ಆ್ಯಪ್ನಗರ

ಮೂಲ ಸೌಲಭ್ಯ ವಂಚಿತ ಹೊಸಟ್ಟಿ ಗ್ರಾಮ

ತಾಲೂಕು ಕೇಂದ್ರದಿಂದ ಕೇವಲ 6 ಕಿಮೀ ದೂರದಲ್ಲಿರುವ ಹೊಸಟ್ಟಿ ಗ್ರಾಮ ಮೂಲ ಸೌಲಭ್ಯದಿಂದ ವಂಚಿತವಾಗಿದೆ...

Vijaya Karnataka 20 Jun 2019, 5:00 am
ಸಂತೋಷ ರಾ ಬಡಕಂಬಿ ಅಥಣಿ
Vijaya Karnataka Web BEL-19 ATHANI-02 A


ತಾಲೂಕು ಕೇಂದ್ರದಿಂದ ಕೇವಲ 6 ಕಿ.ಮೀ ದೂರದಲ್ಲಿರುವ ಹೊಸಟ್ಟಿ ಗ್ರಾಮ ಮೂಲ ಸೌಲಭ್ಯದಿಂದ ವಂಚಿತವಾಗಿದೆ.

ಸುಮಾರು 2 ಸಾವಿರ ಜನಸಂಖ್ಯೆ ಹೊಂದಿದ ಹೊಸಟ್ಟಿ ಗ್ರಾಮ ಸಂಕೋನಟ್ಟಿ ಗ್ರಾಮ ಪಂಚಾಯಿತಿಯ ಅಧೀನಕ್ಕೆ ಒಳಪಟ್ಟಿದೆ. ಅಥಣಿಯಿಂದ ಹೊಸಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದೆ. 13 ವರ್ಷಗಳಿಂದ ಈ ರಸ್ತೆ ಸುಧಾರಣೆ ಕಂಡಿಲ್ಲ. ದೊಡ್ಡ ದೊಡ್ಡ ಹೊಂಡ ಬಿದ್ದಿದ್ದರಿಂದ ಈ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಹಿಂದೇಟು ಹಾಕುತ್ತಾರೆ.

ಬಸ್‌ ಸೌಲಭ್ಯವೂ ಇಲ್ಲ: ಗ್ರಾಮಕ್ಕೆ ಸಾರಿಗೆ ಸೌಲಭ್ಯವೂ ಇಲ್ಲ. ಗ್ರಾಮಸ್ಥರ ಒತ್ತಡದ ಮೇರೆಗೆ ಇಲ್ಲಿ ಕೆಲ ದಿನಗಳ ಹಿಂದೆ ಸಾರಿಗೆ ಇಲಾಖೆ ಬಸ್‌ ಸೌಲಭ್ಯ ಕಲ್ಪಿಸಿತ್ತು. ಆದರೆ, ಕೆಲವೇ ದಿನಗಳಲ್ಲಿ ಅದನ್ನು ಸ್ಥಗಿತಗೊಳಿಸಲಾಯಿತು. ಈ ಗ್ರಾಮದಿಂದ ನಿತ್ಯ 50 ಹೆಚ್ಚು ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಗೆ ಹೋಗುತ್ತಾರೆ. ಅವರೆಲ್ಲ ಶಿಕ್ಷಣಕ್ಕಾಗಿ ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಾದ ಸ್ಥಿತಿ ಇದೆ.

ಒಂದೇ ಸಾರ್ವಜನಿಕ ಮಹಿಳಾ ಶೌಚಾಲಯ: 500ಕ್ಕೂ ಹೆಚ್ಚು ಮಹಿಳೆಯನ್ನು ಹೊಂದಿರುವ ಈ ಗ್ರಾಮದಲ್ಲಿ ಕೇವಲ ಒಂದು ಮಹಿಳಾ ಶೌಚಲಯವಿದೆ. ಅದೂ ಕೂಡ ಉಪಯೋಗಕ್ಕೆ ಬಾರದಂತಹ ಸ್ಥಿತಿ ತಲುಪಿದೆ. 2012ರಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಈ ಮಹಿಳಾ ಶೌಚಾಲಯ ನಿರ್ಮಿಸಿದೆ. ಆದರೆ, ಇದುವರೆಗೆ ನೀರಿನ ಸೌಲಭ್ಯ ಕಲ್ಪಿಸಿಲ್ಲ. ಶೌಚಾಲಯದ ಸುತ್ತಲೂ ಗಿಡಕಂಟಿಗಳು ಬೆಳೆದಿದ್ದರಿಂದ ದಾರಿಯೂ ಮುಚ್ಚಿ ಹೋಗಿದೆ. ಹಾಗಾಗಿ ಮಹಿಳೆಯರಿಗೆ ಬಯಲು ಶೌಚ ಅನಿವಾರ್ಯವಾಗಿದೆ.

ಪುರುಷ ಶೌಚಾಲಯವೂ ಇಲ್ಲಿಲ್ಲ: ಇಲ್ಲಿ ಒಂದುವರೆ ಸಾವಿರಕ್ಕೂ ಅಧಿಕ ಪುರುಷರಿದ್ದಾರೆ. ಆದರೆ, ಒಂದೇ ಒಂದು ಪುರುಷ ಶೌಚಾಲಯವಿಲ್ಲ. ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರೆ ಪ್ರತಿಯೊಬ್ಬರೂ ತಮ್ಮ ಮನೆಗೆ ಶೌಚಾಲಯಗಳನ್ನು ನಿರ್ಮಿಸಿಕೊಂಡಿದ್ದಾರೆ ಎನ್ನುತ್ತಾರೆ.

ಅಥಣಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಇದೇ ಗ್ರಾಮದವರು. ಜತೆಗೆ ಓರ್ವ ಜಿಪಂ ಮಾಜಿ ಸದಸ್ಯ, ಸದಸ್ಯ, ಇಬ್ಬರು ಗ್ರಾಪಂ ಸದಸ್ಯರು ಮತ್ತು 8ಕ್ಕೂ ಹೆಚ್ಚು ಗ್ರಾಪಂ ಮಾಜಿ ಸದಸ್ಯರಿದ್ದಾರೆ. ಆದರೂ, ಕೂಡ ಗ್ರಾಮ ಮೂಲ ಸೌಲಭ್ಯದಿಂದ ವಂಚಿತಗೊಂಡಿದೆ. ಇನ್ನಾದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಹೊಸಟ್ಟಿ ಗ್ರಾಮ ಮೂಲ ಸೌಲಭ್ಯದಿಂದ ವಂಚಿತವಾಗಿದೆ.ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಗ್ರಾಮದ ಸುಧಾರಣೆಗೆ ಅಗತ್ಯಕ್ರಮ ಕೈಗೊಳ್ಳಬೇಕು.
-ಕೃಷ್ಣಾ ಸಲಗರ, ರೈತ ಸಂಘದ ಅಧ್ಯಕ್ಷ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ