ಚಿಕ್ಕೋಡಿ: ಡಾ. ಬಿ.ಆರ್.ಅಂಬೇಡ್ಕರ ಅಭಿವೃದ್ಧಿ ನಿಗಮದಿಂದ ಸಮುದಾಯದ ವಕೀಲರಿಗೆ ಕಚೇರಿ ಆರಂಭಿಸಲು ಕೊಡಲಾಗುತ್ತಿರುವ 2 ಲಕ್ಷ ರೂ.ಗಳ ಸಾಲದ ಮೊತ್ತವನ್ನು 5 ಲಕ್ಷ ರೂ.ಗಳಿಗೆ ಏರಿಸಲಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಮತ್ತು ಡಾ. ಬಿ.ಆರ್.ಅಂಬೇಡ್ಕರ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಲ್ಲಾಜಮ್ಮ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯದ 30 ಜಿಲ್ಲೆಗಳಲ್ಲಿ ಸುಮಾರು 150 ಜನರಿಗೆ ಸಾಲ ಸೌಲಭ್ಯ ಒದಗಿಸಲಾಗಿದೆ ಎಂದು ಹೇಳಿದರು. ಸಣ್ಣ ವ್ಯಾಪಾರಿಗಳಿಗೆ ಕೊಡಲಾಗುತ್ತಿರುವ 15 ಸಾವಿರ ರೂಗಳ ಸಾಲದ ಮೊತ್ತವನ್ನು 50 ಸಾವಿರಕ್ಕೆ ಹೆಚ್ಚಿಸಲಾಗಿದೆ. ವಿವಿಧ ಸಾಲದ ಅರ್ಜಿಗಳನ್ನು ಇನ್ನು ಮುಂದೆ ಆನ್ಲೈನ್ನಲ್ಲಿ ಪಡೆಯುವಂತೆಯೂ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.
ಡಾ. ಬಿ.ಆರ್.ಅಂಬೇಡ್ಕರ ಅಭಿವೃದ್ಧಿ ನಿಗಮದಲ್ಲಿ ಸಿಬ್ಬಂದಿ ಕೊರತೆಯಿಂದ ಕೆಲವೊಂದು ಯೋಜನೆಗಳನ್ನು ಅನುಷ್ಠಾನಗೊಳಿಸಲು ಆಗಿಲ್ಲ. ಇದೀಗ ಸುಮಾರು 111 ಸಿಬ್ಬಂದಿ ನೇಮಕಾತಿಗೆ ಸರಕಾರ ಮಂಜೂರಾತಿ ನೀಡಿದೆ. ಇಷ್ಟರಲ್ಲಿಯೇ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
2014-15, 2015-16ನೇ ಸಾಲಿನಲ್ಲಿ ನಿಗಮದಿಂದ ಜಾರಿಗೆ ತಂದಿರುವ ಯೋಜನೆಗಳಲ್ಲಿ ಎಷ್ಟು ಯೋಜನೆ ಪೂರ್ಣಗೊಂಡಿವೆ, ಇನ್ನೂ ಎಷ್ಟು ಬಾಕಿ ಇವೆ ಎಂಬುದನ್ನು ಪರಿಶೀಲಿಸುವ ಉದ್ದೇಶದಿಂದ ತಾವು ಪ್ರವಾಸ ಕೈಗೊಂಡಿರುವುದಾಗಿ ತಿಳಿಸಿದರು.
ಜಿಪಂ ಸದಸ್ಯೆ ಜಯಶ್ರೀ ಮೋಹಿತೆ, ರಾಮಚಂದ್ರ ಸಿಪ್ಪೂರೆ, ಸುರೇಶ ತಳವಾರ, ಗಣೇಶ ಮೋಹಿತೆ, ಎಂ.ಆರ್.ಬಂಗ್ಯಾಗೋಳ, ಸಂಜು ಕಾಂಬಳೆ, ಶೋಭಾ ತಳವಾರ, ಆನಂದ ಅರಬಳ್ಳಿ ಮುಂತಾದವರು ಉಪಸ್ಥಿತರಿದ್ದರು.