ಬೆಳಗಾವಿ: ಶಹಾಪುರ ಕೋರೆಗಲ್ಲಿಯ ಶ್ರೀ ಸರಸ್ವತಿ ವಾಚನಾಲಯದ ಸಂಗೀತ ಕಲಾ ಮಂಚ್ ವತಿಯಿಂದ 6ನೇ ಪಂ.ಕುಮಾರಗಂಧರ್ವ ಸ್ಮೃತಿ ಸಂಗೀತ ಸಮ್ಮೇಳನವನ್ನು ಹಿಂದವಾಡಿಯ ಐಎಂಇಆರ್ ಸಭಾಂಗಣದಲ್ಲಿ ಜ.7, 8ರಂದು ಆಯೋಜಿಸಲಾಗಿದೆ.
ಪತ್ರಕರ್ತ, ಸಂಗೀತ ಸಮೀಕ್ಷಕ ಮುಕುಂದ ಸಂಗೋರಾಮ 7 ರಂದು ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಉದ್ಘಾಟಿಸುವರು. ಪ್ರಸಿದ್ಧ ತಬಲಾ ವಾದಕ ಪಂ. ಜಿ.ಎ. ಕುಲಕರ್ಣಿ, ಹಿರಿಯ ಗಾಯಕ ಪಂ. ರಾಜಪ್ರಭು ಧೋತ್ರೆ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ನಂತರ ಸಂವಾದ, ಯೋಗೇಶ ರಾಮದಾಸ್ ಮತ್ತು ಸುಜಾತಾ ಗುರವ ಅವರಿಂದ ಗಾಯನ ಕಾರ್ಯಕ್ರಮ ನಡೆಯಲಿದೆ.
ಸಂಜೆ 5 ಗಂಟೆಗೆ ಮುಂಬೈನ ಸಾಯಲಿ ತಳವಲಕರ್ (ಗಾಯನ), ಅವಧೂತ ಫಡಕೆ (ಕೊಳಲುವಾದನ), ಶಿರಸಿಯ ಶ್ರೀಪಾದ ಹೆಗಡೆ ಹಾಗೂ ಬಕುಲಾ ಹೆಗಡೆ (ಯುಗಳ ಗಾಯನ) ಗಾಯನ ಪ್ರಸ್ತುತ ಪಡಿಸುವರು.
ಜ.8ರಂದು ಬೆಳಗ್ಗೆ 10 ಗಂಟೆಗೆ ಧಾರವಾಡದ ಗೀತಾ ಆಲೂರ, ಬೆಳಗಾವಿ ಪಂ ರಾಜಪ್ರಭು ಧೋತ್ರೆ ಗಾಯನ ನಡೆಸಿಕೊಡುವರು. ಸಂಜೆ 5 ಗಂಟೆಗೆ ಡೊಂಬಿವಲಿಯ ಸಮೀರ ಅಭ್ಯಂಕರ (ಗಾಯನ), ಸಾಂಗಲಿಯ ರಫೀಕ್ ನದಾಫ್ ಹಾಗೂ ರಫತ್ ನದಾಫ್ (ಯುಗಳ ಸೀತಾರವಾದನ), ಗೋವಾದ ಪಂ. ಕಮಲಾಕರ ನಾಯಿಕ ಗಾಯನ ನಡೆಸಿಕೊಡುವರು. ಗಾಯನದಲ್ಲಿ ಪುಣೆಯ ಶ್ರುತಿ ಅಂಬುಲಗೇಕರ್, ಹಾರ್ಮೋನಿಯಂನಲ್ಲಿ ಬೆಳಗಾವಿಯ ವಾಮನ ವಾಗುಕರ, ಮುಂಬೈನ ಮಂದಾರ ದೀಕ್ಷಿತ, ತಬಲಾದಲ್ಲಿ ಡೊಂಬಿವಲಿಯ ವಿನಾಯಕ ನಾಯಿಕ, ಶಿರಸಿಯ ಅನಂತ ಹೆಗಡೆ, ಬೆಳಗಾವಿಯ ನಾರಾಯಣ ಗಣಾಚಾರಿ ಸಾಥ್ ನೀಡುವರು.