ಬೆಳಗಾವಿ: ಪ್ರತಿಯೊಬ್ಬರೂ ಜಾತ್ಯತೀತ ಮನೋಭಾವ ಬೆಳೆಸಿಕೊಂಡಾಗ ಮಾತ್ರ ದಾಸಶ್ರೇಷ್ಠ ಕನಕದಾಸರಿಗೆ ನಿಜವಾದ ಗೌರವ ಸಲ್ಲಲಿದೆ ಎಂದು ಜಿಲ್ಲಾಧಿಕಾರಿ ಎನ್.ಜಯರಾಂ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಕುಮಾರಗಂಧರ್ವ ರಂಗಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕನಕದಾಸರು ಕ್ಲಿಷ್ಟ ವಿಷಯಗಳು ಹಾಗೂ ವೈಚಾರಿಕ ಚಿಂತನೆಗಳನ್ನು ಆಡು ಭಾಷೆಯಲ್ಲಿ ಜನರಿಗೆ ತಲುಪಿಸುವ ಮೂಲಕ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಸ್ಥಾನ ಗಳಿಸಿದ್ದಾರೆ. ಅವರ ವೈಚಾರಿಕತೆಯ ಕೀರ್ತನೆಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ ಎಂದರು.
ಕರ್ನಾಟಕ ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕ ಡಾ.ವೆಂಕಟಗಿರಿ ದಳವಾಯಿ ಮಾತನಾಡಿ, ಅನೇಕ ಕೀರ್ತನಕಾರರು ಧರ್ಮ, ಆಚರಣೆಗೆ ಆದ್ಯತೆ ನೀಡಿದ್ದಾರೆ. ಆದರೆ, ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಜ್ಞಾನಕ್ಕೆ ಆದ್ಯತೆ ನೀಡಿ ದಾಸಶ್ರೇಷ್ಠ ಎನಿಸಿದ್ದಾರೆ. ಜ್ಞಾನ ಮತ್ತು ಶಿಕ್ಷ ಣದ ಹಸಿವು ತುಂಬಿರುವ ಕನಕದಾಸರ ಕೀರ್ತನೆಗಳಲ್ಲಿ ಮಾತ್ರ ಲೋಕಪ್ರೀತಿ ಕಾಣಿಸುತ್ತದೆ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪ್ರಕಟಿಸಿರುವ 'ಸಂತಕವಿ ಕನಕದಾಸರು' ಕೃತಿಯನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಅರುಣ ಕಟಾಂಬಳೆ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಆಯುಕ್ತ ಶಶಿಧರ ಕುರೇರ, ತಹಸೀಲ್ದಾರ ಗಿರೀಶ ಸ್ವಾದಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಗುರುನಾಥ ಕಡಬೂರ, ಯಲ್ಲಪ್ಪ ಕುರುಬರ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸ್ವಾಗತಿಸಿದರು. ನೆಹರು ಯುವಕೇಂದ್ರದ ಜಿಲ್ಲಾ ಸಂಯೋಜಕ ಎಸ್.ಯು. ಜಮಾದಾರ ನಿರೂಪಿಸಿದರು. ಉಮಾಮಹೇಶ್ವರಿ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬಿಎಡ್ ಕಾಲೇಜಿನ ವಿದ್ಯಾರ್ಥಿಗಳು ಕೀರ್ತನೆ ಪ್ರಸ್ತುಪಡಿಸಿದರು. ಗುರುನಾಥ ಶಾಸ್ತ್ರಿ ಕರಿಕಟ್ಟಿ ಕಥಾ ಕೀರ್ತನ ನಡೆಸಿಕೊಟ್ಟರು.
ಇದಕ್ಕೂ ಮುನ್ನ ನಗರದ ಕನಕದಾಸ ವೃತ್ತದಿಂದ ಕುಮಾರಗಂಧರ್ವ ರಂಗಮಂದಿರದವರೆಗೆ ಭವ್ಯ ಮೆರವಣಿಗೆ ನಡೆಯಿತು. ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಬಹುಮಾನ ವಿತರಣೆ: ಕನಕ ಸಾಹಿತ್ಯ ಕುರಿತು ಆಯೋಜಿಸಿದ್ದ ಜಿಲ್ಲಾಮಟ್ಟದ ಪ್ರಬಂಧ ರಚನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೂ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಬೈಲಹೊಂಗಲ ತಾಲೂಕಿನ ನಯಾನಗರ ಸರ್ಕಾರಿ ಪ್ರೌಢಶಾಲೆಯ ಪೂಜಾ ಮಡಿವಾಳಪ್ಪ ಅಬ್ಬಾರ (ಪ್ರಥಮ), ಕಿತ್ತೂರಿನ ಸರ್ಕಾರಿ ಪ್ರೌಢಶಾಲೆಯ ದಾನೇಶ್ವರಿ ಬಸವರಾಜ ನೀಲಗಾರ (ದ್ವಿತೀಯ), ಬೆಳಗಾವಿ ತಾಲೂಕಿನ ಕರಡಿಗುದ್ದಿ ಸರ್ಕಾರಿ ಶಾಲೆಯ ಅಕ್ಷ ತಾ ಶಂಕರ ನಾವಿ (ತೃತೀಯ) ಬಹುಮಾನ ಪಡೆದುಕೊಂಡರು. ಹಿರೇಬಾಗೇವಾಡಿಯ ಸಹನಾ ಪಾಟೀಲ, ರಾಮದುರ್ಗ ತಾಲೂಕಿನ ಆನೇಗುದ್ದಿಯ ಸದಾಶಿವ ಮಹದೇವಪ್ಪ ಹರನಟ್ಟಿ ಸಮಾಧಾನಕರ ಬಹುಮಾನ ಸ್ವೀಕರಿಸಿದರು.