ಆ್ಯಪ್ನಗರ

ಕಾನೂನು ಬಾಹಿರ ಔಷಧ ಮಾರಾಟ: ಬೆಳಗಾವಿಯಲ್ಲಿ ಬೃಹತ್‌ ದಾಳಿ

ಬೆಳಗಾವಿ: ಲೈಂಗಿಕಾಸಕ್ತಿ ವೃದ್ಧಿಸುವ ಮಾತ್ರೆ ಮತ್ತು ಔಷಧಗಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿದ್ದ ಔಷಧ ಅಂಗಡಿ, ಲಾಡ್ಜ್‌ ಮತ್ತು ಮನೆಗಳ ಮೇಲೆ ದಾಳಿ ...

Vijaya Karnataka 6 Jul 2019, 5:00 am
ಬೆಳಗಾವಿ : ಲೈಂಗಿಕಾಸಕ್ತಿ ವೃದ್ಧಿಸುವ ಮಾತ್ರೆ ಮತ್ತು ಔಷಧಗಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿದ್ದ ಔಷಧ ಅಂಗಡಿ, ಲಾಡ್ಜ್‌ ಮತ್ತು ಮನೆಗಳ ಮೇಲೆ ದಾಳಿ ನಡೆಸಿರುವ ಔಷಧ ನಿಯಂತ್ರಣಾಧಿಕಾರಿಗಳ ತಂಡ ಅಪಾರ ಪ್ರಮಾಣದ ಔಷಧ ದಾಸ್ತಾನು ವಶಪಡಿಸಿಕೊಂಡಿದೆ.
Vijaya Karnataka Web BLG-0507-2-52-5DRUGS1


ಖಚಿತ ಮಾಹಿತಿ ಮೇರೆಗೆ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯ ಔಷಧ ನಿಯಂತ್ರಣಾಧಿಕಾರಿಗಳ ತಂಡಗಳು ಜು.1 ಮತ್ತು ಜು.4 ರಂದು ಎರಡು ಪ್ರತ್ಯೇಕ ದಾಳಿ ನಡೆಸಿದ್ದವು. ಜು.1 ರಂದು ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಫಜಲುಲ್ಲಾ ಫಾರೂಕಿ ಮತ್ತು ಜಹೀದಾಬಾನು ಬೇಪಾರಿ ಎನ್ನುವವರ ಮನೆಗಳ ಮೇಲೆ ದಾಳಿ ನಡೆಸಿದಾಗ ಪರವಾನಗಿ ಇಲ್ಲದೆ ಆ್ಯಂಟಿ ಬಯೋಟಿಕ್‌, ಸ್ಟಿರಾಯ್ಡ್‌ ಔಷಧಗಳ ಕಲಬೆರೆಕೆಯೊಂದಿಗೆ ಕಾಂತಿವರ್ಧಕ ತಯಾರಿಸುತ್ತಿರುವುದು ಕಂಡುಬಂದಿದೆ. ತಯಾರಾದ ಕಾಂತಿವರ್ಧಕವನ್ನು ಡಬ್ಬ ಮತ್ತು ಪ್ಲಾಸ್ಟಿಕ್‌ಗಳಲ್ಲಿ ಪ್ಯಾಕ್‌ ಮಾಡಿ ಮಾರಾಟ ಮಾಡಲಾಗುತ್ತಿತ್ತು. ಈ ಮನೆಗಳಲ್ಲಿ ಔಷಧ ತಯಾರಿಕೆಗೆ ಬಳಸುವ ಯಂತ್ರೋಪಕರಣಗಳನ್ನೂ ಜಪ್ತಿ ಮಾಡಲಾಗಿದೆ.

ನಂತರ ನಗರದ ದರಬಾರ್‌ ಗಲ್ಲಿ ಮತ್ತು ಕೊನವಾಳ ಗಲ್ಲಿಯ ಜನರಲ್‌ ಸ್ಟೋರ್‌ಗಳ ಮೇಲೆಯೂ ದಾಳಿ ನಡೆಸಲಾಗಿದ್ದು, ಕಾಕತಿಯ ಮನೆಗಳಲ್ಲಿ ತಯಾರಿಸಲಾಗುತ್ತಿದ್ದ ಕಾಂತಿವರ್ಧಕ ಔಷಧಗಳನ್ನು 'ಫಾರೂಕಿ ಅರಬ್ಬೀ ಕ್ರೀಮ್‌' ಮತ್ತು 'ಜಾಹೀದಾ ಒರಿಜಿನಲ್‌ ಅರೇಬಿಕ್‌ ಕ್ರೀಮ್‌' ಹೆಸರಿನಲ್ಲಿ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ.

ಜು.4 ರಂದು ರವಿವಾರ ಪೇಟೆಯ ವಸತಿ ಗೃಹದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಅಲ್ಲಿನ ಕೊಠಡಿಯಲ್ಲಿ ಹುಬ್ಬಳ್ಳಿ ಮೂಲದ ಕೃಷ್ಣಮೂರ್ತಿ ಧರೇಗೌಡರ ಎಂಬ ವ್ಯಕ್ತಿ ಲೈಂಗಿಕಾಸಕ್ತಿ ವೃದ್ಧಿಸುವ ಮಾತ್ರೆ, ಸ್ಪ್ರೇಗಳನ್ನು ಅನಧಿಕೃತವಾಗಿ ಮಾರಾಟ ಮಾಡಲು ದಾಸ್ತಾನು ಮಾಡಿರುವುದನ್ನು ಪತ್ತೆ ಹಚ್ಚಿದ್ದಾರೆ.

ತನಿಖೆಗೆ ಕೋರ್ಟ್‌ ಅನುಮತಿ:
''ವಶಪಡಿಸಿಕೊಂಡಿರುವ ಅನುಸೂಚಿ ಎಚ್‌ ಮಾದರಿಯ ಈ ಔಷಧಗಳನ್ನು ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿ ಅಗತ್ಯವಿರುವ ರೋಗಿಗೆ ರಕ್ತ ವರ್ಗಾವಣೆ ಸೌಲಭ್ಯವಿರುವ ಆಸ್ಪತ್ರೆಯಲ್ಲಿ ಮಾತ್ರ ವಿತರಣೆಗೆ ಅವಕಾಶವಿದೆ. ಆದರೆ, ಇವುಗಳನ್ನು ನಕಲಿ ವೈದ್ಯರು ಕಡಿಮೆ ಬೆಲೆಗೆ ಖರೀದಿಸಿ ಗರ್ಭಪಾತ ಮಾಡಲು ಬಳಸುತ್ತಿದ್ದರು. ಇಂಥ ಅಪಾಯಕಾರಿ ಔಷಧಗಳನ್ನು ಕೃಷ್ಣಮೂರ್ತಿ ಧರೇಗೌಡರ ಬೆಳಗಾವಿಯ ಸಮೃದ್ಧಿ ಫಾರ್ಮಾ ಮತ್ತು ಶ್ರೇಯಾ ಮೆಡಿಕಲ್‌ ಹೆಸರಿನ ನಕಲಿ ಮೊಹರು ಹಾಗೂ ಬಿಲ್‌ ಬಳಸಿ ಅನಧಿಕೃತವಾಗಿ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಹೀಗೆ ವಶಪಡಿಸಿಕೊಂಡ ಔಷಧ ಮತ್ತು ಇತರ ವಸ್ತುಗಳನ್ನು ಇಲಾಖೆ ವಶದಲ್ಲಿ ದಾಸ್ತಾನು ಮಾಡಿಕೊಂಡು ತನಿಖೆ ಮುಂದುವರಿಸಲು ನ್ಯಾಯಾಲಯ ಅನುಮತಿ ನೀಡಿದೆ'', ಎಂದು ಸರಕಾರಿ ಅಭಿಯೋಜಕರಾದ ಡಿ.ಡಿ.ಹಾರೂಗೇರಿ ಮತ್ತು ಮಹಾಂತೇಶ ಚಳಕೊಪ್ಪ 'ವಿಕ'ಕ್ಕೆ ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ