ಆ್ಯಪ್ನಗರ

ತುರ್ತು ಸಂದರ್ಭದಲ್ಲಿ ಧುತ್ತನೆ ಪ್ರತ್ಯಕ್ಷರಾಗುವ ಆಪ್ತರಕ್ಷಕರು

ಮಹೇಶ ವಿಜಾಪುರ ಬೆಳಗಾವಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಜಿಲ್ಲೆಯನ್ನು ಕಾಡಿದ ನೆರೆ ...

Vijaya Karnataka 17 Aug 2019, 5:00 am
ಮಹೇಶ ವಿಜಾಪುರ ಬೆಳಗಾವಿ
Vijaya Karnataka Web BLG-1608-2-52-16RESCUE1

ಹಿಂದೆಂದೂ ಕಂಡರಿಯದ ರೀತಿಯಲ್ಲಿ ಜಿಲ್ಲೆಯನ್ನು ಕಾಡಿದ ನೆರೆ ಸಂದರ್ಭದಲ್ಲಿ ಅಧಿಕಾರಿಗಳು, ಯೋಧರು ಸೇರಿದಂತೆ ಹತ್ತಾರು ಸಂಘಟನೆಗಳವರು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಆ ಪೈಕಿ ಬೆಳಗಾವಿಯ 'ತುರ್ತು ರಕ್ಷಣಾ ಸಹಾಯವಾಣಿ ಫೌಂಡೇಶನ್‌' ಸದಸ್ಯರು ತೆರೆಮರೆಯಲ್ಲಿ ರಕ್ಷಣಾ ಕಾರ್ಯ ಕೈಗೊಂಡು ಗಮನ ಸೆಳೆದಿದ್ದಾರೆ.

ಜನ, ಜಾನುವಾರುಗಳ ರಕ್ಷಣೆಯ ಜತೆಗೆ ಪ್ರವಾಹದ ಹೊಡೆತಕ್ಕೆ ಸಿಕ್ಕು ನಲುಗಿದ ಸಾಕು ಪ್ರಾಣಿಗಳಾದ ಕುದರೆ, ಬೆಕ್ಕು, ನಾಯಿ ಮತ್ತು ಪಕ್ಷಿಗಳನ್ನೂ ಫೌಂಡೇಶನ್‌ ಸದಸ್ಯರು ರಕ್ಷಿಸಿದ್ದಾರೆ. ತೇಲಿ ಹೋದ ಮೃತ ದೇಹಗಳನ್ನು ತರುವಲ್ಲಿ ಸಹ ಯಶಸ್ವಿಯಾಗಿದ್ದಾರೆ. ಅಲ್ಲದೆ, ಕಳೆದೊಂದು ವಾರದಿಂದ ನಾಪತ್ತೆಯಾಗಿರುವ ಜನ, ಜಾನುವಾರುಗಳ ಮಾಹಿತಿ ಪಡೆದಿರುವ ಫೌಂಡೇಶನ್‌ ಸದಸ್ಯರು ತಮ್ಮ ಕೆಲಸ ಕಾರ್ಯಗಳ ನಡುವೆಯೂ ಹುಡುಕಾಟದ ಕಾರ್ಯಾಚರಣೆ ಕೈ ಬಿಡದಿರುವುದು ವಿಶೇಷ.

ಜಾಗೃತಿ ಕಾರ್ಯಾಚರಣೆ: ಜುಲೈ ತಿಂಗಳಾಂತ್ಯದಲ್ಲಿ ಸುರಿದ ಭಾರಿ ಮಳೆ ಆಗಸ್ಟ್‌ ಮೊದಲನೇ ದಿನವೇ ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿ ಪ್ರದೇಶಗಳಲ್ಲಿ ಆತಂಕದ ಮುನ್ಸೂಚನೆ ನೀಡಿತ್ತು. ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ನೀರು ಬಿಡುಗಡೆ ಮಾಡದೇ ಇದ್ದರೂ ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ದಿಢೀರ್‌ ಏರಿಕೆ ಕಂಡು ಬಂದಾಗ ಮಹಾರಾಷ್ಟ್ರದಲ್ಲಿನ ತಮ್ಮದೇ ಪ್ರತ್ಯೇಕ ತಂಡದ ಸಹಾಯದೊಂದಿಗೆ ಮುನ್ನೆಚ್ಚರಿಕೆ ಪ್ಲಾನ್‌ ರೂಪಿಸಿದ್ದರು. ಬಹುತೇಕರ ಗಮನ ಕೃಷ್ಣಾ ನೀರಿನ ಏರಿಳಿತದ ಮೇಲಿದ್ದರೆ ಹೆಲ್ಪ್‌ಲೈನ್‌ ರೆಸ್ಕ್ಯೂ ಟೀಂ ಮಲಪ್ರಭೆ ಮತ್ತು ಮಾರ್ಕಂಡೇಯ ನದಿ ಪಾತ್ರದಲ್ಲಿ ಸುರಿಯುತ್ತಿರುವ ಮಳೆ ಪ್ರಮಾಣದ ಮೇಲೆ ಕೇಂದ್ರೀಕರಿಸಿತ್ತು.

ಗೂಗಲ್‌ ಮ್ಯಾಪ್‌ ಆಧರಿಸಿ ಪ್ಲಾನ್‌ ರೂಪಿಸಿದ ರೆಸ್ಕ್ಯೂ ಯುವಕರು ಆ.2ರಂದು ಖಾನಾಪುರ ತಾಲೂಕಿನ ನೀಲಾವಡೆ ಗ್ರಾಮಕ್ಕೆ ಭೇಟಿ ನೀಡಿ ಪ್ರವಾಹದ ಕುರಿತು ಜಾಗೃತಿ ಮೂಡಿಸಲಾರಂಭಿಸಿದರು. ತಮ್ಮದೇ ಸಾಧನ ಸಲಕರಣೆಗಳ ಮೂಲಕ ನೀಲಾವಡಿ ಗ್ರಾಮಸ್ಥರ ಸ್ಥಳಾಂತರ ಆರಂಭಿಸಿದ್ದರು. ರಾತ್ರೋರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ತಮ್ಮ ತಂಡದ ಅರ್ಧದಷ್ಟು ಸದಸ್ಯರೇ ಅಪಾಯಕ್ಕೆ ಸಿಲುಕಿದ್ದರು. ಖಾನಾಪುರ ಮತ್ತು ಬೆಳಗಾವಿ ತಾಲೂಕಿನ ಹಳ್ಳಿಗಳಲ್ಲಿ ಮೂಡಿಸಿದ ಪ್ರವಾಹ ಜಾಗೃತಿಯಿಂದ ಸಾವು ನೋವಿನ ಪ್ರಮಾಣ ತಗ್ಗುವುದರಲ್ಲಿ ಬಹಳಷ್ಟು ಸಹಕಾರಿಯಾಯಿತು ಎನ್ನುತ್ತಾರೆ ತಂಡದ ಸದಸ್ಯರು.

ಆ.6ರಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬಳಿ ಸಂತಿಬಸ್ತವಾಡ ರಸ್ತೆಯಲ್ಲಿ ನೀರಿನ ರಭಸಕ್ಕೆ ಕಾರು ಸಹಿತ ಕೊಚ್ಚಿ ಹೋದ ಹೈದ್ರಾಬಾದ್‌ ಮೂಲದ ವ್ಯಕ್ತಿಯ ಮೃತ ದೇಹ ಪತ್ತೆ ಮಾಡುವಲ್ಲೂ ರೆಸ್ಕ್ಯೂ ತಂಡ ಯಶಸ್ವಿಯಾಗಿದೆ. ಟಿಳಕವಾಡಿ ಅರುಣ ಟಾಕೀಸ್‌ ಹಿಂಭಾಗ ಸಿಲುಕಿಕೊಂಡಿದ್ದ 8 ಜನನ್ನು ರಕ್ಷಿಸಿದ್ದಾರೆ.

ಹುಡುಕಾಟ ಆರಂಭ: ಈ ಹಿಂದೆ ಬಾಗಲಕೋಟ ಜಿಲ್ಲೆಯಲ್ಲಿ ಕೊಳವೆಬಾವಿಯಲ್ಲಿ ಸಿಲುಕಿಕೊಂಡ ಬಾಲಕನನ್ನು ರೆಸ್ಕ್ಯೂ ತಂಡ ರಕ್ಷಿಸಿತ್ತು. ವಿಜಯಪುರ, ಅಥಣಿ ತಾಲೂಕಿನಲ್ಲಿನ ಕೊಳವೆಬಾವಿ ಪ್ರಕರಣಗಳಲ್ಲಿ ಸಹ ಮಕ್ಕಳ ರಕ್ಷಣೆಗೆ ಸಾಥ್‌ ನೀಡಿದ್ದರು. ಈಗ ಪ್ರವಾಹದಲ್ಲಿ ಕಾಣೆಯಾಗಿರುವ ವ್ಯಕ್ತಿಗಳ ಮಾಹಿತಿ ಪಡೆದು ಅವರ ಪತ್ತೆಗೆ ಹುಡುಕಾಟ ಆರಂಭಿಸಿದ್ದಾರೆ.

ನಾನಾ ವೃತ್ತಿಗಳ ಜನರ ತಂಡವಿದು
ಬಸವರಾಜ ಹಿರೇಮಠ ನೇತೃತ್ವದ 'ಹೆಲ್ಪ್‌ಲೈನ್‌ ಎಮೆರ್ಜನ್ಸಿ ರೆಸ್ಕ್ಯೂ ಫೌಂಡೇಶನ್‌'ನ 52 ಸದಸ್ಯರು ಜನಸಾಮಾನ್ಯರಂತೆ ಕಿರಾಣಿ ಅಂಗಡಿ, ಝೆರಾಕ್ಸ್‌ ಸೆಂಟರ್‌ ಸೇರಿದಂತೆ ವಿವಿಧ ಸೇವಾ ಕೇಂದ್ರ ಹೊಂದಿದ್ದಾರೆ. ತಮ್ಮ ಆದಾಯದಲ್ಲೆ 5 ಲಕ್ಷ ರೂ. ಮೌಲ್ಯದ ತುರ್ತು ರಕ್ಷಣಾ ಸಾಮಗ್ರಿ ಖರೀದಿಸಿ ತರಬೇತಿ ಪಡೆದಿದ್ದಾರೆ. ರಕ್ಷಣಾ ಕಾರ್ಯಕ್ಕೆ ಯಾವುದೇ ಸಮಯದಲ್ಲಿ ಕರೆದರೂ ಬರುವುದಾಗಿ ಜಿಲ್ಲಾಡಳಿತಕ್ಕೆ ವಾಗ್ದಾನ ಮಾಡಿದ್ದಾರೆ. ತುರ್ತು ರಕ್ಷಣೆ ಬೇಕಿದ್ದಲ್ಲಿ ಮೊ. 9922899500 ಕರೆ ಮಾಡಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ