ಆ್ಯಪ್ನಗರ

ಸಮ್ಮೇಳನದ ನಿರ್ಣಯಗಳತ್ತ ಸರಕಾರ ಗಮನಹರಿಸಲಿ

ಲಗಮಣ್ಣ ಸಣ್ಣಲಚ್ಚಪ್ಪಗೋಳ ಗೋಕಾಕ (ಬಸವರಾಜ ಕಟ್ಟಿಮನಿ ವೇದಿಕೆ) ''ಸಾಹಿತ್ಯ ಸಮ್ಮೇಳನದ ನಿರ್ಣಯಗಳನ್ನು ಈಡೇರಿಸುವಂತೆ ...

Vijaya Karnataka 30 Jun 2019, 5:00 am
ಲಗಮಣ್ಣ ಸಣ್ಣಲಚ್ಚಪ್ಪಗೋಳ ಗೋಕಾಕ (ಬಸವರಾಜ ಕಟ್ಟಿಮನಿ ವೇದಿಕೆ)
Vijaya Karnataka Web BLG-2906-2-52-29GOKAK20

''ಸಾಹಿತ್ಯ ಸಮ್ಮೇಳನದ ನಿರ್ಣಯಗಳನ್ನು ಈಡೇರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಪ್ರಮಾಣ ಮಾಡಿಸಿಕೊಳ್ಳಬೇಕು'' ಎಂದು ನಟಿ, ವಿಧಾನ ಪರಿಷತ್‌ ಮಾಜಿ ಸದಸ್ಯೆ ತಾರಾ ಹೇಳಿದರು.

ನಗರದ ಕೆಎಲ್‌ಇ ಸಂಸ್ಥೆಯ ಎಂ.ಬಿ. ಮುನವಳ್ಳಿ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಶನಿವಾರ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ''ಸಮ್ಮೇಳನಗಳಲ್ಲಿ ಪ್ರತಿ ಬಾರಿ ನಿರ್ಣಯಗಳನ್ನು ಮಂಡಿಸಲಾಗುತ್ತದೆ. ಆದರೆ, ಅವುಗಳ ಅನುಷ್ಠಾನ ಆಗುತ್ತಿಲ್ಲ. ಸರಕಾರ ನಿರ್ಣಯಗಳಿಗೆ ಪ್ರಾಮುಖ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯಬೇಕು. ಜಿಲ್ಲಾ ಸಾಹಿತ್ಯ ಸಮ್ಮೇಳನ ಎರಡು ದಿನ ಮಾತ್ರ ಅವಸರದಲ್ಲಿ ನಡೆಯುತ್ತದೆ. ಆದ್ದರಿಂದ ನಾಲ್ಕು ದಿನಗಳವರೆಗೆ ವಿಸ್ತರಣೆಯಾಗಬೇಕು'' ಎಂದು ಒತ್ತಾಯಿಸಿದರು.

''ತ್ರಿಭಾಷಾ ಸೂತ್ರವನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದ ಸರಕಾರ ಜಾರಿಗೆ ತಂದಿತ್ತು. ತ್ರಿಭಾಷಾ ಸೂತ್ರದಲ್ಲಿ ಆಯಾ ಮಾತೃಭಾಷೆಗೆ ಸ್ಥಾನಮಾನ ಸಿಗಬೇಕು. ಅದು ಈಗ ಸಿಕ್ಕಿದೆ. ಬೇರೊಂದು ಭಾಷೆಯನ್ನೂ ಕಲಿಯಬೇಕು. ಭಾವನೆಗಳು ಸ್ವಲ್ಪ ಜನರನ್ನು ಸೆಳೆಯಬಹುದು. ಎಲ್ಲ ಭಾಷೆ ಕಲಿತರೆ ಎಲ್ಲರ ಮನಸ್ಸು ಗೆಲ್ಲಬಹುದು. ಆದರೆ, ಮನೆಯಲ್ಲಿ ಮಕ್ಕಳೊಂದಿಗೆ ಮಾತೃಭಾಷೆಯಲ್ಲೇ ಮಾತನಾಡಬೇಕು'' ಎಂದು ತಾರಾ ಅಭಿಪ್ರಾಯ ವ್ಯಕ್ತಪಡಿಸಿದರು.

ಸಮ್ಮೇಳನಾಧ್ಯಕ್ಷೆ ಗುರುದೇವಿ ಹುಲೆಪ್ಪನವರಮಠ ಮಾತನಾಡಿ, ''ಪ್ರತಿಯೊಬ್ಬರಿಗೂ ನಾಡು-ನುಡಿಯ ಅಭಿಮಾನ ಅತ್ಯಗತ್ಯ. ಭಾಷೆ ಉಳಿದರೆ ನಮ್ಮ ನಾಡು, ಸಂಸ್ಕೃತಿ ಉಳಿಯಲು ಸಾಧ್ಯ. ಇಂಗ್ಲಿಷ್‌ ಭಾಷೆಯ ಹೇರಿಕೆಯಿಂದ ದೇಶಿ ಭಾಷೆಗಳಿಗೆ ಕುತ್ತು ಬರುವ ಸಾಧ್ಯತೆಯಿದೆ'' ಎಂದು ಕಳವಳ ವ್ಯಕ್ತಪಡಿಸಿದರು.

ಸುಣಧೋಳಿ ಜಡಿಸಿದ್ದೇಶ್ವರ ಮಠದ ಅಭಿನವ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬೆಂಗಳೂರು ದೂರದರ್ಶನ ಕೇಂದ್ರದ ಸಹನಿರ್ದೇಶಕಿ ಡಾ.ನಿರ್ಮಲಾ ಎಲಿಗಾರ, ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ ಮತ್ತಿತರರು ಇದ್ದರು. ಪ್ರೊ.ಮಹಾನಂದ ಪಾಟೀಲ ನಿರೂಪಿಸಿದರು. ಶ್ರೀಪಾದ ಕುಂಬಾರ ಸ್ವಾಗತಿಸಿದರು. ಡಾ.ಮಹಾಂತೇಶ ಉಕ್ಕಲಿ ವಂದಿಸಿದರು.

ಗೋಕಾಕ ನಾಡಿನ ಇತಿಹಾಸದಲ್ಲಿ 13ನೇ ಸಾಹಿತ್ಯ ಸಮ್ಮೇಳನ ಸುವರ್ಣ ಅಧ್ಯಾಯವಾಗಿದೆ. ಸಮ್ಮೇಳನದ ಸವಿನೆನಪಿಗೆ ಗೋಕಾಕದಲ್ಲಿ ಕನ್ನಡ ಭವನ ನಿರ್ಮಾಣವಾಗಬೇಕು.
-ಗುರುದೇವಿ ಹುಲೆಪ್ಪನವರಮಠ, ಸಮ್ಮೇಳನಾಧ್ಯಕ್ಷೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ