳಗಾವಿ/ಇಚಲಕರಂಜಿ: ''ನಮಗೆ ಮೂಲಸೌಕರ್ಯ ಕೊಡಿ, ಇಲ್ಲವೇ ಕರ್ನಾಟಕಕ್ಕೆ ಸೇರ್ಪಡೆ ಮಾಡಿ'', ಎನ್ನುವ ಮಹಾರಾಷ್ಟ್ರದ ಕನ್ನಡ ಕಂಪಿನ ಗ್ರಾಮ ಸುಳಕೂಡದ ಜನರ ಗುಡುಗಿಗೆ ಅಲ್ಲಿನ ಸರಕಾರ ಕೊನೆಗೂ ತಲೆ ಬಾಗಿದ್ದು, ಬೇಕೆಂದಿರುವುದೆಲ್ಲವನ್ನೂ ಕೊಡಲು ಮುಂದಾಗಿದೆ.
Vijaya Karnataka Web gift from maharashtra government to sulkod
ಸುಳಕೂಡಕ್ಕೆ ‘ಮಹಾ’ ಸರಕಾರದಿಂದ ಭರ್ಜರಿ ಗಿಫ್ಟ್‌


ಮಹಾರಾಷ್ಟ್ರ ಸರಕಾರದ ನಿರ್ಲಕ್ಷ್ಯಕ್ಕೀಡಾಗಿದ್ದ ಈ ಗ್ರಾಮಸ್ಥರು, ಯಾವುದೇ ರೀತಿಯ ಅನುಕೂಲ, ಸೌಕರ್ಯಗಳು ಇಲ್ಲದೆ ಬೇಸತ್ತು ಹೋಗಿದ್ದರು. ಅಲ್ಲಿನ ಸರಕಾರಕ್ಕೆ ಗಟ್ಟಿ ಎಚ್ಚರಿಕೆ ನೀಡಲು ಆಗಸ್ಟ್‌ 31 ರಂದು ಜರುಗಿದ ಗ್ರಾಮ ಸಭೆಯಲ್ಲಿ ತಮ್ಮೂರನ್ನು ಕರ್ನಾಟಕಕ್ಕೆ ಸೇರ್ಪಡೆ ಮಾಡಬೇಕೆಂದು ಸರ್ವಾನುಮತದಿಂದ ಠರಾವು ಅಂಗೀಕರಿಸಿದ್ದರು. ಈ ಕುರಿತು, 'ವಿಜಯ ಕರ್ನಾಟಕ' ಸೆ. 5ರ ಸಂಚಿಕೆಯಲ್ಲಿ ಈ ಠರಾವಿನ ವಿಸ್ತೃತ ವರದಿ ಪ್ರಕಟಿಸಿ ಉಭಯ ರಾಜ್ಯಗಳಲ್ಲಿ ಗಮನ ಸೆಳೆದಿತ್ತು.

ಇದರಿಂದ ಎಚ್ಚೆತ್ತುಕೊಂಡ ಅಲ್ಲಿನ ಶಾಸಕರು ಕೂಡಲೇ ಗ್ರಾಮಕ್ಕೆ ದೌಡಾಯಿಸಿ ಬಂದು ಗ್ರಾಮಸ್ಥರ ಅಳಲು ಆಲಿಸಿದ್ದರು. ಅದಾಗಿ ವಾರದ ಅವಧಿಯಲ್ಲಿ ಕೆಲ ಅಭಿವೃದ್ಧಿ ಯೋಜನೆಗಳಿಗೂ ಚಾಲನೆ ನೀಡಿ ಸಂತೈಸಿದ ಸರಕಾರ, ಅದರ ಮುಂದುವರಿದ ಭಾಗವಾಗಿ ಈಗ ಇನ್ನಷ್ಟು ಯೋಜನೆಗಳನ್ನು ಗ್ರಾಮಕ್ಕೆ ಒದಗಿಸಿದೆ.

ಕನ್ನಡಿಗರೇ ಬಹುಸಂಖ್ಯಾತರಾಗಿರುವ ಸುಳಕೂಡ ಗ್ರಾಮ ದೂಧಗಂಗಾ ನದಿ ತಟದಲ್ಲಿದ್ದು, ಚಿಕ್ಕೋಡಿ ತಾಲೂಕಿನ ಗಜಬರವಾಡಿಗೆ ಕೇವಲ 1 ಕಿಮೀ ದೂರದಲ್ಲಿದೆ. ಭೌಗೋಳಿಕವಾಗಿ ಅದು ಮಹಾರಾಷ್ಟ್ರದಲ್ಲಿದ್ದರೂ ಮಾನಸಿಕ ಹಾಗೂ ವ್ಯವಹಾರಿಕವಾಗಿ ಕರ್ನಾಟಕದೊಂದಿಗೆ ಹೆಣೆದುಕೊಂಡಿದೆ. ಇದರಿಂದಾಗಿ ಇವರು ಠರಾವು ಅಂಗೀಕರಿಸಿದಾಗ ಕರ್ನಾಟಕ ಭಾಗದಿಂದ ನೈತಿಕವಾಗಿ ದೊಡ್ಡ ಬೆಂಬಲ ಸಿಕ್ಕಿತ್ತು. ಕೊಲ್ಲಾಪುರ ಜಿಲ್ಲಾ ಉಸ್ತುವಾರಿ ಸಚಿವ ಚಂದ್ರಕಾಂತ ದಾದಾ ಪಾಟೀಲ ಸುಳಕೂಡ ಸಮಸ್ಯೆಯನ್ನು ಸರಕಾರಕ್ಕೆ ಮುಟ್ಟಿಸಿದ್ದರು. ಕಾಗಲ ಶಾಸಕ ಹಸನ್‌ ಮುಶ್ರೀಫ್‌, ಸಂಸದ ಧನಂಜಯ ಮಹಾಡಿಕ್‌ ಒಳಗೊಂಡು ಇತರರೂ ಈ ನಿಟ್ಟಿನಲ್ಲಿ ಶ್ರಮಿಸಿದರು. ಸದ್ಯ 1.40 ಕೋಟಿ ರೂ. ಗಳ ಕಾಮಗಾರಿಗಳಿಗೆ ಚಾಲನೆ ಸಿಕ್ಕಿದೆ.

ಯಾವ್ಯಾವ ಕಾಮಗಾರಿ? :

* ಗಜಬರವಾಡಿ-ಸುಳಕೂಡ ರಸ್ತೆ ಡಾಂಬರೀಕರಣಕ್ಕೆ 20 ಲಕ್ಷ ರೂ. ಮಂಜೂರಾಗಿದ್ದು ಅ. 15ರಂದು ಚಾಲನೆ ಸಿಗಲಿದೆ.

* ಬೇನಾಡಿ-ಕಸನಾಳ ರಸ್ತೆಗೆ 10 ಲಕ್ಷ ರೂ., ಕೊಗನೋಳಿ-ಸುಳಕೂಡ ರಸ್ತೆಗೆ 10 ಲಕ್ಷ ರೂ.

* ದಲಿತ ವಸತಿಯಲ್ಲಿ ಕಾಂಕ್ರಿಟ್‌ ರಸ್ತೆ

* ನೂತನ ಗ್ರಾಪಂ ಕಟ್ಟಡ ನಿರ್ಮಾಣಕ್ಕೆ 85 ಲಕ್ಷ ರೂ. ಮಂಜೂರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ