ಆ್ಯಪ್ನಗರ

ಶಿಸ್ತಿನಿಂದ ಕೆಲಸ ಮಾಡಲು ಅಧಿಕಾರಿಗಳಿಗೆ ಶಾಸಕರ ತಾಕೀತು

ಬೈಲಹೊಂಗಲ: ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಬುಧವಾರ ...

Vijaya Karnataka 21 Jun 2018, 5:00 am
ಬೈಲಹೊಂಗಲ: ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಬುಧವಾರ ನಡೆದ ಬೈಲಹೊಂಗಲ ತಾಲೂಕಿನ ತ್ರೈಮಾಸಿಕ ಕರ್ನಾಟಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೆಲಸ ಮಾಡದ ಕೆಲವು ಅಧಿಕಾರಿಗಳನ್ನು ಹಾಗೂ ಸಭೆಗೆ ಸರಿಯಾದ ಮಾಹಿತಿ ತರದ ಅಧಿಕಾರಿಗಳನ್ನು ಚ.ಕಿತ್ತೂರು ಶಾಸಕ ಮಹಾಂತೇಶ ದೊಡಗೌಡರ ತೀವ್ರ ತರಾಟೆಗೆ ತೆಗೆದುಕೊಂಡರು.
Vijaya Karnataka Web BEL-20HTP3


ಸಭೆಯ ಅಧ್ಯಕ್ಷ ತೆ ವಹಿಸಿ ಮಾತನಾಡಿದ ಅವರು, ಕುಡಿಯುವ ನೀರಿನ ಕುರಿತು ಮಾತನಾಡುವಾಗ ಗ್ರಾಮೀಣ ನೈರ್ಮಲ್ಯ ಮತ್ತು ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿ ಎಚ್‌.ಕೆ.ವಂಟಗುಡಿ ಅವರನ್ನು ತರಾಟೆಗೆ ತೆಗೆದುಕೊಂಡರು. ''ಬೈಲಹೊಂಗಲ ಹಾಗೂ ಕಿತ್ತೂರು ಕ್ಷೇತ್ರಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಬರೀ ಹಾರಿಕೆ ಉತ್ತರ ಕೋಡೋದು ಬೇಡ. ಎಂಟು ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ನೀರು ಸರಬರಾಜು ಆಗುತ್ತಿಲ್ಲ. ನಿಮ್ಮ ಇಲಾಖೆಯಿಂದ ಶೇ.80ರಷ್ಟು ಕೆಲಸ ಮಾಡುತ್ತಿಲ್ಲ. ಹೀಗಾದರೇ ಹೇಗೆ...ಏ ವಂಟಗುಡಿ ನೀ ಸರಿಯಾಗಿ ಕೆಲಸ ಮಾಡೋ...'' ಎಂದು ಗುಡುಗಿದರು.

''ಶಿಥಿಲಗೊಂಡ ಶಾಲೆಗಳ ಮಾಹಿತಿ ತಯಾರಿಸಿ, ಜಿಲ್ಲಾಧಿಕಾರಿಗಳ, ಡಿಡಿಪಿಐ ಅವರ ಗಮನಕ್ಕೆ ತಂದು ಬೀಳುವ ಹಂತದಲ್ಲಿರುವ ಶಾಲೆಗಳನ್ನು ನೆಲಸಮ ಮಾಡಿ, ನೂತನ ಶಾಲಾ ಕಟ್ಟಡಗಳ ನಿರ್ಮಾಣ ಮಾಡಬೇಕು. ಕೆಲವು ಶಾಲೆಗಳನ್ನು ದುರಸ್ತಿ ಮಾಡಬೇಕು'' ಎಂದು ಕ್ಷೇತ್ರ ಶಿಕ್ಷ ಣಾಧಿಕಾರಿ ಪಾರ್ವತಿ ವಸ್ತ್ರದ ಅವರಿಗೆ ಸೂಚಿಸಿದರು. ಹೆಸ್ಕಾಂ ಇಲಾಖೆಯವರು ರೈತಪರ ಕೆಲಸ ಮಾಡುತ್ತಿಲ್ಲ. ಟಿಸಿ ವಿತರಿಸುತ್ತಿಲ್ಲ. ರೈತರನ್ನು ಕಡೆಗಣಿಸಬೇಡಿ. ರೈತರ ಜತೆ ಮಾನವೀಯತೆಯಿಂದ ನಡೆದುಕೊಳ್ಳಬೇಕೆಂದು ಹೆಸ್ಕಾಂ ಅಧಿಕಾರಿಗೆ ತಾಕೀತು ಮಾಡಿದರು.

ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ನೇತೃತ್ವವಹಿಸಿ ಮಾತನಾಡಿ, ಎಲ್ಲ ಅಧಿಕಾರಿಗಳು ಶಿಸ್ತುಬದ್ಧ, ಸುವ್ಯವಸ್ಥಿತವಾಗಿ ಕಾನೂನು ಪ್ರಕಾರ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ''ಸರಿಯಾಗಿ ಮಾಹಿತಿ ಹೇಳಲು ಬರದ ನೀವು ಅರಣ್ಯ ಇಲಾಖೆ ಅಧಿಕಾರಿನೇ ಅಲ್ಲ. ಅರಣ್ಯ ಇಲಾಖೆಗೆ ಬಂದು ಎಷ್ಟು ದಿನ ಆಯಿತು'' ಎಂದು ಅರಣ್ಯ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಜಿಪಂ ಸದಸ್ಯ ಶಂಕರ ಮಾಡಲಗಿ, ಗ್ರಾಮೀಣ ನೈರ್ಮಲ್ಯ ಮತ್ತು ಕುಡಿಯುವ ನೀರು ಸರಬರಾಜು ಇಲಾಖೆಗೆ 18 ತಿಂಗಳಿನಿಂದ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಯಾವುದೇ ಅನುದಾನ ಬಂದಿಲ್ಲ ಎಂದು ಸಭೆಯ ಗಮನ ಸೆಳೆದರು. ಶಿಕ್ಷ ಣ, ಆರೋಗ್ಯ, ಕೃಷಿ, ಲೋಕೋಪಯೋಗಿ, ಸಾರಿಗೆ ಸೇರಿದಂತೆ ಅನೇಕ ಇಲಾಖೆಗಳ ಕುರಿತು ಚರ್ಚೆ ನಡೆಯಿತು.

ಶಾಸಕರಾದ ಮಹಾಂತೇಶ ಕೌಜಲಗಿ ಹಾಗೂ ಮಹಾಂತೇಶ ದೊಡಗೌಡರ ಅವರನ್ನು ಸತ್ಕರಿಸಲಾಯಿತು. ಜಿಪಂ ಸದಸ್ಯರಾದ ಅನಿಲ ಮ್ಯಾಕಲಮರ್ಡಿ, ರಾಧಾ ಕಾದ್ರೋಳ್ಳಿ, ಲಾವಣ್ಯ ಶಿಲ್ಲೇದಾರ, ತಾಪಂ ಅಧ್ಯಕ್ಷೆ ಶೈಲಾ ಸಿದ್ರಾಮನಿ, ಉಪಾಧ್ಯಕ್ಷ ಬಸನಗೌಡ ಪಾಟೀಲ, ತಹಸೀಲ್ದಾರ ಪ್ರಕಾಶ ಗಾಯಕವಾಡ, ಕಿತ್ತೂರು ತಹಸೀಲ್ದಾರ ಪ್ರವೀಣ ಹುಚ್ಚನ್ನವರ, ತಾಪಂ ಇಒ ಎಸ್‌.ಎಸ್‌.ಕಾದ್ರೋಳ್ಳಿ, ತಾಪಂ ಸಹಾಯಕ ನಿರ್ದೇಶಕ ಸುಭಾಸ ಸಂಪಗಾಂವಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ