ಕಾಗವಾಡ: ಮುಂದಿನ ನೂರಾರು ವರ್ಷಗಳ ಕಾಲ ಹಾಳಾಗದ ಗುಣಮಟ್ಟದ ರಸ್ತೆ ನಿರ್ಮಾಣ ನಮ್ಮ ಗುರಿ ಎಂದು ಕೇಂದ್ರ ಭೂ-ಸಾರಿಗೆ, ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಪಟ್ಟಣದಲ್ಲಿ ಸಂಕೇಶ್ವರ-ಜೇವರ್ಗಿ ಮಾರ್ಗದ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು. ''ಸಂಕೇಶ್ವರ-ಜೇವರ್ಗಿ ರಸ್ತೆ ಅಭಿವೃದ್ಧಿಗಾಗಿ 800 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ನಾನು ಸಚಿವನಾದ ನಂತರ ದೇಶದ ಹೆದ್ದಾರಿಗಳು ಎರಡರಷ್ಟು ಹೆಚ್ಚಾಗಿದೆ. ರಸ್ತೆ ಅಭಿವೃದ್ಧಿಗಾಗಿಯೇ 2.50 ಲಕ್ಷ ಕೋಟಿ ರೂ. ಬಳಸಲಾಗಿದೆ'', ಎಂದರು.
ಕಬ್ಬು ಬೆಳೆ ಮಿತಿಯಲ್ಲಿರಲಿ: ಮಾತಿನ ನಡುವೆ, ಕಬ್ಬು ಬೆಳೆದ ರೈತರ ಸಮಸ್ಯೆಗಳ ಕುರಿತೂ ಮಾತನಾಡಿದ ಸಚಿವ ಗಡ್ಕರಿ, ''ಮಾರುಕಟ್ಟೆಯಲ್ಲಿ ಸಕ್ಕರೆ ದರ ಕುಸಿದಿದ್ದು, ಮುಂದೆ ಕಬ್ಬು ಬೆಳೆಯುವಾಗ ಮಿತಿಯಲ್ಲಿ ಬೆಳೆಸಿ. ಇದರಿಂದ ರೈತರಿಗೆ ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಸಹಕಾರಿ'', ಎಂದರು.
ನದಿಗೆ ನೀರು ಹರಿಸಿ: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಶಾಸಕ ರಾಜು ಕಾಗೆ, ''ಬೇಸಿಗೆಯಲ್ಲಿ ಇಲ್ಲಿಯ ಜನರು ಕುಡಿಯುವ ನೀರಿಗಾಗಿ ಪರದಾಡಬೇಕಿದ್ದು, ಕೇಂದ್ರ ಸರಕಾರ ನದಿಗೆ ನೀರು ಹರಿಸುವ ಕೆಲಸ ಮಾಡಬೇಕು'', ಎಂದು ಮನವಿ ಮಾಡಿದರು. ಅಥಣಿ ಶಾಸಕ ಲಕ್ಷ ್ಮಣ ಸವದಿ, ರಾಜ್ಯದ ಲೋಕೋಪಯೋಗಿ ಸಚಿವರ ವಿಳಂಬ ನೀತಿಯಿಂದ ರಸ್ತೆಗಳು ಅಭಿವೃದ್ಧಿ ಕಾಣುತ್ತಿಲ್ಲ ಎಂದು ದೂರಿದರು.
ಸಂಸದರಾದ ಡಾ. ಪ್ರಭಾಕರ ಕೋರೆ, ಸುರೇಶ ಅಂಗಡಿ, ಶಾಸಕರಾದ ಶಶಿಕಲಾ ಜೊಲ್ಲೆ, ದುರ್ಯೋಧನ ಐಹೊಳೆ, ಮಹಾಂತೇಶ ಕವಟಗಿಮಠ, ಮುಖಂಡರಾದ ಪರಪ್ಪ ಸವದಿ, ಚಿದಾನಂದ ಸವದಿ, ಅಜೀತ ಚೌಗುಲೆ, ಅಣ್ಣಾಸಾಬ ಪಾಟೀಲ, ಡಿ.ಸಿ ನಾಯಿಕ್, ವಿನಾಯಕ ಬಾಗಡಿ, ಗುಳಪ್ಪಾ ಜತ್ತಿ, ಗಜಾನನ ಯರೆಂಡೋಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸಚಿವ ನಿತಿನ್ ಗಡ್ಕರಿ ಆರಂಭದಲ್ಲಿ ಕನ್ನಡದಲ್ಲೇ ಮಾತನಾಡಿ, ಜನರಿಗೆ ಶುಭ ಕೋರಿದರು.