ಆ್ಯಪ್ನಗರ

24*7 ಕುಡಿಯುವ ನೀರಿಗೆ ಹೊಸ ಯೋಜನೆ

ಬೆಳಗಾವಿ: ನಗರದ ಎಲ್ಲ ...

Vijaya Karnataka 9 Oct 2018, 5:00 am
ಬೆಳಗಾವಿ: ನಗರದ ಎಲ್ಲ ವಾರ್ಡ್‌ಗಳಿಗೆ 24*7 ಕುಡಿಯುವ ನೀರು ಪೂರೈಸುವ 663 ಕೋಟಿ ರೂ. ವೆಚ್ಚದ ಯೋಜನೆಗೆ ಸದ್ಯದಲ್ಲಿಯೇ ಅನುಮೋದನೆ ಸಿಗಲಿದ್ದು, ಮುಂದಿನ ವರ್ಷದ ಆರಂಭದಲ್ಲಿ ಕಾಮಗಾರಿ ಶುರುವಾಗಲಿದೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದರು.
Vijaya Karnataka Web BLG-0810-2-52-8PRAMOD3


ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ಬ್ಯಾಂಕ್‌ ನೆರವು ಯೋಜನೆಯಡಿ 2012ರಲ್ಲಿ ಮಂಜೂರಾಗಿದ್ದ ಈ ಯೋಜನೆಗೆ ತಮ್ಮ ಹಿಂದಿನ ಅವಧಿಯಲ್ಲಿ ಟೆಂಡರ್‌ ಪ್ರಕ್ರಿಯೆ ಮುಗಿದಿತ್ತು. ನಂತರ ಬಂದ ಶಾಸಕರು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಯೋಜನೆ ಅನುಷ್ಠಾನವಾಗದೆ ತಿರಸ್ಕಾರಗೊಂಡಿದೆ. ಈಗ ಅದೇ ಯೋಜನೆಗೆ ಸಂಬಂಧಿಸಿದ ಇಲಾಖೆಗಳಿಂದ ಮತ್ತೆ ಮರು ಒಪ್ಪಿಗೆ ಪಡೆದಿದ್ದು, ಸಚಿವ ಸಂಪುಟದಿಂದ ಅನುಮೋದನೆ ಕೊಡುವುದಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಭರವಸೆ ನೀಡಿದ್ದಾರೆ ಎಂದರು.

ಆರಂಭದಲ್ಲಿ 397 ಕೋಟಿ ರೂ. ವೆಚ್ಚದಲ್ಲಿ ಯೋಜನೆಯ ಅಂದಾಜು ಪತ್ರಿಕೆ ಸಿದ್ಧವಾಗಿತ್ತು. ಈಗ ಡಿಬಿಒಟಿ (ಡಿಸೈನ್‌ ಬಿಲ್ಟ್‌ ಆಪರೇಟ್‌ ಆ್ಯಂಡ್‌ ಟ್ರಾನ್ಸಫರ್‌) ಮಾದರಿಯಲ್ಲಿ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. 2041ನೇ ಇಸವಿವರೆಗೆ ವೃದ್ಧಿಯಾಗುವ ಜಸಂಖ್ಯೆಗೆ ಅನುಗುಣವಾಗಿ ಎರಡು ಹಂತದಲ್ಲಿ ಕ್ರಿಯಾಯೋಜನೆ ರೂಪಿಸಲಾಗಿದೆ. 2026ರ ವರೆಗೆ ಬೆಳೆಯುವ ಜನಸಂಖ್ಯೆಗೆ ಅನುಗುಣವಾಗಿ 427 ಕೋಟಿ ರೂ. ಹಾಗೂ 2041ರ ವರೆಗೆ ಬೆಳೆಯುವ ಜನಸಂಖ್ಯೆಗೆ ಅನುಗುಣವಾಗಿ 236 ಕೋಟಿ ರೂ. ಸೇರಿ ಒಟ್ಟು 663 ಕೋಟಿ ರೂ.ಗಳ ಪ್ರಸ್ತಾವ ರೂಪಿಸಲಾಗಿದೆ ಎಂದರು.

ಸ್ಮಾರ್ಟ್‌ಸಿಟಿ ಕನ್ಸಲ್ಟನ್ಸಿ ಬೋಗಸ್‌: ಬೆಳಗಾವಿ ಸ್ಮಾರ್ಟ್‌ಸಿಟಿ ಕನ್ಸಲ್ಟನ್ಸಿ ಕಂಪೆನಿ ಹಣ ಹೊಡೆಯುವ ಕೆಲಸ ಮಾಡುತ್ತಿದೆ. ಎಲ್ಲ ಕಾಮಗಾರಿಗಳಿಗೂ ದುಪ್ಪಟ್ಟು ಹಣದ ಅಂದಾಜು ಪತ್ರಿಕೆ ಮಾಡುತ್ತಿದ್ದಾರೆ. 10 ಕೋಟಿ ರೂ.ಗಳಲ್ಲಿ ಮುಗಿಯುವ ಕೆಪಿಟಿಸಿಎಲ್‌ ರಸ್ತೆ ಹಾಗೂ ಮಂಡೋಳಿ ರಸ್ತೆ ಯೋಜನೆಗೆ 25 ಕೋಟಿ ರೂ. ಕ್ರಿಯಾಯೋಜನೆ ಮಾಡಿದ್ದಾರೆ. ಇದೊಂದು ಬೋಗಸ್‌ ಕಂಪೆನಿ ಎಂದು ಅಭಯ ಪಾಟೀಲ ದೂರಿದರು.

ಬೆಳಗಾವಿ ನಗರದಲ್ಲಿ ಗಾಂಜಾ, ಮಟಕಾ ದಂಧೆ ಜೋರಾಗಿದೆ. ಇದಕ್ಕೆ ಸ್ಥಳೀಯ ಪೊಲೀಸರೇ ಸಾಥ್‌ ಕೊಡುತ್ತಿದ್ದಾರೆ. ಇಲ್ಲಿನ ಕಾನೂನು ವ್ಯವಸ್ಥೆ ಮೇಲೆ ಸರಕಾರಕ್ಕೆ ಹಿಡಿತವೇ ಇಲ್ಲವಾಗಿದೆ. ಪೊಲೀಸರು ತಮಗೆ ಬೇಕಾದಂತೆ ಕೆಲಸ ಮಾಡುತ್ತಿದ್ದಾರೆ.
-ಅಭಯ ಪಾಟೀಲ, ಶಾಸಕ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ