ಆ್ಯಪ್ನಗರ

ವರುಣನ ಆರ್ಭಟಕ್ಕೆ ಮನೆ ಗೋಡೆಗಳು ಕುಸಿತ

ಮುರಗೋಡ: ಇತ್ತೀಚೆಗೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಗ್ರಾಮದಲ್ಲಿ ...

Vijaya Karnataka 7 Aug 2019, 5:00 am
ಮುರಗೋಡ: ಇತ್ತೀಚೆಗೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಗ್ರಾಮದಲ್ಲಿ ನಾನಾ ಕಡೆ ಅನೇಕ ಮನೆ ಗೋಡೆಗಳು ಕುಸಿದು ಬಿದ್ದಿವೆ.
Vijaya Karnataka Web BEL-6MURGODPHOTO4


ಹೊಸ ಜನತಾ ಕಾಲೊನಿಯ ಮೀರಾಸಾಬ್‌ ನದಾಫ್‌ ಅವರಿಗೆ ಸೇರಿದ್ದ ಮನೆ ಗೋಡೆ ಕುಸಿದು ಸುಮಾರು ಒಂದು ಲಕ್ಷ ರೂ. ಹಾನಿಯಾಗಿದೆ. ಮನೆಯಲ್ಲಿ ಮಲಗಿದ್ದ ಮೀರಾಸಾಬ್‌ ನದಾಫ್‌ ಹಾಗೂ ಅವರ ಪತ್ನಿ ನೂರಜಾನ್‌ಗೆ ಎದೆ, ಕೈ-ಕಾಲು ಹಾಗೂ ಇತರೆಡೆಗಳಲ್ಲಿ ಗಾಯವಾಗಿದೆ. ದ್ವಿತೀಯ ಪುತ್ರ ಶಾಹಿಲ್‌ ಕಾಲು, ಕೈಗಳಿಗೆ ಗಾಯಗಳಾಗಿದ್ದು ಮೂವರೂ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿರಿಯ ಪುತ್ರಿ ಸಾನಿಯಾ ಮತ್ತು ಕಿರಿಯ ಪುತ್ರಿ ಮುಸ್ಕಾನ್‌ಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಘಟನೆ ನಡೆದ ಸಂದರ್ಭದಲ್ಲಿ ಸುಮಿತ್ರಾ ಗೆಜ್ಜಿ ಹಾಗೂ ಕರೆವ್ವ ಕೋಳೆಕಾರ ಎಂಬುವರು ಮೂವರನ್ನೂ ಕಾಪಾಡಿ ಮಾನವೀಯತೆ ಮೆರೆದಿದ್ದಾರೆ. ಘಟನಾ ಸ್ಥಳಕ್ಕೆ ತಾಪಂ ಸದಸ್ಯ ಸುರೇಶ ಮ್ಯಾಕಲ್‌, ಚಿದಂಬರ ಚೌಡಕ್ಕನವರ, ಗ್ರಾಮ ಲೆಕ್ಕಾಧಿಕಾರಿ ಗಿರೀಶ ಅಣಜಿ ಮತ್ತು ಸಿಬ್ಬಂದಿ, ಪಿಎಸ್‌ಐ ಪ್ರಸಾದ ಫಣೆಕರ ಹಾಗೂ ಪೊಲೀಸ್‌ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

ಕುರುಬಗೇರಿ ನಿವಾಸಿ ಶಿವಪ್ಪ ಕಂಬಳಿ ಎಂಬುವರ ಮನೆ ಗೋಡೆ ಕುಸಿದು ಸುಮಾರು ಒಂದು ಲಕ್ಷ ರೂ. ಹಾನಿಯಾಗಿದೆ. ಮಠದ ಓಣಿ ನಿವಾಸಿ ಪುಂಡಲೀಕ ಕಪಸಿ, ಕುಂಬಾರ ಓಣಿಯ ಕಮಲಾಕ್ಷಿ ಯಕ್ಕುಂಡಿ, ಹೊಸ ಜನತಾ ಕಾಲೊನಿಯ ವಿಜಯಲಕ್ಷ್ಮೀ ತೇಲಕರ, ರಾಜು ಗೌಡತಿ ಅವರಿಗೆ ಸೇರಿದ ಮನೆ ಗೋಡೆಗಳು ಹಾಗೂ ಹೊಸಪೇಟೆ ಗಲ್ಲಿಯಲ್ಲಿ ಎರಡು ಮನೆ ಗೋಡೆಗಳು ಸೇರಿದಂತೆ ಗ್ರಾಮದ ನಾನಾ ಕಡೆ 15ಕ್ಕೂ ಹೆಚ್ಚು ಮನೆ ಗೋಡೆಗಳು ಕುಸಿದು ಬಿದ್ದಿವೆ. ಸಂಬಂಧಿಸಿದ ಅಧಿಕಾರಿಗಳು ಘಟನಾ ಸ್ಥಳಗಳಿಗೆ ಭೇಟಿ ನೀಡಿ ಪರಿಹಾರದ ಭರವಸೆ ನೀಡಿದ್ದಾರೆ.

ಈಗಾಗಲೇ ಗ್ರಾಮದ ನಾನಾ ಗಲ್ಲಿಗಳಲ್ಲಿ 50ಕ್ಕೂ ಹೆಚ್ಚು ಮನೆಗಳು ಮಳೆಯ ಆರ್ಭಟಕ್ಕೆ ಶಿಥಿಲಾವಸ್ಥೆ ತಲುಪಿವೆ. ಹಾನಿಯಾದ ಮನೆಗಳ ಕುಟುಂಬಸ್ಥರಿಗೆ ಶೀಘ್ರ ಪರಿಹಾರ ದೊರಕಿಸಿಕೊಡುವಂತೆ ಗ್ರಾಮಸ್ಥರು ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ