ಆ್ಯಪ್ನಗರ

ಶ್ರೀಮಂತರ ಜೇಬು ತುಂಬಿಸುವ ಮೋದಿ ಸುಳ್ಳುಗಾರ

ಗೋಕಾಕ : ಬಡವರ ಹೊಟ್ಟೆ ಮೇಲೆ ಹೊಡೆಯುವ, ಶ್ರೀಮಂತರ ಜೇಬು ತುಂಬಿಸುವ ಮೋದಿ ಮಹಾನ್‌ ಸುಳ್ಳುಗಾರ ...

Vijaya Karnataka 20 Apr 2019, 5:00 am
ಗೋಕಾಕ : ಬಡವರ ಹೊಟ್ಟೆ ಮೇಲೆ ಹೊಡೆಯುವ, ಶ್ರೀಮಂತರ ಜೇಬು ತುಂಬಿಸುವ ಮೋದಿ ಮಹಾನ್‌ ಸುಳ್ಳುಗಾರ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
Vijaya Karnataka Web BEL-19GOK4B


ಶುಕ್ರವಾರ ರಾತ್ರಿ ಇಲ್ಲಿನ ನ್ಯೂ ಇಂಗ್ಲಿಷ್‌ ಸ್ಕೂಲ್‌ ಮೈದಾನದಲ್ಲಿ ಬೆಳಗಾವಿ ಲೋಕಸಭೆ ಅಭ್ಯರ್ಥಿ ಡಾ.ವಿ.ಎಸ್‌. ಸಾಧುನವರ ಪರ ಪ್ರಚಾರ ಸಭೆಯನ್ನದ್ದೇಶಿಸಿ ಅವರು ಮಾತನಾಡಿದರು.

''ಅಮಿತ್‌ ಶಾ, ಯಡಿಯೂರಪ್ಪ, ರೆಡ್ಡಿ, ಹಾಲಪ್ಪ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮುಂತಾದ ಜೈಲಿಗೆ ಹೋಗಿ ಬಂದವರನ್ನು ಕಟ್ಟಿಕೊಂಡು ಚೌಕಿದಾರ ಎನ್ನುವ ಮೋದಿಗೆ ನಾಚಿಕೆಯಾಗಬೇಕು. ಯಡಿಯೂರಪ್ಪ ಜೈಲಿಗೆ ಹೋಗುವಾಗಲೂ ಬರುವಾಗಲೂ ವಿಕ್ಟರಿ ಚಿಹ್ನೆ ತೋರಿಸುತ್ತಲೇ ಇರುತ್ತಾರೆ. ಇಂಥವರಿಗೆ ಹಿಂದುಳಿದವರು, ಮುಸ್ಲಿಮರು, ರೈತರು ಒಂದೂ ವೋಟ್‌ ಹಾಕಬಾರದು. ನಿಲ್ಲಿಸಿದ 27 ಸೀಟ್‌ಗಳಲ್ಲಿ ಬಿಜೆಪಿ ಯಾವೊಬ್ಬ ಹಿಂದುಳಿದವನಿನೂ ಲೋಕಸಭೆಗೆ ಟಿಕೆಟ್‌ ಕೊಟ್ಟಿಲ್ಲ'', ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ, ''ಕಾಂಗ್ರೆಸ್‌ನ ಭದ್ರಕೋಟೆ ಗೋಕಾಕನ್ನು ದುರ್ಬಲಗೊಳಿಸಲು ಬಿಡುವುದಿಲ್ಲ'', ಎಂದರು.

ಅಭ್ಯರ್ಥಿ ಡಾ.ವಿ.ಎಸ್‌. ಸಾಧುನವರ, ಯುವ ಮುಖಂಡ ಲಖನ್‌ ಜಾರಕಿಹೊಳಿ ಮಾತನಾಡಿದರು. ವೇದಿಕೆಯಲ್ಲಿ ಮಾಜಿ ಶಾಸಕ ಫಿರೋಜ್‌ ಸೇಠ್‌, ವಿನಯ ನಾವಲಗಟ್ಟಿ, ವೀರಕುಮಾರ ಪಾಟೀಲ, ಲಕ್ಷ ್ಮಣರಾವ ಚಿಂಗಳೆ, ಡಾ. ರಾಜೇಂದ್ರ ಸಣ್ಣಕ್ಕಿ, ಸಿದ್ಧಲಿಂಗ ದಳವಾಯಿ, ಅರವಿಂದ ದಳವಾಯಿ, ಆಶಾ ಐಹೊಳೆ, ಬಿ.ಬಿ. ಬೆಳಕೂಡ ಮೊದಲಾದವರಿದ್ದರು.

ರಮೇಶ್‌ ಬಗ್ಗೆ ಚಕಾರವಿಲ್ಲ :
ಸಿದ್ದರಾಮಯ್ಯ ಸಭೆಯಲ್ಲಿ ರೆಬೆಲ್‌ ಶಾಸಕ ರಮೇಶ್‌ ಜಾರಕಿಹೊಳಿ ಬಗ್ಗೆ ಯಾರೂ ಚಕಾರವೆತ್ತಲಿಲ್ಲ. ಇಂದಿನ ರಾಹುಲ್‌ ಗಾಂಧಿ ಸಮಾವೇಶ ಹಾಗೂ ಸಿದ್ದರಾಮಯ್ಯ ಸಭೆ ಎರಡಕ್ಕೂ ರಮೇಶ್‌ ಗೈರುಹಾಜರಾಗಿದ್ದರು. ಆದರೆ, ಇಂದಿನ ಸಮಾರಂಭ ನಡೆಯುವ ಸ್ಥಳದ ಪ್ರವೇಶದ್ವಾರದಲ್ಲಿ ಅಳವಡಿಸಿದ ಹೋರ್ಡಿಂಗ್‌ನಲ್ಲಿ ಸಹೋದರನ ಪಕ್ಕದಲ್ಲೇ ಫೋಟೋದಲ್ಲಿ ರಮೇಶ್‌ ಮಿಂಚಿದ್ದಾರೆ. ಈ ಮಧ್ಯೆ, ಶುಕ್ರವಾರ ಬೆಳಗ್ಗೆ ನಗರಸಭೆ ಸದಸ್ಯರು ಹಾಗೂ ಬೆಂಬಲಿಗರನ್ನು ತಮ್ಮ ನಿವಾಸದಲ್ಲಿ ಭೇಟಿಯಾದ ರಮೇಶ್‌ ಜಾರಕಿಹೊಳಿ, ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಹೋಗದಿರುವಂತೆ ತಾಕೀತು ಮಾಡಿದ್ದರು ಎಂದು ತಿಳಿದುಬಂದಿದೆ. ಶುಕ್ರವಾರ ತಡರಾತ್ರಿ ಸಿದ್ದರಾಮಯ್ಯ ಹಾಗೂ ಕೆಲ ಪ್ರಮುಖ ಮುಖಂಡರಿಗೆ ಲಖನ್‌ ಜಾರಕಿಹೊಳಿ ಮನೆಯಲ್ಲಿ ಔತಣಕೂಟ ಏರ್ಪಡಿಸಿದ್ದು, ಬದಲಾದ ರಾಜಕೀಯ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆದಿದೆ. ರಮೇಶ್‌ ನಡೆ ಬಗ್ಗೆ ಇನ್ನೂ ಜನರಲ್ಲಿ ಗೊಂದಲವಿದೆ.

ಹಲವಾರು ಭಾಗ್ಯಗಳನ್ನು ಕೊಟ್ಟ ನನಗೆ ಹೇಳಿಕೊಳ್ಳಲು ಸಾಕಷ್ಟಿದೆ. ಮೋದಿ ತಾವು ಮಾಡಿದ ಸಾಧನೆಯನ್ನೇನಾದರೂ ಹೇಳುತ್ತಾರೆಯೇ?
- ಸಿದ್ದರಾಮಯ್ಯ, ಮಾಜಿ ಸಿಎಂ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ