ಆ್ಯಪ್ನಗರ

ನವರಾತ್ರಿ ಸಂಭ್ರಮಕ್ಕೆ ಕೊಲ್ಲಾಪುರ ಮಹಾಲಕ್ಷ್ಮೀ ಮಂದಿರ ಸಜ್ಜು

ಇದೇ 10ರಿಂದ ಪ್ರಾರಂಭವಾಗಲಿರುವ ನವರಾತ್ರಿ ಉತ್ಸವ ಪ್ರಯುಕ್ತ ಕೊಲ್ಲಾಪುರದ ಶ್ರೀ ಮಹಾಲಕ್ಷ್ಮೀ ಮಂದಿರ ಸಿದ್ಧಗೊಳ್ಳುತ್ತಿದೆ.

Vijaya Karnataka 8 Oct 2018, 5:00 am
ಇಚಲಕರಂಜಿ: ಇದೇ 10ರಿಂದ ಪ್ರಾರಂಭವಾಗಲಿರುವ ನವರಾತ್ರಿ ಉತ್ಸವ ಪ್ರಯುಕ್ತ ಕೊಲ್ಲಾಪುರದ ಶ್ರೀ ಮಹಾಲಕ್ಷ್ಮೀ ಮಂದಿರ ಸಿದ್ಧಗೊಳ್ಳುತ್ತಿದೆ.
Vijaya Karnataka Web BEL-7IVH2


ಕಳೆದ ಎಂಟು ದಿನಗಳಿಂದ ಪ್ರಾರಂಭವಾದ ಮಂದಿರ ಪರಿಸರದಲ್ಲಿಯ ಸ್ವಚ್ಛತೆಯ ಕಾರ್ಯ ಪೂರ್ಣಗೊಂಡಿದೆ. ಶನಿವಾರ ಅತ್ಯಾಧುನಿಕ ಯಂತ್ರಗಳ ಮುಖಾಂತರ ಗರ್ಭಗುಡಿ ಪರಿಸರದಲ್ಲಿಯ ಮಹಾಲಕ್ಷ್ಮೀ ಪ್ರತಿಮೆ ಸೇರಿ ಸಂಪೂರ್ಣ ಮಂದಿರ ಸ್ವಚ್ಛತೆಯ ಕಾರ್ಯ ಪೂರ್ಣಗೊಂಡಿದೆ.

ಮಹಾಲಕ್ಷ್ಮೀ ಮಂದಿರದೊಳಗಿನ ಸುರಕ್ಷ ತೆಗಾಗಿ ಪ್ರಸಕ್ತ ವರ್ಷ 50 ಸಿಸಿಟಿವಿ ಅಳವಡಿಸಲಾಗಿದ್ದು, ಕಂಟ್ರೋಲ್‌ ರೂಮ್‌ನಲ್ಲಿ ಇದರ ಮೇಲೆ ಪೊಲೀಸ್‌ ಕಣ್ಗಾವಲಿರಲಿದೆ. ಗರುಡ ಮಂಟಪದ ಹೊರಗೆ ಸ್ಕ್ರೀನ್‌ ಅಳವಡಿಸಲಾಗಿದ್ದು, ನವರಾತ್ರಿ ಸಂದರ್ಭದಲ್ಲಿ ಗರ್ಭಗುಡಿಯಲ್ಲಿ ನಡೆಯಲಿರುವ ಎಲ್ಲ ಪೂಜೆ, ವಿಧಿವಿಧಾನ, ಪಲ್ಲಕ್ಕಿ ಉತ್ಸವ, ಅಭಿಷೇಕ, ಕುಂಕುಮಾರ್ಚನೆ ಸೇರಿದಂತೆ ಸಾಲಂಕೃತ ಪೂಜೆ ನೋಡಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.

ನವರಾತ್ರಿ ಉತ್ಸವದಲ್ಲಿ ಪ್ರಸಕ್ತ ವರ್ಷ ದಿನಂಪ್ರತಿ ಚಿನ್ನದ ಪಲ್ಲಕ್ಕಿಯಲ್ಲಿ ಮಹಾಲಕ್ಷ್ಮೀಯ ಉತ್ಸವ ನಡೆಯಲಿದೆ. ಹಾಗಾಗಿ ಚಿನ್ನದ ಪಲ್ಲಕ್ಕಿಯ ಸ್ವಚ್ಛತೆ, ಮಹಾಲಕ್ಷ್ಮೀಯ ಅಲಂಕೃತ ಪೂಜಾ ಸಾಮಗ್ರಿಗಳ ಸ್ವಚ್ಛತೆ, ಮಂದಿರ ಪರಿಸರದಲ್ಲಿರುವ ಇನ್ನುಳಿದ ಮಂದಿರಗಳಲ್ಲಿಯ ಸ್ವಚ್ಛತೆಯ ಕಾರ್ಯ ನಡೆಸಲಾಗಿದ್ದು, ಮಂದಿರದಲ್ಲಿ ವಿದ್ಯುದೀಪಾಲಂಕಾರ ನಡೆಯುತ್ತಿದೆ.

ಪೊಲೀಸ್‌ ಬಂದೋಬಸ್ತ್‌: ನವರಾತ್ರಿ ಸಂದರ್ಭದಲ್ಲಿ ಮಹಾಲಕ್ಷ್ಮೀ ಮಂದಿರಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆಯಲ್ಲಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿದೆ. ನಿತ್ಯ ಬಾಂಬ್‌ ಶೋಧ ಪಥಕದಿಂದ ಮಂದಿರ ಪರಿಶೀಲಿಸಲು ಪೊಲೀಸ್‌ ಅಧೀಕ್ಷ ಕ ಡಾ.ಅಭಿನವ ದೇಶಮುಖ ಸೂಚಿಸಿದ್ದಾರೆ. ಶ್ವಾನದಳ ಸಹ ಸಿದ್ಧವಾಗಿದ್ದು ಭಾನುವಾರ ಪೊಲೀಸ್‌ ಪಡೆಯೊಂದಿಗೆ ಮಂದಿರ ಪರಿಶೀಲಿಸಲಾಯಿತು. ಭಕ್ತರ ಅನುಕೂಲಕ್ಕಾಗಿ ನವರಾತ್ರಿ ಉತ್ಸವ ಸಂದರ್ಭದಲ್ಲಿ ನಗರಪಾಲಿಕೆ (ಕೆಎಂಟಿ) ವತಿಯಿಂದ ದುರ್ಗಾದರ್ಶನ ವಿಶೇಷ ಬಸ್‌ ಸೇವೆ ಪ್ರಾರಂಭಿಸಲಾಗಿದೆ. ಆಗಮಿಸುವ ಭಕ್ತರಿಗೆ ಕೊಲ್ಲಾಪುರ ನಗರ ಸೇರಿದಂತೆ ಪ್ರಮುಖ 15 ದೇವತೆಗಳ ದರ್ಶನ ಮಾಡಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.

ಬೃಹತ್‌ ಮಂಟಪ: ಮಹಾಲಕ್ಷ್ಮೀ ದರ್ಶನಕ್ಕಾಗಿ ಆಗಮಿಸುವ ಭಕ್ತರಿಗಾಗಿ ಸರದಿಯಲ್ಲಿ ಆಗಮಿಸಲು ಮಂದಿರದ ಪೂರ್ವ ಪ್ರವೇಶ ದ್ವಾರದವರೆಗೆ ಮಂಟಪ ಹಾಕಲಾಗಿದೆ. ಏಕಕಾಲಕ್ಕೆ 20 ಸಾವಿರ ಭಕ್ತರು ಮಂಟಪದಲ್ಲಿ ನಿಲ್ಲುವ ವ್ಯವಸ್ಥೆ ಕಲ್ಪಿಸಲಾಗಿದೆ. ಜತೆಗೆ ಫ್ಯಾನ್‌, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಜನದಟ್ಟಣೆ ನಿಯಂತ್ರಣ ಹಾಗೂ ರೋಗಗಳು ಹರಡದಂತೆ ಎಚ್ಚರಿಕೆ ವಹಿಸಲಾಗಿದೆ. ಭಕ್ತರಿಗಾಗಿ ಉಚಿತ ರೋಗನಿರೋಧಕ ಔಷಧ ಹಂಚುವ ವ್ಯವಸ್ಥೆ ಮಾಡಲಾಗಿದೆ. ನಿರಂತರ 9 ದಿನಗಳವರೆಗೆ ನಡೆಯಲಿರುವ ಉತ್ಸವದಲ್ಲಿ ಮಹಾಲಕ್ಷ್ಮೀ ದೇವಿಗೆ ವಿವಿಧ ರೂಪಗಳಲ್ಲಿ ಅಲಂಕಾರ ನಡೆಯಲಿದೆ. ನವರಾತ್ರಿ ಉಪವಾಸಗೈಯುವ ಭಕ್ತರಿಗೆ ದಿನನಿತ್ಯ ಮಹಾಲಕ್ಷ್ಮೀ ದೇವಿಯ ವಿಶೇಷ ಪೂಜಾಲಂಕಾರ ಕಾಣುವ ಭಾಗ್ಯ ದೊರೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ