ಆ್ಯಪ್ನಗರ

ಕೆಎಲ್‌ಇ ಸಂಸ್ಥೆ ದೊಡ್ಡ ಆಸ್ತಿ

ಕೆಎಲ್‌ಇ ಸಂಸ್ಥೆ ರಾಜ್ಯ ಮತ್ತು ರಾಷ್ಟ್ರಕ್ಕೆ ದೊಡ್ಡ ಆಸ್ತಿ ಎಂದು ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Vijaya Karnataka 24 Nov 2018, 5:00 am
ಬೆಳಗಾವಿ: ಕೆಎಲ್‌ಇ ಸಂಸ್ಥೆ ರಾಜ್ಯ ಮತ್ತು ರಾಷ್ಟ್ರಕ್ಕೆ ದೊಡ್ಡ ಆಸ್ತಿ ಎಂದು ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Vijaya Karnataka Web BLG-2311-2-52-23MAHESH2


ಇಲ್ಲಿನ ಜೆಎನ್‌ಎಂಸಿ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಕೆಎಲ್‌ಇ ಸಂಸ್ಥೆಯ 103ನೇ ಸಂಸ್ಥಾಪನಾ ದಿನಾಚರಣೆ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ''ಹುಟ್ಟು ಸಾವುಗಳ ನಡುವೆ ನಾವು ಮಾಡಿರುವ ಸಾಧನೆ ಮಾತ್ರ ಅಜರಾಮರವಾಗಿ ಉಳಿಯುತ್ತದೆ. ಅದೇ ರೀತಿ, ಕೆಎಲ್‌ಇ ಸಂಸ್ಥೆಯನ್ನು ಕಟ್ಟಿದ ಏಳು ಜನ ಶಿಕ್ಷಕರ ನಿಸ್ವಾರ್ಥ ಸೇವೆ ಇಂದು ಇತಿಹಾಸದ ಪುಟಗಳಲ್ಲಿ ಅಮರವಾಗಿದೆ'', ಎಂದರು.

''ಕೆಎಲ್‌ಇ ಸಂಸ್ಥೆ ಇಂದು ಜಾಗತಿಕವಾಗಿ ವಿಸ್ತರಣೆಗೊಂಡು ಸರಕಾರಕ್ಕಿಂತಲೂ ಗುಣಮಟ್ಟದ ಶೈಕ್ಷಣಿಕ ಮತ್ತು ಆರೋಗ್ಯ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿದೆ. ಇಂತಹ ಸಾಧನೆಗೆ ಶತಮಾನದ ಹಿಂದೆ ಬುನಾದಿ ಹಾಕಿದ ಸಾಮಾಜಿಕ ಕಳಕಳಿಯ ಶಿಕ್ಷಕರ ದೂರದೃಷ್ಟಿಯೇ ಮೂಲ ಪ್ರೇರಣೆ'', ಎಂದರು.

ಸದಾ ಮಾದರಿ: ''ಸಂಸ್ಥೆಯ ಕಾರಾರ‍ಯಧ್ಯಕ್ಷ ಡಾ.ಪ್ರಭಾಕರ ಕೋರೆ ಸಪ್ತರ್ಷಿಗಳು ಹಾಕಿಕೊಟ್ಟ ದಾರಿಯಲ್ಲಿ ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸುತ್ತಿದ್ದಾರೆ. 162 ಸಂಸ್ಥೆಗಳನ್ನು ಹುಟ್ಟುಹಾಕಿ ಲಕ್ಷಾಂತರ ವಿದ್ಯಾರ್ಥಿಗಳನ್ನು ಪದವೀಧರರನ್ನಾಗಿಸುವುದರ ಜತೆಗೆ 16 ಸಾವಿರ ಜನರಿಗೆ ಉದ್ಯೋಗ ಕಲ್ಪಿಸಿರುವ ಕೆಎಲ್‌ಇ ಸಾಧನೆ ಸದಾ ಮಾದರಿ'', ಎಂದು ಶ್ಲಾಘಿಸಿದರು.

ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್‌ ಗೌರವ ಅತಿಥಿಗಳಾಗಿ ಆಗಮಿಸಿದ್ದರು. ಕೆಎಲ್‌ಇ ಸಂಸ್ಥೆ ಅಧ್ಯಕ್ಷ ಶಿವಾನಂದ ಕೌಜಲಗಿ ಅಧ್ಯಕ್ಷತೆ ವಸಿದ್ದರು. ಡಾ.ಅವಿನಾಶ ಕವಿ ನಿರೂಪಿಸಿದರು. ಕೆಎಲ್‌ಇ ಕಾರ್ಯದರ್ಶಿ ಡಾ.ಬಿ.ಜಿ.ದೇಸಾಯಿ ವಂದಿಸಿದರು. ಕೆಎಲ್‌ಇ ಸಂಗೀತ ವಿದ್ಯಾಲಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪ್ರಾರ್ಥಿಸಿದರು.

ಬೆಳಗಾವಿ ಇಲ್ಲೇ ಉಳಿಯಲು ಕೆಎಲ್‌ಇ ಕಾರಣ: ಡಾ. ಕೋರೆ

ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ, ''ಕೆಎಲ್‌ಇ ಸಂಸ್ಥೆ ಕಟ್ಟಿದ ಸಪ್ತರ್ಷಿಗಳು ಮನಸ್ಸು ಮಾಡಿದ್ದರೆ ಅಂದಿನ ಆಡಳಿತದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಬಹುದಿತ್ತು. ಆದರೆ, ಸಮಾಜದ ಮಕ್ಕಳಿಗೆ ಗುಣಮಟ್ಟದ ಸಿಗಬೇಕು ಎನ್ನುವ ಉದ್ದೇಶದಿಂದ ಕೆಎಲ್‌ಇ ಹುಟ್ಟುಹಾಕಿದರು. ಭಾಷಾ ದ್ವೇಷದ ಬೆಂಕಿಯಲ್ಲಿ ಬೇಯುತ್ತ ಬಂದಿರುವ ಬೆಳಗಾವಿ ರಾಜ್ಯದಲ್ಲಿಯೇ ಉಳಿಯಲು ಕೆಎಲ್‌ಇಯ ಕನ್ನಡ ಪರ ಕಾಳಜಿಯೂ ಕಾರಣ'', ಎಂದರು. ''ಕೆಎಲ್‌ಇ ಸಂಸ್ಥೆ ಕೇವಲ ಶಿಕ್ಷಣಕ್ಕೆ ಮಾತ್ರ ಸೀಮಿತಗೊಳ್ಳದೆ ಸಾಮಾಜಿಕ ಕಾರ್ಯಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತ ಬಂದಿದೆ. ಇದೇ ಕಾರಣದಿಂದ ಸಂಸ್ಥಾಪನೆ ದಿನಾಚರಣೆಯಂದು ರಾಷ್ಟ್ರ ಮತ್ತು ಅಂತಾÜರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಸನ್ಮಾನಿಸುವ ಕಾರ್ಯ ಮಾಡಲಾಗುತ್ತಿದೆ'', ಎಂದರು.

ಕೋರೆ ಮೆಚ್ಚಿದ ಡಿಕೆಶಿ
ಸಮಾರಂಭದಲ್ಲಿ ಸಚಿವ ಡಿ.ಕೆ. ಶಿವಕುಮಾರ್‌, ಡಾ. ಪ್ರಭಾಕರ ಕೋರೆ ಅವರನ್ನು ಮನಸಾರೆ ಹೊಗಳಿದ್ದು ವಿಶೇಷ. ''ಕೆಎಲ್‌ಇ ಸಂಸ್ಥೆಯನ್ನು ಮಾತ್ರ ಬೆಳೆಸದ ಡಾ.ಪ್ರಭಾಕರ ಕೋರೆ ಬೆಳಗಾವಿಯ ಸರ್ವಾಂಗೀಣ ಬೆಳವಣಿಗೆಗೂ ಕಾರಣರಾಗಿದ್ದಾರೆ. ನರ್ಸಿಂಗ್‌ ವಿವಿ ಸ್ಥಾಪನೆ ವಿಷಯ ಮಂಡಿಸುತ್ತಿದ್ದಂತೆ ಅದು ಬೆಳಗಾವಿಗೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಕೆಎಲ್‌ಇ ಆವರಣದಲ್ಲಿ ಚಳಿಗಾಲದ ಅಧಿವೇಶನಕ್ಕೆ ಅವಕಾಶ ನೀಡುವ ಮೂಲಕ ಶಾಶ್ವತ ಸುವರ್ಣವಿಧಾನಸೌಧ ನಿರ್ಮಾಣಕ್ಕೂ ಕಾರಣರಾಗಿದ್ದಾರೆ. ವಿಟಿಯು ಬೆಳಗಾವಿಗೆ ಬರಲೂ ಕೋರೆ ಕಾರಣಕರ್ತರು'', ಎಂದು ಮೆಚ್ಚಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ