ಆ್ಯಪ್ನಗರ

ನದಿ ನೀರಿನ ಮಟ್ಟ ಏರಿಕೆ: ನೆರೆಯ ಆತಂಕದಲ್ಲಿ ನಾಗರಿಕರು

ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದಲ್ಲಿ ಎಡೆಬಿಡದೇ ಸುರಿಯುತ್ತಿರುವ ಧಾರಾಕಾರ ಮಳೆಗೆ ಅಲ್ಲಿನ ಜಲಾಶಯಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿ ಒಳಹರಿವಿಗೆ ...

Vijaya Karnataka 22 Aug 2018, 5:00 am
ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದಲ್ಲಿ ಎಡೆಬಿಡದೇ ಸುರಿಯುತ್ತಿರುವ ಧಾರಾಕಾರ ಮಳೆಗೆ ಅಲ್ಲಿನ ಜಲಾಶಯಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿ ಒಳಹರಿವಿಗೆ ಅನುಸಾರವಾಗಿ ರಾಜ್ಯದ ಜಲಾಶಯಗಳಿಗೆ ನೀರು ಹೊರಬಿಡುತ್ತಿರುವುದಿಂದ ರಾಜ್ಯದ ನದಿ ತೀರದ ಜನ ನೆರೆಯ ಭಯದಲ್ಲಿ ದಿನ ದೂಡುವಂತಾಗಿದೆ.
Vijaya Karnataka Web BEL-21CKD1


ಕೃಷ್ಣಾ ಹಾಗೂ ಉಪನದಿಗಳ ಮೂಲಕ ಮಂಗಳವಾರ ಸುಮಾರು 1,30,697 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಇದರಿಂದ ತಾಲೂಕಿನ ಮಾಂಜರಿ ಸೇತುವೆ ಬಳಿ ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಮತ್ತಷ್ಟು ಏರಿಕೆ ಕಂಡು ಬಂದಿದೆ. ಇದೀಗ ಅಲ್ಪಪ್ರಮಾಣದಲ್ಲಿ ಸುರಿಯುತ್ತಿರುವ ಮಳೆ ಮತ್ತಷ್ಟು ಹೆಚ್ಚಿದಲ್ಲಿ ಚಿಕ್ಕೋಡಿ ಉಪವಿಭಾಗದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಲಿದೆ.

ತಾಲೂಕಿನ ಅಂಕಲಿ-ಮಾಂಜರಿ ಸೇತುವೆ ಬಳಿ ಕೃಷ್ಣಾ ನದಿ ನೀರಿನ ಮಟ್ಟ 532.61 ಮೀ. ನಷ್ಟಿದೆ. ಸುಮಾರು 537 ಮೀ ನಷ್ಟು ಏರಿಕೆಯಾದರೆ ಅಪಾಯದ ಮಟ್ಟಕ್ಕೆ ತಲುಪುತ್ತದೆ. ವೇದಗಂಗಾ ಹಾಗೂ ದೂಧಗಂಗಾ ನೀರಿನ ಮಟ್ಟ ಸದಲಗಾ ಸೇತುವೆಯಲ್ಲಿ 535.1ಮೀ. ಇದೆ. ಸುಮಾರು 538 ಮೀ. ನಷ್ಟು ಏರಿಕೆಯಾದರೆ ಅಪಾಯದ ಮಟ್ಟಕ್ಕೆ ತಲುಪುತ್ತದೆ.

ಅಥಣಿ ತಾಲೂಕಿನ ಹಿಪ್ಪರಗಿ ಬಳಿ ಕೃಷ್ಣಾ ನೀರಿನ ಮಟ್ಟ 523.20ರಷ್ಟಿದೆ. ಸುಮಾರು 524.87 ಮೀ. ನಷ್ಟು ಏರಿಕೆಯಾದರೆ ಅಪಾಯದ ಮಟ್ಟಕ್ಕೆ ತಲುಪಲಿದೆ. ಕೃಷ್ಣಾ ನದಿ ತಾಲೂಕಿನಲ್ಲಿ ಅಪಾಯದ ಮಟ್ಟಕ್ಕೆ ತಲುಪಲು ಇನ್ನೂ ಕೇವಲ 4.39 ಮೀ. ನಷ್ಟು ಮಾತ್ರ ಬಾಕಿ ಇರುವುದು ನದಿ ತೀರದ ಜನತೆಯನ್ನು ಆತಂಕಕ್ಕೀಡು ಮಾಡಿದೆ.

ಚಿಕ್ಕೋಡಿ ತಾಲೂಕಿನಲ್ಲಿ ಕೃಷ್ಣಾ ನದಿಗೆ ನಿರ್ಮಿಸಿರುವ ಕಲ್ಲೋಳ-ಯಡೂರ, ದೂಧಗಂಗಾ ನದಿಗೆ ನಿರ್ಮಿಸಲಾದ ಮಲಿಕವಾಡ-ದತ್ತವಾಡ, ಕಾರದಗಾ-ಭೋಜ, ವೇದಗಂಗಾ ನದಿಯ ಭೋಜವಾಡಿ-ಕುನ್ನೂರ, ಸಿದ್ನಾಳ-ಅಕ್ಕೋಳ, ಜತ್ರಾಟ-ಭಿವಶಿ ಜಲಾವೃತಗೊಂಡಿವೆ. ಈ ಸೇತುವೆಗಳ ಮೇಲೆ ಮಂಗಳವಾರ ಮತ್ತಷ್ಟು ನೀರು ಏರಿಕೆಯಾಗಿ ಸಂಚಾರ ಸ್ಥಗಿತವಾಗಿದೆ. ಈ ಸೇತುವೆಗಳು ಜಲಾವೃತ್‌ಗೊಂಡಿರುವುದರಿಂದ ಗ್ರಾಮಗಳ ಜನಜೀವನ ಅಸ್ಥವ್ಯಸ್ತಗೊಂಡಿದೆ.

ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ ಮೂಲಕ ಕೃಷ್ಣಾ ನದಿಗೆ ನೀರಿನ ಹರಿವು ಹೆಚ್ಚಾಗಿರುವುದರಿಂದ 1,05,529 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ದೂಧಗಂಗಾ ನದಿ ಮೂಲಕ 25,168 ಕ್ಯೂಸೆಕ್‌ ಕೃಷ್ಣಾ ನದಿಗೆ ಸೇರುತ್ತಿದೆ. ಇದರಿಂದ ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೃಷ್ಣಾ ನದಿಗೆ 1,30,697 ಕ್ಯುಸೆಕ್‌ ನೀರು ಹರಿದು ಬರಲಾರಂಭಿಸಿದೆ. ಎಂದು ತಹಸೀಲ್ದಾರ್‌ ಸಿ.ಎಸ್‌.ಕುಲಕರ್ಣಿ ತಿಳಿಸಿದ್ದಾರೆ.

ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ನದಿತೀರದಲ್ಲಿ ಕಟ್ಟೆಚ್ಚರ ವಹಿಸುವಂತೆ ಆಯಾ ತಾಲೂಕು ಆಡಳಿತಗಳಿಗೆ ನಿರ್ದೇಶನ ನೀಡಲಾಗಿದ್ದು, ಅಲ್ಲದೇ ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
-ಎಸ್‌.ಎಸ್‌. ಬಿರಾದಾರ, ಉಪವಿಭಾಗಾಧಿಕಾರಿ, ಚಿಕ್ಕೋಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ