ಆ್ಯಪ್ನಗರ

ವಿಮಾನ ನಿಲ್ದಾಣದ ರಸ್ತೆ ಚತುಷ್ಪಥವಾಗಲಿ

ಬೆಳಗಾವಿ: ಲಾರಿಗಳ ಪಾರ್ಕಿಂಗ್‌ನಿಂದ ಸಂಚಾರಕ್ಕೆ ಸಮಸ್ಯೆಯಾಗುತ್ತಿರುವ ...

Vijaya Karnataka 23 Jul 2019, 5:00 am
ಬೆಳಗಾವಿ : ಲಾರಿಗಳ ಪಾರ್ಕಿಂಗ್‌ನಿಂದ ಸಂಚಾರಕ್ಕೆ ಸಮಸ್ಯೆಯಾಗುತ್ತಿರುವ ರಾಯಚೂರು- ಬಾಚಿ ರಾಜ್ಯ ಹೆದ್ದಾರಿಯನ್ನು ಬೆಳಗಾವಿ ನಗರದಿಂದ ವಿಮಾನ ನಿಲ್ದಾಣದವರೆಗೆ ಚತುಷ್ಪಥ ಮಾಡಬೇಕು ಎಂದು ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗಿದೆ.
Vijaya Karnataka Web BLG-2207-2-52-22PRAMOD2


ರಾಷ್ಟ್ರೀಯ ಹೆದ್ದಾರಿ-4ರ ಸರ್ವಿಸ್‌ ರಸ್ತೆಯಿಂದ ವಿಮಾನ ನಿಲ್ದಾಣದವರೆಗೆ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ಬೆಳಗಾವಿಯಿಂದ ಹಾರಾಟ ನಡೆಸುವ ವಿಮಾನಗಳ ಸಂಖ್ಯೆಯೂ ಹೆಚ್ಚಾಗುತ್ತಿರುವುದರಿಂದ ಪ್ರಯಾಣಿಕರ ವಾಹನಗಳ ಓಡಾಟ ಇನ್ನಷ್ಟು ಹೆಚ್ಚಾಗಿದೆ. ಹಾಗಾಗಿ ಈ ರಸ್ತೆ ಅಗಲವಾಗಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆದಿದೆ.

ಈ ರಸ್ತೆಯ ಪಕ್ಕದಲ್ಲಿ ಲಾರಿಗಳನ್ನು ಪಾರ್ಕ್‌ ಮಾಡುತ್ತಿರುವುದರಿಂದ ರಸ್ತೆಯ ವಿಸ್ತಾರ ಕಡಿಮೆಯಾಗಿ ಸಮಸ್ಯೆಯಾಗುತ್ತಿರುವ ಬಗ್ಗೆ 'ವಿಮಾನ ನಿಲ್ದಾಣ ದಾರಿಗೆ ಲಾರಿ ಕಾಟ' ಎನ್ನುವ ಶೀರ್ಷಿಕೆಯಡಿ ಜು.22ರ ಸಂಚಿಕೆಯಲ್ಲಿ 'ವಿಜಯ ಕರ್ನಾಟಕ' ವರದಿ ಪ್ರಕಟಿಸಿತ್ತು. ಈ ವರದಿ ಆಧರಿಸಿ ಟ್ವಿಟರ್‌ನಲ್ಲಿ ಚರ್ಚೆಗಳು ನಡೆಯುತ್ತಿದ್ದು, ರಸ್ತೆ ಅಗಲೀಕರಣ ಅನಿವಾರ್ಯ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ಪೊಲೀಸ್‌ ಇಲಾಖೆ ಮೌನ :
ಸಾರ್ವಜನಿಕ ಸಮಸ್ಯೆ ಬಗ್ಗೆ ನಾಗರಿಕರಿಂದ ಪ್ರತಿಕ್ರಿಯೆಗಳು ಬರುತ್ತಿದ್ದರೂ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದ ಪೊಲೀಸ್‌ ಆಯುಕ್ತಾಲಯದಿಂದ ಸೋಮವಾರ ಯಾವುದೇ ಕ್ರಮ ಆಗಿಲ್ಲ. ಮತ್ತಷ್ಟು ಲಾರಿಗಳು ಅರ್ಧ ರಸ್ತೆ ನುಂಗಿ ನಿಂತಿದ್ದವು. ಇಲಾಖೆಯ ಈ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಈ ರಸ್ತೆಯಲ್ಲಿ ಸಂಚಾರ ಮಾಡುವುದೇ ತಲೆ ನೋವು. ಆದಷ್ಟು ಬೇಗ ಇದನ್ನು ಪರಿಹರಿಸಬೇಕು ಎಂದು ನೆಟ್ಟಿಗರು ಅನಿಸಿಕೆ ಹಂಚಿಕೊಂಡಿದ್ದಾರೆ.

ಚತುಷ್ಪಥಕ್ಕೆ 94 ಕೋಟಿ ರೂ. ಯೋಜನೆ :
ರಾಷ್ಟ್ರೀಯ ಹೆದ್ದಾರಿ-4 ಸರ್ವಿಸ್‌ ರಸ್ತೆಯಿಂದ ಸಾಂಬ್ರಾ (ವಿಮಾನ ನಿಲ್ದಾಣ) ಗ್ರಾಮದವರೆಗೆ ರಾಯಚೂರು-ಬಾಚಿ ರಸ್ತೆಯನ್ನು ಚತುಷ್ಪಥ ಮಾಡಲು ಲೋಕೋಪಯೋಗಿ ಇಲಾಖೆ 94 ಕೋಟಿ ರೂ. ವೆಚ್ಚದ ಕ್ರಿಯಾಯೋಜನೆ ರೂಪಿಸಿದೆ. ಈ ರಸ್ತೆ ವಿಸ್ತರಣೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ ಅವರು ಈ ಹಿಂದೆ ಲೋಕೋಪಯೋಗಿ ಇಲಾಖೆಗೆ ಸೂಚಿಸಿದ್ದರು. ಅದರಂತೆ ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ ರಸ್ತೆ ವಿಸ್ತರಣೆಗೆ ಯೋಜನೆ ರೂಪಿಸಲಾಗಿದೆ.

ರಾಜ್ಯ ಹೆದ್ದಾರಿಯ 9.3 ಕಿ.ಮೀ ಅಂತರವನ್ನು ಚತುಷ್ಪಥ ಮಾಡುವ ಯೋಜನೆ ಇದಾಗಿದೆ. ಗಟಾರ, ಕಿರು ಸೇತುವೆಯ ಕಾಂಕ್ರಿಟಿಕರಣವೂ ಇದರಲ್ಲಿ ಸೇರಿದೆ. ಜತೆಗೆ ರಸ್ತೆ ವಿಸ್ತರಣೆಯಿಂದ ಕೆಲ ಮರಗಳು ಅಪಾಯ ಎದುರಿಸಲಿವೆ. ಒಂದಷ್ಟು ಭೂ ಸ್ವಾಧೀನವೂ ನಡೆಯಬೇಕಿದ್ದರಿಂದ ಕೆಲ ಮನೆಗಳಿಗೆ ಹಾನಿಯಾಗಲಿದೆ ಎಂದು ಯೋಜನೆಯಲ್ಲಿ ತಿಳಿಸಲಾಗಿದೆ. ಆದರೆ, ಈ ಯೋಜನೆಯ ಪ್ರಸ್ತಾವ ಇನ್ನೂ ಕೇಂದ್ರ ಕಚೇರಿಗೆ ಸಲ್ಲಿಕೆಯಾಗಿಲ್ಲ. ಸಧ್ಯದಲ್ಲಿಯೇ ಅದನ್ನು ಸಲ್ಲಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ