ಬಣ್ಣದ ನಡುವೆಯೇ ಕಿಕ್ಕಿರಿದು ಸೇರಿರುವ ಜನಸ್ಥೋಮ.. ಡಿಜೆ ಸಾಂಗ್ಗೆ ಕಿಕ್ಕೆರಿದಂತೆ ಕುಣಿಯುತ್ತಿರೋ ಯುವಕರು.. ಓಕುಳಿ ಕಂಬ ನೆಟ್ಟು ಪೂಜೆ ಮಾಡುತ್ತಿರುವ ಗ್ರಾಮಸ್ಥರು.. ಈ ಎಲ್ಲ ಅದ್ಭುತ ದೃಶ್ಯಗಳು ಕಂಡುಬಂದಿದ್ದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರಹಟ್ಟಿಯಲ್ಲಿ.. ಅಷ್ಟಕ್ಕೂ ಅಲ್ಲೇನು ವಿಶೇಷ ಇತ್ತು ಅನ್ಕೊಂಡ್ರಾ.. ಅದೇ ಹನುಮಾನ್ ಓಕುಳಿ..
ಹೌದು, ಓಕುಳಿ ಅಂದ್ರೆ ಉತ್ತರ ಕರ್ನಾಟಕದಲ್ಲಿ ಹಬ್ಬವೇ ಸರಿ.. ಇದು ಯುವಕರ ಹಬ್ಬವೆಂದೇ ಪ್ರಸಿದ್ಧ.. ಅದರಂತೆ ಅಥಣಿ ತಾಲೂಕಿನ ಶಿರಹಟ್ಟಿಯಲ್ಲಿ ಅದ್ಧೂರಿಯಾಗಿ ಹನುಮಾನ್ ಓಕುಳಿ ಆಚರಿಸಲಾಯಿತು. ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ಅಬ್ಬರದ ಆಚರಣೆಗೆ ಬ್ರೇಕ್ ಬಿದ್ದಿತ್ತು. ಆದರೆ, ಈ ವರ್ಷ ವೈರಸ್ ನಿಯಂತ್ರಣದಲ್ಲಿರುವುದರಿಂದ ಭರ್ಜರಿಯಾಗಿಯೇ ಓಕುಳು ಆಚರಿಸಿದರು.
ಗ್ರಾಮದಲ್ಲಿ ಓಕುಳಿ ಕಂಬವನ್ನು ನಿಲ್ಲಿಸಿ, ಆ ಕಂಬವನ್ನು ಯಾರು ಮೊದಲು ಹತ್ತುತ್ತಾರೋ ಅವರಿಗೆ ಗ್ರಾಮಸ್ಥರು ಬಹುಮಾನ ವಿತರಿಸುತ್ತಾರೆ. ಏನ್ ಮಹಾ ಕಂಬ ಎನ್ನಬೇಡಿ.. ಓಕುಳಿ ಕಂಬ ಹತ್ತುವುದು ಅಷ್ಟೇನೂ ಸಲೀಸಲ್ಲ. ಓಕುಳಿ ಕಂಬ ಹತ್ತುವುದಕ್ಕೆ ಆಂಜನೇಯ ರೀತಿಯಲ್ಲಿ ಬುದ್ಧಿಶಕ್ತಿ, ಚಾತುರ್ಯತೆ ಬೇಕೇ ಬೇಕು ಎಂದು ಗ್ರಾಮಸ್ಥರ ನಂಬಿಕೆ. ಗ್ರಾಮದ ನೂರಾರು ಯುವಕರ ಪೈಕಿ ಶರಣಪ್ಪಾ ತುಬಚಿ ಎಂಬುವರು ಓಕುಳಿ ಕಂಬ ಹತ್ತುವುದರಲ್ಲಿ ಯಶಸ್ವಿಯಾದರು.
ಓಕುಳಿಗಾಗಿ ಒಂದು ತಿಂಗಳಿಂದ ಅಭ್ಯಾಸ ನಡೆಸುವ ಗ್ರಾಮದ ಯುವಕರು ಹಿರಿಯರ ಜೊತೆ ಸೇರಿ ಜೋಶ್ನಲ್ಲಿ ಓಕುಳಿ ಆಡುತ್ತಾರೆ. ಇದು ದೊಡ್ಡ ಜಾತ್ರೆಯ ರೀತಿಯೇ ನಡೆಯುತ್ತದೆ. ಓಕುಳಿ ಬಳಿಕ ಯಾವುದೇ ಜಾತಿ ಧರ್ಮ ಎನ್ನದೆ ಎಲ್ಲರೂ ಹನುಮಂತ ದೇವಸ್ಥಾನದಲ್ಲಿ ಪೂಜೆ ಮಾಡಿ ಪ್ರಸಾದ ತೆಗೆದುಕೊಂಡು ಗ್ರಾಮಸ್ಥರು ಪುನೀತರಾದರು.