ಆ್ಯಪ್ನಗರ

‘ಕೈ’ ಪ್ರಚಾರ ಕಣಕ್ಕೆ ಲಖನ್‌ ಜಾರಕಿಹೊಳಿ

ಗೋಕಾಕ: ರಮೇಶ್‌ ಜಾರಕಿಹೊಳಿ ಎಲ್ಲಿದ್ದಾರೆ, ಯಾವ ...

Vijaya Karnataka 13 Apr 2019, 5:00 am
ಗೋಕಾಕ : ರಮೇಶ್‌ ಜಾರಕಿಹೊಳಿ ಎಲ್ಲಿದ್ದಾರೆ, ಯಾವ ಪಕ್ಷದ ಪರವಿದ್ದಾರೆ ಎಂಬ ಪ್ರಶ್ನೆ, ಗೊಂದಲಗಳ ನಡುವೆ ಅವರ ಆಜ್ಞೆ ಪಾಲಕ ಸಹೋದರ ಲಖನ್‌ ಜಾರಕಿಹೊಳಿ ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರದ ಕಣಕ್ಕೆ ಧುಮುಕಿದ್ದಾರೆ.
Vijaya Karnataka Web BEL-12GOK1A


ಬೆಳಗಾವಿ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ. ವಿ.ಎಸ್‌. ಸಾಧುನವರ್‌ ಅವರ ಪರ ನಗರದ ಸಮುದಾಯ ಭವನದಲ್ಲಿ ಶುಕ್ರವಾರ ಸಂಜೆ ಆಯೋಜಿಸಲಾಗಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಸಹೋದರ ಸತೀಶ್‌ ಜಾರಕಿಹೊಳಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಲಖನ್‌, ''ಗೋಕಾಕದ ಎಲ್ಲ ಜನಪ್ರತಿನಿಧಿಗಳು ಕಾಂಗ್ರೆಸ್‌ ಪರವಾಗಿಯೇ ಕೆಲಸ ಮಾಡಬೇಕು'', ಎಂದು ಕರೆ ಕೊಟ್ಟರು.

ಸತೀಶ್‌ ಜಾರಕಿಹೊಳಿ ಮಾತನಾಡಿ, ''ಸೈನಿಕರು ಮೋದಿ ಬಂದ ಮೇಲೆ ಬಾರ್ಡರ್‌ ಕ್ರಾಸ್‌ ಮಾಡಿದ್ರಾ? ದೇಶದಲ್ಲಿನ ನೂರಾರು ಡ್ಯಾಂಗಳನ್ನು ಮೋದಿಯವರೇ ಕಟ್ಟಿಸಿದ್ರಾ?'', ಎಂದು ಪ್ರಶ್ನಿಸಿದರು. ''ಗೋಕಾಕ ಮೊದಲಿನಿಂದಲೂ ಕಾಂಗ್ರೆಸ್‌ನ ಭದ್ರಕೋಟೆ. ಈಗಲೂ ನಾವು ಇಲ್ಲಿ ನಮ್ಮ ಅಭ್ಯರ್ಥಿಗೆ ಹೆಚ್ಚಿನ ಲೀಡ್‌ ಕೊಡಬೇಕಿದೆ'', ಎಂದರು.

ಅಭ್ಯರ್ಥಿ ಡಾ. ವಿ.ಎಸ್‌. ಸಾಧುನವರ, ಗ್ರಾಮದೇವಿ ಕಮಿಟಿ ಮುಖಂಡ ಸಿದ್ಧಲಿಂಗ ದಳವಾಯಿ ಮಾತನಾಡಿದರು. ವೇದಿಕೆ ಮೇಲೆ ನಗರಸಭೆ ಹಿರಿಯ ಸದಸ್ಯ ಕೆ.ಎಂ. ಗೋಕಾಕ, ಎಸ್‌.ಎ. ಕೋತ್ವಾಲ, ಡಿ.ಎಂ. ದಳವಾಯಿ, ವಿನಯ ನಾವಲಗಟ್ಟಿ, ನಜೀರ ಶೇಖ ಮತ್ತಿತರರು ಉಪಸ್ಥಿರಿದ್ದರು.

ಬ್ಯಾನರಲ್ಲಿ ರಮೇಶ್‌ :
ಕಾಂಗ್ರೆಸ್‌ ಕಾರ್ಯಕರ್ತರ ಸಭೆಯ ವೇದಿಕೆಯಲ್ಲಿ ಅಳವಡಿಸಿದ್ದ ಬೃಹತ್‌ ಬ್ಯಾನರ್‌ನಲ್ಲಿ ರಮೇಶ್‌ ಜಾರಕಿಹೊಳಿ ಅವರ ಭಾವಚಿತ್ರವೂ ಇದ್ದುದು ಎಲ್ಲರ ಗಮನ ಸೆಳೆದು, ಚರ್ಚೆಗೆ ಗ್ರಾಸ ಒದಗಿಸಿತು.

ಸಂಸದ ಸುರೇಶ್‌ ಅಂಗಡಿ ಗಾಳಿ ಮೇಲೇ ಆಯ್ಕೆಯಾಗುತ್ತ ಬಂದಿದ್ದಾರೆ. ಈಗಲೂ ನನ್ನ ಮುಖ ನೋಡಬೇಡಿ, ಮೋದಿ ಮುಖ ನೋಡಿ ವೋಟ್‌ ಹಾಕಿ ಎನ್ನುತ್ತಿದ್ದಾರೆ. ಅವರು ಗೋಕಾಕದ ಅಳಿಯ. ಆದರೆ, ಗೋಕಾಕಕ್ಕೆ ಅವರ ಕೊಡುಗೆ ಮಾತ್ರ ಶೂನ್ಯ.
- ಸತೀಶ್‌ ಜಾರಕಿಹೊಳಿ, ಸಚಿವ

ನಮ್ಮ ಮನೆತನದವರು ಮೊದಲಿಂದಲೂ ಕಾಂಗ್ರೆಸ್‌ ಅನುಯಾಯಿಗಳು. ಕಾಂಗ್ರೆಸ್‌ ಪರವಾಗಿಯೇ ಕೆಲಸ ಮಾಡುವಂತೆ ಅಣ್ಣನಿಗೆ ಹೇಳುತ್ತೇನೆ.
- ಲಖನ್‌ ಜಾರಕಿಹೊಳಿ, ಮುಖಂಡ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ