ಆ್ಯಪ್ನಗರ

ಸ್ಪೀಕರ್‌ ಸೂಚನೆಗೆ ಕ್ಯಾರೇ ಎನ್ನದ ಪಾಲಿಕೆ!

ಬೆಳಗಾವಿ ನಗರದ ಸೌಂದರ‍್ಯ ಹಾಳು ಮಾಡುವ ರೀತಿಯಲ್ಲಿ ಅಳವಡಿಸಿರುವ ಫ್ಲೆಕ್ಸ್‌, ಬ್ಯಾನರ್‌, ಬೋರ್ಡ್‌ಗಳನ್ನು ತೆರವುಗೊಳಿಸುವಂತೆ ಸ್ವತಃ ವಿಧಾನಸಭಾಧ್ಯಕ್ಷ ರಮೇಶ್‌ಕುಮಾರ್‌ ಅವರೇ ಸೂಚನೆ ನೀಡಿದ್ದರೂ ಮಹಾನಗರ ಪಾಲಿಕೆ ಕ್ಯಾರೇ ಎಂದಿಲ್ಲ!

Vijaya Karnataka 15 Dec 2018, 5:00 am
ಬೆಳಗಾವಿ : ನಗರದ ಸೌಂದರ‍್ಯ ಹಾಳು ಮಾಡುವ ರೀತಿಯಲ್ಲಿ ಅಳವಡಿಸಿರುವ ಫ್ಲೆಕ್ಸ್‌, ಬ್ಯಾನರ್‌, ಬೋರ್ಡ್‌ಗಳನ್ನು ತೆರವುಗೊಳಿಸುವಂತೆ ಸ್ವತಃ ವಿಧಾನಸಭಾಧ್ಯಕ್ಷ ರಮೇಶ್‌ಕುಮಾರ್‌ ಅವರೇ ಸೂಚನೆ ನೀಡಿದ್ದರೂ ಮಹಾನಗರ ಪಾಲಿಕೆ ಕ್ಯಾರೇ ಎಂದಿಲ್ಲ!
Vijaya Karnataka Web BLG-1412-2-52-14MAHESH5


ಅಧಿವೇಶನ ನೆಪ ಹೇಳಿಕೊಂಡು ಸುವರ್ಣ ವಿಧಾನಸೌಧವೂ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲೆಲ್ಲ ಸಚಿವರು, ಶಾಸಕರಿಗೆ ಸ್ವಾಗತ ಕೋರುವ ನೂರಾರು ಸಂಖ್ಯೆಯ ಬೃಹದಾಕಾರದ ಫ್ಲೆಕ್ಸ್‌, ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ಈಚೆಗಷ್ಟೆ ಅಗಲೀಕರಣಗೊಂಡು ಆಕರ್ಷಕ ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡಿದ್ದ ಬೀದಿ ದೀಪದ ಕಂಬಗಳಿಗೂ ಸರಕಾರದ ಪಾಲುದಾರ ಜೆಡಿಎಸ್‌ನ ನಾಯಕರೇ ಬ್ಯಾನರ್‌ ಕಟ್ಟಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.

ಗುರುವಾರ ಸದನದ ಕಲಾಪ ಸಂದರ್ಭದಲ್ಲಿ ಬ್ಯಾನರ್‌ ವಿಷಯ ಚರ್ಚೆಗೆ ಬಂದಾಗ ಸಭಾಧ್ಯಕ್ಷ ರಮೇಶ್‌ಕುಮಾರ್‌ ಕೂಡ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ತಕ್ಷಣ ಕಾರ್ಯಾಚರಣೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿ, ಗುರುವಾರ ರಾತ್ರಿ ಹೊತ್ತಿಗೇ ನಗರ ವ್ಯಾಪ್ತಿಯಲ್ಲಿ ಬ್ಯಾನರ್‌ಗಳು ಕಾಣಬಾರದು ಎಂದು ಎಚ್ಚರಿಕೆ ನೀಡಿದ್ದರು.

ಆದರೆ, ಸಭಾಧ್ಯಕ್ಷರು ಎಚ್ಚರಿಕೆ ನೀಡಿ ದಿನ ಕಳೆದರೂ ಮಹಾನಗರ ಪಾಲಿಕೆ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ. ರಸ್ತೆ ವಿಭಜಕಗಳ ನಡುವೆ ಕಟ್ಟಿರುವ ಬ್ಯಾನರ್‌, ಕಟೌಟ್‌ಗಳು ವಾಹನ ಸವಾರರಿಗೆ ಅಪಾಯ ಆಹ್ವಾನಿಸುತ್ತಿದ್ದರೂ ತೆರವುಗೊಳಿಸುವ ಪ್ರಯತ್ನ ಮಾಡಿಲ್ಲ.

ಮೊದಲೇ ಸೂಚಿಸಿದ್ದರು:
ಅಧಿವೇಶನದ ಪೂರ್ವ ಸಿದ್ಧತೆಗಾಗಿ ಒಂದು ತಿಂಗಳ ಮುಂಚೆಯೇ ಸುವರ್ಣ ವಿಧಾನಸೌಧಕ್ಕೆ ಭೇಟಿ ನೀಡಿದ್ದ ಸಭಾಧ್ಯಕ್ಷ ರಮೇಶ್‌ಕುಮಾರ್‌, ಆಗಲೂ ಅಧಿವೇಶನ ಹೆಸರಿನಲ್ಲಿ ನಗರದಲ್ಲಿ ಬ್ಯಾನರ್‌, ಕಟೌಟ್‌, ಫ್ಲೆಕ್ಸ್‌ಗಳ ಅಳವಡಿಕೆಗೆ ಕಡಿವಾಣ ಹಾಕಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಒತ್ತಡಕ್ಕೆ ಮಣಿದರೇ? :
ಬ್ಯಾನರ್‌ ತೆರವುಗೊಳಿಸುವ ವಿಷಯದಲ್ಲಿ ಪಾಲಿಕೆ ಕೈಗೊಂಡಿರುವ ಕ್ರಮಗಳ ಕುರಿತು ಆಯುಕ್ತರು ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಲು 'ವಿಕ' ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಮೊಬೈಲ್‌ ಕರೆಗಳನ್ನೂ ಸ್ವೀಕರಿಸದೆ ಇರುವುದು ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿಯುತ್ತಿದ್ದಾರೆಯೇ ಎನ್ನುವ ಪ್ರಶ್ನೆ ಹುಟ್ಟುಹಾಕಿದೆ.

ಬ್ಯಾನರ್‌ ತೆರವುಗೊಳಿಸುವ ವಿಷಯವಾಗಿ ಪಾಲಿಕೆ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕಿದ್ದು, ಸಭಾಧ್ಯಕ್ಷರ ಸೂಚನೆ ಮತ್ತು ಅಧಿಕಾರಿಗಳು ಕೈಗೊಂಡಿರುವ ಕ್ರಮಗಳ ಕುರಿತು ಪರಿಶೀಲನೆ ಮಾಡುತ್ತೇನೆ ಎಂದು ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ