ಆ್ಯಪ್ನಗರ

ಸ್ವಾತಂತ್ರ್ಯ ಸಿಕ್ಕಿದ್ದು ಅಹಿಂಸೆಯಿಂದಲ್ಲ

ಅಖಂಡ ಭಾರತ ಸಂಕಲ್ಪ ದಿನ ಕಾರ‍್ಯಕ್ರಮದಲ್ಲಿ ಕಣೇರಿಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿಕೆ

Vijaya Karnataka 6 Aug 2018, 5:00 am
ಬೆಳಗಾವಿ: ಭಾರತಕ್ಕೆ ಅಹಿಂಸೆಯಿಂದ ಸ್ವಾತಂತ್ರ್ಯ ಸಿಕ್ಕಿದೆ ಎನ್ನುವುದು ಸುಳ್ಳು. ಈ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಯುವಕರು ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ಕೊಲ್ಲಾಪುರ ಕಣೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.
Vijaya Karnataka Web BEL-5 LBS 5


ನಗರದ ಚಾವಟ ಗಲ್ಲಿಯ ಮಾರುತಿ ಮಂಗಲ ಕಾರ್ಯಾಲಯದಲ್ಲಿ ಭಾನುವಾರ ವಿಶ್ವ ಹಿಂದೂ ಪರಿಷತ್‌ ಆಯೋಜಿಸಿದ್ದ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

1857ರ ಪ್ರಥಮ ಸ್ವಾತಂತ್ರ್ಯ ಹೋರಾಟದಲ್ಲಿ 3 ಲಕ್ಷ ಯುವಕರು ಪ್ರಾಣ ತ್ಯಾಗ ಮಾಡಿದ್ದರು. ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದ ಸಂದರ್ಭದಲ್ಲಿ ಪಾಕಿಸ್ತಾನಿಯರು ಭಾರತದ 30 ಲಕ್ಷ ಜನರನ್ನು ಕೊಂದು ಅವರ ಮೃತದೇಹಗಳನ್ನು ರೈಲಿನಲ್ಲಿ ಹಾಕಿ ಭಾರತಕ್ಕೆ ಕಳುಹಿಸಿದ್ದರು. ಇಂತಹ ಹಲವು ಘಟನೆಗಳು ಸ್ವಾತಂತ್ರ್ಯ ಹೋರಾಟ ವೇಳೆ ನಡೆದಿವೆ ಎಂದರು.

ಒಳಗಿನ ವೈರಿಗಳು: ಪರದೇಶದ ವೈರಿಗಳಿಗಿಂತ ಭಾರತದಲ್ಲಿರುವ ವೈರಿಗಳ ಬಗ್ಗೆ ಹೆಚ್ಚಿನ ಎಚ್ಚರಿಕೆಯಿಂದ ಇರಬೇಕು. ನಮ್ಮ ದೇಶದಲ್ಲಿರುವ ಕೆಲ ವೈರಿಗಳಿಂದ ನಾವು ಸೋಲು ಅನುಭವಿಸುವಂತಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಯುವಕರು ಸಂಘರ್ಷದ ಇತಿಹಾಸ ಅಧ್ಯಯನ ಮಾಡುತ್ತಿರುವುದು ದೇಶಕ್ಕೆ ಮಾರಕವಾಗುತ್ತಿದೆ ಎಂದ ಅವರು, ಭಾರತದ ಉಜ್ವಲ ಭವಿಷ್ಯ ಯುವಕರ ಕೈಯಲ್ಲಿದೆ ಎಂದರು.

ನಾಗಶಾಂತಿ ಎಜುಕೇಶನ್‌ ಚಾರಿಟೆಬಲ್‌ ಟ್ರಸ್ಟ್‌ನ ಅಧ್ಯಕ್ಷೆ ಅನ್ನಪೂರ್ಣ ಅಗಡಿ ಮಾತನಾಡಿ, ದೇಶ ಕಟ್ಟುವ ಕೆಲಸದಲ್ಲಿ ಮಹಿಳೆಯರು ತೊಡಗಬೇಕು. ಮಕ್ಕಳಲ್ಲಿ ದೇಶ ಪ್ರೇಮ ತುಂಬಲು ತಾಯಿಯಿಂದ ಸಾಧ್ಯ ಎಂದರು.

ಶಾಸಕ ಅನಿಲ ಬೆನಕೆ, ಮಾಜಿ ಮೇಯರ್‌ ಸಂಜ್ಯೋತಾ ಬಾಂದೇಕರ, ವಿಶ್ವ ಹಿಂದೂ ಪರಿಷತ್‌ನ ರಾಜ್ಯ ಘಟಕದ ಅಧ್ಯಕ್ಷ ಎಸ್‌.ಆರ್‌. ರಾಮನಗೌಡರ, ಕೋಶ್ಯಾಧ್ಯಕ್ಷ ಕೃಷ್ಣಾ ಭಟ್‌, ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜಿ.ಶಿಂಧೆ, ನಗರ ಘಟಕದ ಅಧ್ಯಕ್ಷ ಶ್ರೀಕಾಂತ ಕದಮ್‌, ಜಯಶ್ರೀ ಜಾಧವ ಮತ್ತಿತರರು ಉಪಸ್ಥಿತರಿದ್ದರು.

ವಿಜಯ ನಗರದ ಸಾಮ್ರಾಜ್ಯದ ಬಗ್ಗೆ ಯುವಕರು ಅಧ್ಯಯನ ಮಾಡುವ ಅವಶ್ಯಕತೆ ಇದೆ. ವಿದೇಶಿಗರು ಹಲವು ಬಾರಿ ದೇಶದ ಮೇಲೆ ದಾಳಿಮಾಡಿದ್ದರೂ, ಎಂದೂ ಸೋಲು ಕಂಡಿರಲಿಲ್ಲ. ನಮ್ಮಲ್ಲಿರುವ ಕೆಲ ಪಟ್ಟಭದ್ರ ಹಿತಾಸಕ್ತಿ ವೈರಿಗಳಿಂದ ಸೋತಿರುವ ಇತಿಹಾಸ ದೊಡ್ಡದಿದೆ. ದೇಶ ಕಟ್ಟುವ ನಿಟ್ಟಿನಲ್ಲಿ ಎಲ್ಲರ ಮನಸ್ಥಿತಿ ಬದಲಾಗಬೇಕು.
-ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ