ಆ್ಯಪ್ನಗರ

ಶಾಲೆ, ಕಾಲೇಜುಗಳಲ್ಲಿ ಡ್ರಗ್ಸ್‌ ವಿರೋಧಿ ಸಮಿತಿ ಬಲಪಡಿಸಲು ಸೂಚನೆ

-ಮಾದಕ ವ್ಯಸನಿಗಳು ಸಿಕ್ಕು ಬಿದ್ದರೆ ಸೌಲಭ್ಯ ಕಡಿತಗೊಳಿಸುವಂತೆ ಸರಕಾರಕ್ಕೆ ಪತ್ರ- ಸುದ್ದಿಗೋಷ್ಠಿಯಲ್ಲಿ ಪೊಲೀಸ್‌ ಆಯುಕ್ತ ಡಾ ಡಿಸಿ...

Vijaya Karnataka 10 Aug 2018, 5:00 am
ಬೆಳಗಾವಿ: ಶಾಲೆ, ಕಾಲೇಜು ಮತ್ತು ವಸತಿ ನಿಲಯಗಳಲ್ಲಿ ಮಾದಕ ವ್ಯಸನಿಗಳು ಸಿಕ್ಕು ಬಿದ್ದರೆ ಅಂತಹ ಸಂಸ್ಥೆಗೆ ಸರಕಾರದಿಂದ ಸಿಗುವ ಸೌಲಭ್ಯ ತಡೆಹಿಡಿಯುವಂತೆ ಸರಕಾರಕ್ಕೆ ಪತ್ರ ಬರೆಯಲಾಗುವುದು ಎಂದು ನಗರ ಪೊಲೀಸ್‌ ಆಯುಕ್ತ ಡಾ. ಡಿ.ಸಿ. ರಾಜಪ್ಪ ಹೇಳಿದರು.
Vijaya Karnataka Web BLG-0908-2-52-9MAHESH4


ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಶಾಲೆ, ಕಾಲೇಜು ಮತ್ತು ಸೂಕ್ಷ್ಮ ಪ್ರದೇಶಗಳ ಮೇಲೆ ನಿಗಾ ಇಡಲು ಈಗಾಗಲೆ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪೊಲೀಸ್‌ ಅಧಿಕಾರಿಗಳು ಪ್ರತಿ ದಿನ ಒಂದು ಕಾಲೇಜು ಮತ್ತು ವಸತಿ ನಿಲಯಕ್ಕೆ ಭೇಟಿ ನೀಡಿ ಆಡಳಿತ ಮಂಡಳೊಂದಿಗೆ ಚರ್ಚಿಸಲಿದ್ದಾರೆ. ಈಗಾಗಲೆ ಎಲ್ಲ ಶಾಲೆ-ಕಾಲೇಜುಗಳಲ್ಲಿ ಡ್ರಗ್ಸ್‌ ವಿರೋಧಿ ಸಮಿತಿ ಬಲಪಡಿಸಲು ಸೂಚನೆ ನೀಡಲಾಗಿದೆ. ಆದಾಗ್ಯೂ, ಶಾಲೆ-ಕಾಲೇಜುಗಳಲ್ಲಿ ಮಾದಕ ವ್ಯಸನಿಗಳು ಸಿಕ್ಕು ಬಿದ್ದರೆ ಸೂಕ್ತ ಕ್ರಮಕ್ಕಾಗಿ ಸರಕಾರಕ್ಕೆ ಪತ್ರ ಬರೆಯಲಾಗುವುದು ಎಂದರು.

ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಬಳಕೆ, ಮಾರಾಟ ನಗರದ ಉದ್ಯಾನ ಮತ್ತು ಪಾಳು ಬಿದ್ದಿರುವ ಹಳೇ ಕಟ್ಟಡಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಆದ್ದರಿಂದ, ಪಾಳು ಬಿದ್ದಿರುವ ಕಟ್ಟಡಗಳ ಬಳಿ ಪೊಲೀಸ್‌ ಗಸ್ತು ಹೆಚ್ಚಿಸಲಾಗಿದೆ. ಉದ್ಯಾನಗಳಲ್ಲಿ ನಡೆಯುವ ಅನಧಿಕೃತ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ರಾತ್ರಿ 7 ಗಂಟೆ ನಂತರ ಸಾರ್ವಜನಿಕ ಪ್ರವೇಶ ನಿಷೇಧಿಸಲು ನಿರ್ಧರಿಸಲಾಗಿದೆ. ಉದ್ಯಾನವನಗಳ ಸುತ್ತಲೂ ಭದ್ರತಾ ಸಿಬ್ಬಂದಿ ಹೆಚ್ಚಿಸಲು ಮಹಾನಗರ ಪಾಲಿಕೆ ಆಯುಕ್ತರೊಂದಿಗೂ ಚರ್ಚಿಸಲಾಗಿದೆ ಎಂದು ವಿವರಿಸಿದರು.

2018ರ ಜನವರಿಯಿಂದ ಇಲ್ಲಿಯವರೆಗೆ ದಾಖಲಿಸಿದ 11 ಪ್ರಕರಣಗಳಲ್ಲಿ 51 ಜನರನ್ನು ಬಂಧಿಸಲಾಗಿದೆ. ಅಲ್ಲದೆ, 24 ಲಕ್ಷ ರೂ. ಮೌಲ್ಯದ ಗಾಂಜಾ ಕೂಡ ಜಪ್ತಿ ಮಾಡಲಾಗಿದೆ ಎಂದರು.

ಡಿಸಿಪಿ ಸೀಮಾ ಲಾಟ್ಕರ್‌ ಮತ್ತು ಮಹಾನಿಂಗ ನಂದಗಾಂವಿ ಇದ್ದರು.

12ರಂದು ಮ್ಯಾರಥಾನ್‌: ಪ್ರತಿಯೊಬ್ಬ ನಾಗರಿಕನ ಉತ್ತಮ ಆರೋಗ್ಯ ಇಡೀ ನಗರದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಬೆಳಗಾವಿ ನಗರದ ಜನತೆಯಲ್ಲಿ ಆರೋಗ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸಲು ಆ. 12 ರಂದು ಮ್ಯಾರಥಾನ್‌ ಆಯೋಜಿಸಲಾಗಿದ್ದು ಎಂದು ನಗರ ಪೊಲೀಸ್‌ ಆಯುಕ್ತ ಡಾ. ಡಿ.ಸಿ.ರಾಜಪ್ಪ ಹೇಳಿದರು.

ಅಂದು ಬೆಳಗ್ಗೆ 6.30 ಗಂಟೆಗೆ ನಗರದ ಸಿಪಿಎಡ್‌ ಮೈದಾನದಿಂದ ಆರಂಭಗೊಳ್ಳುವ ಮ್ಯಾರಥಾನ್‌ 5 ಮತ್ತು 10 ಕಿಮೀ ಎರಡು ವಿಭಾಗಗಳಲ್ಲಿ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾನೂನು ಸುವ್ಯವಸ್ಥೆ ಬಲಪಡಿಸುವಲ್ಲಿ ಪೊಲೀಸರ ಜತೆಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು. ಆ. 10 ಹಾಗೂ 11ರಂದು ಪೊಲೀಸರಲ್ಲಿ ಮಾನಸಿಕ ಹಾಗೂ ದೈಹಿಕ ಸದೃಢತೆ ಹೆಚ್ಚಿಸುವ ಉದ್ದೇಶಕ್ಕಾಗಿ ವಿಶೇಷ ಉಪನ್ಯಾಸ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಡಿ.ಸಿ. ರಾಜಪ್ಪ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ