ಆ್ಯಪ್ನಗರ

ಮಳೆ ಸುರಿದರೂ ಕೆರೆಗಳಿಗೆ ಬಾರದ ನೀರು

ಸಂಜೀವಕುಮಾರ ತಿಲಗರ, ಎಂ.ಕೆ.ಹುಬ್ಬಳ್ಳಿ ಕಳೆದ ಕೆಲವು ದಿನಗಳಿಂದ ಎಂ.ಕೆ.ಹುಬ್ಬಳ್ಳಿ ಹಾಗೂ ಸುತ್ತಮುತ್ತಲಿನ ...

Vijaya Karnataka 10 Jul 2019, 5:00 am
ಸಂಜೀವಕುಮಾರ ತಿಲಗರ, ಎಂ.ಕೆ.ಹುಬ್ಬಳ್ಳಿ
Vijaya Karnataka Web BEL-09MKH2(1)

ಕಳೆದ ಕೆಲವು ದಿನಗಳಿಂದ ಎಂ.ಕೆ.ಹುಬ್ಬಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಮಲಪ್ರಭಾ ನದಿ, ಹಳ್ಳ ತುಂಬಿ ಹರಿಯುತ್ತಿವೆ. ಆದರೆ ಪಟ್ಟಣ ಸೇರಿದಂತೆ ಕಿತ್ತೂರು ತಾಲೂಕಿನ ಅನೇಕ ಕೆರೆಗಳಲ್ಲಿ ಇನ್ನೂ ನೀರು ತುಂಬಿಕೊಂಡಿಲ್ಲ.

ಎಂ.ಕೆ. ಹುಬ್ಬಳ್ಳಿಯ ವ್ಯಾಪ್ತಿಯಲ್ಲಿ ಬಡಿಗೇರ ಕೆರೆ, ನಮಾಜ ಕೆರೆ, ರಾಹುತ ಕೆರೆ, ಕಮಾಂಬ ಕೆರೆ, ಶಿವನ್ನವರ ಕೆರೆ, ಕರವಿನಕೊಪ್ಪದಾರ ಕೆರೆ, ಬಾಬನ್ನವರ ಕೆರೆ, ಗದ್ದಿಕೆರೆ, ಕುಂಬಾರಟ್ಟಿ ಕೆರೆ, ಜಾಡರ ಕೆರೆ, ಗ್ರಾಪಂ ಕೆರೆ (ತುಂಬುಕೆರೆ), ಹುಬಳಕವ್ವನ ಕೆರೆ, ಸಾಧುನ್ನವರ ಕೆರೆ, ಕತ್ತಿಯವರ ಕೆರೆ, ಕಟಿಗ್ಯಾನ ಕೆರೆ, ಆಶಮ್ಮನ ಕೆರೆ ಸೇರಿದಂತೆ ಒಟ್ಟು 18 ಕೆರೆಗಳಿವೆ. ಇವುಗಳಲ್ಲಿ ಕೆಲವೇ ಕೆಲವು ಕೆರೆಗಳಲ್ಲಿ ಮಳೆ ನೀರು ಸಂಗ್ರಹವಾಗಿದೆ.

ಕೆರೆಗೆ ನೀರು ಬಾರದಿರಲು ಕಾರಣ:
ಇಂಥ ಉತ್ತಮ ಮಳೆಗೂ ಈ ಕೆರೆಗಳಿಗೆ ನೀರು ಬಾರದೇ ಇರುವುದಕ್ಕೆ ಕಾರಣ ಏನಿರಬಹುದು ಎಂಬ ಪ್ರಶ್ನೆ ಸಹಜ. ಕೆರೆಗಳಿಗೆ ಜೀವನಾಡಿಯಂತಿರುವ ಮಳೆ ನೀರು ಕಾಲುವೆಗಳು ಮಂಗಮಾಯವಾಗಿವೆ. ಅನೇಕ ಕಾಲುವೆಗಳು ಕೆಲವೆಡೆ ಮುಚ್ಚಿ ಹೋಗಿವೆ. ಇನ್ನು ಅನೇಕ ಕಡೆ ಅಕ್ಷ ರಶಃ ನಾಪತ್ತೆಯಾಗಿವೆ. ಈ ಕಾಲುವೆಗಳ ಮೂಲಕ ಕೆರೆಗೆ ಬರುವ ನೀರು ಮಳೆಗಾಲದಲ್ಲಿ ಇನ್ನೆಲ್ಲೋ ಹರಿದು ಪೋಲಾಗುತ್ತಿದೆ. ಈ ಎಲ್ಲ ಕೆರೆಗಳಿಗೆ ಮಳೆ ನೀರು ಸರಾಗವಾಗಿ ಮಳೆಗಾಲದಲ್ಲಿ ಹರಿದು ಬರುವಂತೆ ಮಾಡಿದರೆ ಬೇಸಿಗೆಯಲ್ಲಿ ಪಟ್ಟಣದಲ್ಲಿ ನೀರಿನ ಬವಣೆ ತಪ್ಪಿಸಬಹುದು ಎಂದು ಗ್ರಾಮಸ್ಥರು ವಿವರ ನೀಡುತ್ತಾರೆ.

ಕೆಲವು ಕೆರೆಗಳಿಗೆ ಮಳೆ ನೀರು ಹರಿದು ಬರದಿರಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ ಕಾರಣ ಎಂಬ ಆರೋಪಗಳು ಇವೆ. ಹೆದ್ದಾರಿ ಪ್ರಾಧಿಕಾರವು ರಸ್ತೆ ನಿರ್ಮಾಣದ ವೇಳೆಯಲ್ಲಿ ಕೆರೆಗೆ ಹೋಗುವ ಕಾಲುವೆಗಳು ಚಿಕ್ಕದಾಗಿದ್ದು ಇದಕ್ಕೆ ಕಾರಣ. ಅವು ಸಹ ಹೂಳು ತುಂಬಿವೆ.

ಕಾಲುವೆಗಳು ಸ್ವಚ್ಛವಾಗಲಿ:
ಸರಕಾರ ನದಿಗಳಿಂದ ಕೆರೆಗೆ ನೀರು ತುಂಬುವ ಯೋಜನೆ ಮಾಡಿದೆ. ಅದರೊಂದಿಗೆ ಕಾಲುವೆಗಳನ್ನು ಸ್ವಚ್ಛಗೊಳಿಸಿದರೆ, ಮಳೆ ನೀರು ಸರಾಗವಾಗಿ ಕೆರೆಗಳನ್ನು ಸೇರುತ್ತದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಸ್ಥಳೀಯ ಆಡಳಿತ ಹಾಗೂ ಸಣ್ಣ ನೀರಾವರಿ ಇಲಾಖೆಯವರು ಕ್ರಮ ಕೈಗೊಳ್ಳಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ