ಆ್ಯಪ್ನಗರ

ರೈಲಿನಲ್ಲಿ ಮಣ್ಣಿನ ಕಪ್‌, ಬಾಟಲಿ: ಬೆಳಗಾವಿಯಲ್ಲಿ ಕುಂಬಾರರ ಜತೆ ಸಭೆ ನಡೆಸಿದ ಸಚಿವ ಅಂಗಡಿ

ಆಧುನಿಕ ಮಾದರಿಯಲ್ಲಿ ತಯಾರಿಸಿದ ಮಣ್ಣಿನ ಕಪ್‌ಗಳನ್ನು ತಂದಿದ್ದ ಸವದತ್ತಿ ತಾಲೂಕಿನ ಹೂಲಿ ಗ್ರಾಮದ ಸಂಗಪ್ಪ ಕುಂಬಾರ, ಪ್ಲಾಸ್ಟಿಕ್‌ ಬಾಟಲಿಯನ್ನೂ ಮೀರಿಸುವ ಮಾದರಿಯ ಮಣ್ಣಿನ ಬಾಟಲಿ ಪೂರೈಸುವುದಾಗಿ ಸಭೆಯಲ್ಲಿ ಸಚಿವರ ಗಮನ ಸೆಳೆದರು

Vijaya Karnataka 4 Sep 2019, 7:46 am
ಬೆಳಗಾವಿ: ಮುಂಬರುವ ಗಾಂಧಿ ಜಯಂತಿಯಿಂದ ರೈಲುಗಳಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇಧಕ್ಕೆ ರೈಲ್ವೆ ಇಲಾಖೆ ಸಿದ್ಧತೆ ಆರಂಭಿಸಿದ ಹಿನ್ನೆಲೆಯಲ್ಲಿ ಇಲಾಖೆಯ ಸಚಿವ ಸುರೇಶ ಅಂಗಡಿ ಪ್ಲಾಸ್ಟಿಕ್‌ಗೆ ಪರ್ಯಾಯ ವಸ್ತುಗಳ ಕುರಿತು ಮಂಗಳವಾರ ಬೆಳಗಾವಿಯಲ್ಲಿ ಅಧಿಧಿಕಾರಿಗಳೊಂದಿಗೆ ಚರ್ಚಿಸಿದರು. ಪ್ಲಾಸ್ಟಿಕ್‌ ಕಪ್‌ ಮತ್ತು ಪ್ಲಾಸ್ಟಿಕ್‌ ನೀರಿನ ಬಾಟಲಿಗಳ ಬದಲಿಗೆ ಮಣ್ಣಿನಿಂದ ತಯಾರಿಸಿದ ಕಪ್‌, ಬಾಟಲಿ ಮತ್ತು ಗ್ರಾಮೀಣ ಭಾಗದಲ್ಲಿ ಪ್ರಚಲಿತದಲ್ಲಿರುವ 'ತತ್ರಾಣಿ' ಬಳಕೆಯ ಸಾಧ್ಯತೆ ಕುರಿತು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Vijaya Karnataka Web Chai


ಆಧುನಿಕ ಮಾದರಿಯಲ್ಲಿ ತಯಾರಿಸಿದ ಮಣ್ಣಿನ ಕಪ್‌ಗಳನ್ನು ತಂದಿದ್ದ ಸವದತ್ತಿ ತಾಲೂಕಿನ ಹೂಲಿ ಗ್ರಾಮದ ಸಂಗಪ್ಪ ಕುಂಬಾರ, ಪ್ಲಾಸ್ಟಿಕ್‌ ಬಾಟಲಿಯನ್ನೂ ಮೀರಿಸುವ ಮಾದರಿಯ ಮಣ್ಣಿನ ಬಾಟಲಿ ಪೂರೈಸುವುದಾಗಿ ಸಭೆಯಲ್ಲಿ ಸಚಿವರ ಗಮನ ಸೆಳೆದರು. ಮಣ್ಣಿನ ಕಪ್‌, ಬಾಟಲಿಯನ್ನು ಇಲಾಖೆಯ ಅಧಿಕಾರಿಗಳಿಗೆ ನೀಡಿದ ಸುರೇಶ ಅಂಗಡಿ, ಇವುಗಳ ಬಳಕೆ ಕುರಿತು ಸೂಕ್ತ ಯೋಜನೆ ರೂಪಿಸಲು ಸೂಚಿಸಿದರು.

ಕೆಎಂಎಫ್‌ ಸೇರಿದಂತೆ ಗೋವಾ ರಾಜ್ಯಕ್ಕೂ ಮಣ್ಣಿನ ಕಪ್‌ ಮತ್ತು ದೀಪಗಳನ್ನು ಪೂರೈಕೆ ಮಾಡುತ್ತಿರುವ ಹೂಲಿ ಗ್ರಾಮದ ಸಂಗಪ್ಪ ಕುಂಬಾರ, ಕುಂಬಾರಿಕೆ ಉದ್ಯಮವನ್ನು ಇನ್ನಷ್ಟು ವಿಸ್ತರಣೆ ಮಾಡುವ ಉದ್ದೇಶದಿಂದ ಸ್ಥಳೀಯ ಬ್ಯಾಂಕ್‌ನಲ್ಲಿ ಮುದ್ರಾ ಯೋಜನೆಯಡಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಸಕಾಲದಲ್ಲಿ ಸಾಲ ಸಿಗದೆ ಇದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಬಳಿಕ ಅವರಿಗೆ ಸಾಲ ಸೌಲಭ್ಯ ಸಿಕ್ಕಿತ್ತು. ಲಾಲುಪ್ರಸಾದ್‌ ರೈಲ್ವೆ ಸಚಿವರಾಗಿದ್ದ ವೇಳೆ ರೈಲುಗಳಲ್ಲಿ ಮಣ್ಣಿನ ಕಪ್‌ ಬಳಕೆ ಆರಂಭಿಸಿದ್ದರು. ಆ ವೇಳೆ ಸಂಗಪ್ಪ ಕುಂಬಾರ ಹುಬ್ಬಳ್ಳಿ ರೈಲ್ವೆ ವಿಭಾಗಕ್ಕೆ ಮಣ್ಣಿನ ಕಪ್‌ ಪೂರೈಕೆ ಮಾಡುತ್ತಿದ್ದರು.

ರೈಲ್ವೆ ಇಲಾಖೆಯನ್ನು ಪರಿಸರ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ರೈಲಿನಲ್ಲಿ ಮಣ್ಣಿನ ಕಪ್‌ ಬಳಸಲು ನಿರ್ಧರಿಸಲಾಗಿದೆ. ಎಲ್ಲ ರೈಲುಗಳಲ್ಲಿ ಏಕಕಾಲಕ್ಕೆ ಮಣ್ಣಿನ ಕಪ್‌ ಮತ್ತು ಬಾಟಲಿ ಪೂರೈಕೆ ಕಷ್ಟವಾದ್ದರಿಂದ ಕೆಲವು ರೈಲಿನಲ್ಲಿ ಪ್ರಾಯೋಗಿಕವಾಗಿ ಪೂರೈಸಲಾಗುವುದು. ಪ್ರಯಾಣಿಕರ ಸ್ಪಂದನೆ ಆಧರಿಸಿ ಎಲ್ಲ ರೈಲುಗಳಲ್ಲಿ ಇದನ್ನು ವಿಸ್ತರಣೆ ಮಾಡಲಾಗುವುದು-ಸುರೇಶ ಅಂಗಡಿ

ರೈಲ್ವೆ ಇಲಾಖೆ ರಾಜ್ಯ ಸಚಿವ

ದೂರದ ಊರಿಗೆ ಪ್ರಯಾಣಿಸುವ ರೈಲುಗಳಲ್ಲಿ ಅ.2ರಿಂದ ಪ್ರಾಯೋಗಿಕವಾಗಿ ಮಣ್ಣಿನ ಕಪ್‌ ಬಳಕೆ ಮಾಡಲು ನಿರ್ಧರಿಸಲಾಗಿದೆ. ಒಂದು ಬಾರಿ ಬಳಕೆ ಮಾಡುವ ಪ್ಲಾಸ್ಟಿಕ್‌ ವಸ್ತುಗಳ ಬಳಕೆ ನಿಲ್ಲಿಸುವಂತೆ ರೈಲುಗಳಲ್ಲಿ ಆಹಾರ ಪೂರೈಕೆ ಮಾಡುವ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ- ಇ.ವಿಜಯಾ, ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ- ನೈರುತ್ಯ ರೈಲ್ವೆ ವಿಭಾಗ, ಹುಬ್ಬಳ್ಳಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ