ಬೆಳಗಾವಿ: ಟೆಂಡರ್ ಕರೆಯದೇ ಶೂ ಮತ್ತು ಸಾಕ್ಸ್ ಖರೀದಿ ಪ್ರಕರಣಕ್ಕೆ ಸಂಬಂಧಿಧಿಸಿದಂತೆ ನಾಲ್ವರು ಮುಖ್ಯೋಪಾಧ್ಯಾಯರನ್ನು ಅಮಾನತುಗೊಳಿಸಿ ಬೆಳಗಾವಿ ಡಿಡಿಪಿಐ ಎಸ್ವೈ ಹಳಿಂಗಳಿ ಆದೇಶ ಹೊರಡಿಸಿದ್ದಾರೆ. ಬೈಲಹೊಂಗಲ ತಾಲೂಕಿನ ನಯಾನಗರ ಎಚ್ಪಿಎಸ್ನ ಮುಖ್ಯಾಧ್ಯಾಪಕಿ ಎಸ್ಡಿ ಗಣಾಚಾರಿ, ಯಕ್ಕುಂಡಿ ಎಚ್ಪಿಎಸ್ನ ಪ್ರಭಾರ ಮುಖ್ಯಾಧ್ಯಾಪಕ ಪಿಎಸ್ ಮಾದರ, ಮುರಗೋಡ ಕೆಬಿಎಸ್ನ ಮುಖ್ಯೋಪಾಧ್ಯಾಯ ಡಿ.ವೈ.ಹೊಂಗಲ, ಚಚಡಿ ಕೆಬಿಎಸ್ನ ಮುಖ್ಯೋಪಾಧ್ಯಾಯ ಪುಂಡಲೀಕ ಬಾಗಲೆ ಅಮಾನತುಗೊಂಡವರು.
ಜಿಲ್ಲೆಯ ಶಾಲಾ ಮಕ್ಕಳಿಗೆ ಉಚಿತವಾಗಿ ಪೂರೈಸಬೇಕಿರುವ ಶೂ ಮತ್ತು ಸಾಕ್ಸ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜಿಪಂ ಸದಸ್ಯ ಶಂಕರ ಮಾಡಲಗಿ ಆ. 8ರಂದು ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಒತ್ತಾಯಿಸಿದ್ದರು. ಸಿಇಒ ಡಾ. ಗೌತಮ ಬಗಾದಿಯವರು ಈ ಬಗ್ಗೆ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಡಿಡಿಪಿಐ ಎಸ್ವೈ ಹಳಿಂಗಳಿ ಅವರಿಗೆ ನಿರ್ದೇಶನ ನೀಡಿದ್ದರು.