ಆ್ಯಪ್ನಗರ

ಪತ್ನಿ ಕೊಲೆಗೈದ ಪತಿಗೆ ಮರಣದಂಡನೆ

ಬೆಳಗಾವಿ: ಸಾರಾಯಿ ಕುಡಿಯಲು ಹಣ ಕೊಟ್ಟಿಲ್ಲ ಎಂದು ಪತ್ನಿಯನ್ನೇ ಮಾರಕಾಸ್ತ್ರಗಳಿಂದ ಕಡಿದು ಕೊಲೆ ಮಾಡಿದ್ದ ಪತಿಗೆ ಇಲ್ಲಿನ ...

Vijaya Karnataka 19 Apr 2019, 5:00 am
ಬೆಳಗಾವಿ : ಸಾರಾಯಿ ಕುಡಿಯಲು ಹಣ ಕೊಟ್ಟಿಲ್ಲ ಎಂದು ಪತ್ನಿಯನ್ನೇ ಮಾರಕಾಸ್ತ್ರಗಳಿಂದ ಕಡಿದು ಕೊಲೆ ಮಾಡಿದ್ದ ಪತಿಗೆ ಇಲ್ಲಿನ 5ನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ಗುರುವಾರ ಮರಣದಂಡನೆ ಶಿಕ್ಷೆ ವಿಧಿಸಿದೆ.
Vijaya Karnataka Web BLG-1804-2-52-18PRAMOD2


ಹುಕ್ಕೇರಿ ತಾಲೂಕಿನ ಅಲದಾಳ ಗ್ರಾಮದ ನಾಗರಾಜ ನಾಯಿಕ (36) ಮರಣದಂಡನೆ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತ 2016ರ ಮಾರ್ಚ್‌ನಲ್ಲಿ ಪತ್ನಿ ಗೀತಾಳನ್ನು ಕೊಲೆ ಮಾಡಿದ್ದ. ಪ್ರಕರಣದ ಕುರಿತು ಎರಡೂವರೆ ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ನಾಗರಾಜ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶೆ ಜಿ. ಪ್ರಭಾವತಿ ಅವರು ಶಿಕ್ಷೆ ಪ್ರಕಟಿಸಿದ್ದಾರೆ. ಸರಕಾರಿ ವಕೀಲ ಮುರುಳೀಧರ ಕುಲಕರ್ಣಿ ಸರಕಾರದ ಪರ ವಾದ ಮಂಡಿಸಿದ್ದರು.

ಏನಿದು ಪ್ರಕರಣ?: ಮದ್ಯ ವ್ಯಸನಕ್ಕೆ ಒಳಗಾಗಿದ್ದ ನಾಗರಾಜ ಕ್ಷುಲ್ಲಕ ಕಾರಣಕ್ಕೆ ಪತ್ನಿ ಗೀತಾ ಮೇಲೆ ಹಲ್ಲೆ ಮಾಡಿ ದೈಹಿಕ, ಮಾನಸಿಕ ತೊಂದರೆ ಕೊಡುತ್ತಿದ್ದ. ಹೀಗಾಗಿ ಗೀತಾ ತನ್ನ ತವರು ಮನೆಯಲ್ಲಿ ಆಶ್ರಯ ಪಡೆದಿದ್ದರು. ಗೀತಾ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸಕ್ಕೆ ಸೇರಿದ್ದರು. ಅಲ್ಲಿಗೆ ತೆರಳುತ್ತಿದ್ದ ನಾಗರಾಜ ಹಣ ಕೊಡುವಂತೆ ಪೀಡಿಸುತ್ತಿದ್ದನು. ಕೊಡಲು ಒಪ್ಪದೇ ಇದ್ದಾಗ ಗೀತಾ ಅವರ ತಂದೆ, ತಾಯಿ ಬಳಿ ಬಂದು ಪತ್ನಿಯನ್ನು ತನ್ನ ಬಳಿ ಕಳುಹಿಸಿಕೊಡಬೇಕು ಅಥವಾ ತನಗೂ ಇಲ್ಲಿ ಇರಲು ಅವಕಾಶ ಕೊಡಬೇಕು ಎಂದು ರಂಪಾಟ ಮಾಡುತ್ತಿದ್ದ.

2016ರ ಮಾ. 28ರಂದು ಬೆಳಗ್ಗೆ ಯಮನಾಪುರ ಗ್ರಾಮದ ಹಿಂಡಾಲ್ಕೊ ಫ್ಯಾಕ್ಟರಿ ಗೇಟ್‌ ಬಳಿಯ ರಾಷ್ಟ್ರೀಯ ಹೆದ್ದಾರಿ-4 ರಸ್ತೆಯ ಸೇತುವೆ ಕೆಳಗಿನ ವೃತ್ತದಿಂದ ಗೀತಾ ಬ್ಯೂಟಿ ಪಾರ್ಲರ್‌ಗೆ ಹೋಗುವಾಗ ನಾಗರಾಜ ಆಕೆಯ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ ಎಂದು ಗೀತಾ ಸಹೋದರಿ ಮಾಳಮಾರುತಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರಂತೆ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ