ಆ್ಯಪ್ನಗರ

ನಗರದೊಳಗೆ ನಾಳೆ ನೋ ಎಂಟ್ರಿ, ನೋ ಪಾರ್ಕಿಂಗ್‌

ಬೆಳಗಾವಿ : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು ಉಪ ರಾಷ್ಟ್ರಪತಿ ...

Vijaya Karnataka 17 Mar 2019, 5:00 am
ಬೆಳಗಾವಿ : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಹಾಗೂ ಗಣ್ಯರು ಆಗಮಿಸಲಿರುವ ಹಿನ್ನೆಲೆಯಲ್ಲಿ ಮಾ.18ರಂದು ನಗರದಲ್ಲಿ ಬೆಳಗ್ಗೆ 8ರಿಂದ ಮಧ್ಯಾಹ್ನ 2 ಗಂಟೆವರೆಗೆ ವಾಹನ ಸಂಚಾರ ಮಾರ್ಗ ಬದಲಿಸಲಾಗಿದೆ. ಈ ಕುರಿತು ನಗರ ಪೊಲೀಸ್‌ ಆಯುಕ್ತ ಬಿ.ಎಸ್‌. ಲೋಕೇಶ್‌ಕುಮಾರ ಶನಿವಾರ ಆದೇಶ ಹೊರಡಿಸಿದ್ದಾರೆ.
Vijaya Karnataka Web no entry no parking tomorrow in the city
ನಗರದೊಳಗೆ ನಾಳೆ ನೋ ಎಂಟ್ರಿ, ನೋ ಪಾರ್ಕಿಂಗ್‌


ಎಲ್ಲೆಲ್ಲಿ ಬದಲಾವಣೆ?: ಸಾಂಬ್ರಾ ಅಂಡರ್‌ ಬ್ರಿಜ್‌, ಮಹಾಂತೇಶ ನಗರ ಅಂಡರ್‌ ಬ್ರಿಜ್‌, ಅಶೋಕ ವೃತ್ತದ ಮೂಲಕ ಸಂಚರಿಸುವ ಎಲ್ಲ ತರಕಾರಿ ವಾಹನಗಳು ಅಲಾರವಾಡ ಅಂಡರ್‌ ಬ್ರಿಜ್‌, ಬಿ.ಎಸ್‌.ಯಡಿಯೂರಪ್ಪ ಮಾರ್ಗದ ಮೂಲಕ ಹಳೇ ಪಿಬಿ ರಸ್ತೆ ಬಳಸಿ ಸಂಚರಿಸಬೇಕು. ಗೋವಾ ಭಾಗದಿಂದ ಬರುವ ಎಲ್ಲ ಸಾರಿಗೆ ಸಂಸ್ಥೆಯ ಬಸ್‌ಗಳು ಪೀರನವಾಡಿ ನಾಕಾ ಹತ್ತಿರ ನಿಲುಗಡೆ ಮಾಡಬೇಕು ಮತ್ತು ಅಲ್ಲಿಂದಲೇ ಮರಳಬೇಕು. ಕೊಲ್ಲಾಪುರ, ಗೋಕಾಕ, ಧಾರವಾಡ ಕಡೆಗಳಿಂದ ಬರುವ ಬಸ್‌ಗಳು ಅಶೋಕ ನಗರದ 4 ಲೇನ್‌ ರಸ್ತೆಯಲ್ಲಿರುವ ಖಾಲಿ ಸ್ಥಳಕ್ಕೆ ತೆರಳಿ ಅಲ್ಲಿಂದಲೇ ಕಾರ್ಯಾಚರಣೆ ನಡೆಸಬೇಕು. ಅದೇ ರೀತಿ ನಗರ ಸಾರಿಗೆ (ಸಿಬಿಟಿ) ಬಸ್‌ಗಳು ಅಶೋಕ ನಗರದ ಧರ್ಮನಾಥ ಸರ್ಕಲ್‌ನಿಂದ ಕಾರ್ಯಾಚರಿಸಬೇಕು.

ಗೋವಾ, ಖಾನಾಪುರ ಭಾಗದಿಂದ ಬರುವ ವಾಹನ ಸವಾರರು ದೇಸೂರ ಮೂಲಕ ಕೆ.ಕೆ.ಕೊಪ್ಪ ಹಾಗೂ ಹಲಗಾ ಹತ್ತಿರ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಸೇರಿಕೊಳ್ಳಬೇಕು. ಗೋಕಾಕ ಕಡೆಯಿಂದ ಬರುವವರು ರಾಷ್ಟ್ರೀಯ ಹೆದ್ದಾರಿ 4 ಸೇರಿ, ನಗರ ಪ್ರವೇಶಿಸದೆ ಕೆ.ಕೆ.ಕೊಪ್ಪ ಕ್ರಾಸ್‌ ಮೂಲಕ ದೇಸೂರ ಮಾರ್ಗವಾಗಿ ಗೋವಾ ರಸ್ತೆಗೆ ಸೇರಬಹುದು. ಕೊಲ್ಲಾಪುರ ಕಡೆಯಿಂದ ಬರುವವರು ನಗರ ಪ್ರವೇಶಿಸದೆ ರಾಷ್ಟ್ರೀಯ ಹೆದ್ದಾರಿ ಮೂಲಕ ಕೆ.ಕೆ.ಕೊಪ್ಪ ಕ್ರಾಸ್‌ ಮೂಲಕ ದೇಸೂರ ಮಾರ್ಗವಾಗಿ ಗೋವಾ ರಸ್ತೆ ಸೇರಬೇಕು. ವಿಜಯಪುರ, ಬಾಗಲಕೋಟೆ, ನೇಸರಗಿ, ಯರಗಟ್ಟಿ, ಲೋಕಾಪುರ ಕಡೆಯಿಂದ ಬರುವ ವಾಹನಗಳು ಮಾರಿಹಾಳ ಪೊಲೀಸ್‌ ಠಾಣೆ ಪಕ್ಕದ ರಸ್ತೆಯಿಂದ ಸುಳೇಬಾವಿ ಮಾರ್ಗದ ಮೂಲಕ ಗೋಕಾಕ ರಸ್ತೆ ಸೇರಬೇಕು.

ಸಂಚಾರ, ನಿಲುಗಡೆ ನಿಷೇಧ :
ಭಾನುವಾರ ಬೆಳಗ್ಗೆ 7ರಿಂದ ರಾತ್ರಿ 8 ಗಂಟೆಯವರೆಗೆ ಹಾಗೂ ಸೋಮವಾರ ಬೆಳಗ್ಗೆ 7ರಿಂದ ರಾತ್ರಿ 8 ಗಂಟೆಯವರೆಗೆ ಎಲ್ಲ ದಿಕ್ಕುಗಳಿಂದ ನಗರ ಪ್ರವೇಶಿಸುವ ಭಾರಿ ವಾಹನಗಳಿಗೆ ನಿಷೇಧ ಹೇರಲಾಗಿದೆ. ಸೋಮವಾರ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ರ ವರೆಗೆ ಟಿಳಕವಾಡಿಯ 1ನೇ ರೇಲ್ವೆ ಗೇಟ್‌, 2ನೇ ರೇಲ್ವೆ ಗೇಟ್‌ಗಳನ್ನು ಸಂಪೂರ್ಣ ಬಂದ್‌ ಮಾಡಲಾಗುತ್ತಿದೆ. ಎರಡೂ ಗೇಟ್‌ ಮೂಲಕ ಸಂಚರಿಸುವವರು ಕಪಿಲೇಶ್ವರ ಓವರ್‌ ಬ್ರಿಜ್‌ ಮತ್ತು ಹಳೇ ಪಿಬಿ ರಸ್ತೆ ಓವರ್‌ ಬ್ರಿಜ್‌ಗಳನ್ನು ಬಳಸಿ ಸಂಚರಿಸಬಹುದು. ನಗರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಹಾಗೂ ಸರ್ವಿಸ್‌ ರಸ್ತೆಯ ಮೇಲೆ ಎಲ್ಲ ಮಾದರಿ ವಾಹನಗಳ ನಿಲುಗಡೆಗೆ ನಿಷೇಧ ಹೇರಲಾಗಿದೆ. ಅಲ್ಲದೆ, ಉಪರಾಷ್ಟ್ರಪತಿಗಳು ಸಂಚರಿಸುವ ಸಾಂಬ್ರಾ ರಸ್ತೆ, ರಾಷ್ಟ್ರೀಯ ಹೆದ್ದಾರಿ 4, ಲೇಕ್‌ವ್ಯೂವ್‌ ಆಸ್ಪತ್ರೆ ರಸ್ತೆ, ಅಶೋಕ ವೃತ್ತದಿಂದ ಚನ್ನಮ್ಮಾ ವೃತ್ತ, ಚನ್ನಮ್ಮಾ ವೃತದಿಂದ ಗೋಗಟೆ ಸರ್ಕಲ್‌, ಕಾಂಗ್ರೆಸ್‌ ರಸ್ತೆ, ಖಾನಾಪುರ ರಸ್ತೆ ಹಾಗೂ ಪೀರನವಾಡಿ ಕ್ರಾಸ್‌ನಿಂದ ವಿಟಿಯು ವರೆಗಿನ ರಸ್ತೆಯ ಎರಡೂ ಬದಿಯಲ್ಲಿ ಎಲ್ಲ ಮಾದರಿಯ ವಾಹನಗಳ ನಿಲುಗಡೆಗೂ ನಿಷೇಧ ಹೇರಲಾಗಿದೆ.

ವಿದ್ಯಾರ್ಥಿಗಳಿಗೆ ಸಮಸ್ಯೆ :
ಪಿಯುಸಿ ಕೊನೇ ಪರೀಕ್ಷೆ ಸಂದರ್ಭದಲ್ಲಿ ಮಾರ್ಗ ಬದಲಾವಣೆ ಮಾಡಿರುವುದು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಬೆಳಗ್ಗೆ 8 ಗಂಟೆಯಿಂದಲೇ ಸಂಚಾರ ಮಾರ್ಗ ಬದಲಾವಣೆ ಮಾಡಿರುವುದರಿಂದ ಇನ್ನೂ ಒಂದು ಗಂಟೆ ಮುಂಚೆಯೇ ವಿದ್ಯಾರ್ಥಿಗಳು ಮನೆ ಬಿಡಬೇಕಾಗಿದೆ. ಕೊನೇ ಪಕ್ಷ ವಿದ್ಯಾರ್ಥಿಗಳಿಗಾದೂ ಸಂಚಾರ ನಿಷೇಧದಿಂದ ರಿಯಾಯಿತಿ ನೀಡುವುದು ಸೂಕ್ತ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಸೋಮವಾರ ನಡೆಯುವ ಪರೀಕ್ಷೆಗೆ ಹಾಜರಾಗುವ ಎಲ್ಲ ವಿದ್ಯಾರ್ಥಿಗಳು ಬೆಳಗ್ಗೆ 8.30ರೊಳಗೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರುವುದು ಉತ್ತಮ. ತಡವಾಗಿ ಬಂದವರನ್ನು ತಡೆಯದೆ, ಅವರು ಪರೀಕ್ಷೆ ಬರೆಯಲು ಅನುಕೂಲವಾಗುವ ರೀತಿಯಲ್ಲಿ ವರ್ತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳು ಆತಂಕಪಡಬೇಕಿಲ್ಲ.
- ಬಿ.ಎಸ್‌.ಲೋಕೇಶಕುಮಾರ. ನಗರ ಪೊಲೀಸ್‌ ಆಯುಕ್ತರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ