ಆ್ಯಪ್ನಗರ

ಬೆಕ್ಕುಗಳ ಆರೈಕೆಯಲ್ಲಿ ತೃಪ್ತಿ ಕಾಣುವ ನೂರ್‌ಜಹಾನ್ ಬಿ

ಉಗಾರ:'ದಯೆವೇ ಧರ್ಮದ ಮೂಲವಯ್ಯ' ಎನ್ನುವ ಶರಣರ ನುಡಿಯಂತೆ ಬದುಕುತ್ತಿರುವ ಮುಸ್ಲಿಂ ಸಮುದಾಯದ ನೂರ್‌ ಜಹಾನ್ ಬಿ ರುಕಮುದ್ದಿನ ಅತ್ತಾರ ಕಳೆದ 20 ವರ್ಷಗಳಿಂದ 7 ...

Vijaya Karnataka 20 May 2019, 5:00 am
ಉಗಾರ : 'ದಯೆವೇ ಧರ್ಮದ ಮೂಲವಯ್ಯ' ಎನ್ನುವ ಶರಣರ ನುಡಿಯಂತೆ ಬದುಕುತ್ತಿರುವ ಮುಸ್ಲಿಂ ಸಮುದಾಯದ ನೂರ್‌ ಜಹಾನ್ ಬಿ ರುಕಮುದ್ದಿನ ಅತ್ತಾರ ಕಳೆದ 20 ವರ್ಷಗಳಿಂದ 7 ಬೆಕ್ಕುಗಳನ್ನು ತಾಯಿಯಂತೆ ಜೋಪಾನ ಮಾಡುತ್ತಿದ್ದಾರೆ. ಅವರ ಬೆಕ್ಕುಗಳ ಮೇಲಿನ ಪ್ರೀತಿ ಎಂಥದ್ದೆಂದರೆ, ಅವರು ಸಾಕಿದ 7 ಬೆಕ್ಕುಗಳ ಪೈಕಿ ನಾಲ್ಕು ಬೆಕ್ಕುಗಳಿಗೆ ಪವಿತ್ರ ಮೆಕ್ಕಾ ಮದೀನಾದ 'ಹಜ್‌ ಯಾತ್ರೆ'ಯನ್ನೂ ಮಾಡಿಸಿದ್ದಾರೆ!
Vijaya Karnataka Web BEL-19 UGAR 1 NEWS PHOTO


ಮುಸ್ಲಿಂ ಸಮುದಾಯದವರಾದರೂ ಇವರ ಬದುಕಿಗೆ ಆಸರೆ ನೀಡಿರುವುದು ಹಿಂದೂ ಧರ್ಮದ ಸಂಸ್ಕೃತಿ, ಸಂಪ್ರದಾಯ. ಈ ಭಾಗದ ಪ್ರತಿ ಜಾತ್ರೆ, ಸಂತೆಗಳಲ್ಲಿ ಗ್ರಂಥಿಗೆ ಅಂಗಡಿಯಿಟ್ಟು ಅರಿಶಿಣ-ಕುಂಕುಮ, ತೆಂಗಿನಕಾಯಿ, ಸೀರೆ, ಬಳೆ ಸೇರಿದಂತೆ ದೇವರ ಪೂಜಾ ಸಾಮಗ್ರಿಗಳನ್ನು ಮಾರಿ ಬದುಕಿನ ಬಂಡಿ ದೂಕುವ ಇವರಿಗೆ ಬೆಕ್ಕುಗಳ ಮೇಲೆ ಎಲ್ಲಿಲ್ಲದ ಪ್ರೀತಿ, ಅಕ್ಕರೆ. ಅವರಂತೆ ಅವರ ತಂಗಿ ಭೂಮಿ ಅತ್ತಾರ ಸಹ ಮಾರ್ಜಾಲ ಪ್ರೇಮಿ. ನೂರ್‌ಜಾನಬಿ ಅವರೊಂದಿಗೆ ಅವರೂ ಸಹ ಆ ಬೆಕ್ಕುಗಳ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಬೆಕ್ಕುಗಳಿಗೆ ಹಜ್‌ ಯಾತ್ರೆ:
'ಬೆಕ್ಕುಗಳು ದೇವರ ಸಮಾನ. ಕಾಶಿ ರಾಮೇಶ್ವರದಲ್ಲಿ ಬೆಕ್ಕುಗಳನ್ನು ಪೂಜಿಸುತ್ತಾರಲ್ಲವೇ. ಅದೇ ರೀತಿ ನನಗೂ ಈ ಬೆಕ್ಕುಗಳು ದೇವರು. ಎಂಥ ಸಂದರ್ಭದಲ್ಲೂ ಈ ಬೆಕ್ಕುಗಳನ್ನು ನಾನು ಬಿಟ್ಟಿರುವುದಿಲ್ಲ. ಹಜ್‌ ಯಾತ್ರೆಗೆ ಹೋಗಬೇಕಾದ ಸಂದರ್ಭದಲ್ಲಿ ನನ್ನನ್ನು ಬಿಟ್ಟಿರದ ಬೆಕ್ಕುಗಳಿಗೆ ಪರ್ಯಾಯ ಆಶ್ರಯ ತೋರದೆ ಅವುಗಳನ್ನೂ ನನ್ನೊಟ್ಟಿಗೆ ಯಾತ್ರೆಗೆ ಕರೆದುಕೊಂಡು ಹೋದೆ' ಎನ್ನುತ್ತಾರೆ ನೂರ್‌ಜಹಾನ್ಬಿ.

ಪ್ರತಿದಿನ 200 ರೂ. ವೆಚ್ಚ :
ಮುಸ್ಲಿಂ ಸಮಾಜದವರಾದರೂ ಸಸ್ಯಾಹಾರಿಯಾಗಿರುವ ಅತ್ತಾರ ಕುಟುಂಬವು, ತಾವು ಸಾಕಿರುವ 7 ಬೆಕ್ಕುಗಳಿಗೆ ಪ್ರತಿದಿನ 20 ಮೊಟ್ಟೆ, ಹಾಲು ಸೇರಿ ಇನ್ನಿತರ ಆಹಾರ ಪದಾರ್ಥಕ್ಕಾಗಿ ದಿನಕ್ಕೆ 200 ರೂ. ವೆಚ್ಚ ಮಾಡುತ್ತಾರೆ. ವ್ಯಾಪಾರ ಕಡಿಮೆಯಿದ್ದಾಗ ತಾವು ಉಪವಾಸ ಇರುವ ಸಂದರ್ಭ ಬಂದರೂ ಬೆಕ್ಕುಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಇವರ ಮಾನವೀಯತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ರಾತ್ರಿ ಹೊತ್ತು ನಾವಿರುವ ಸ್ಥಳದಲ್ಲಿ ಹಾವು ಹಾಗೂ ಇನ್ನಿತರ ವಿಷಜಂತುಗಳು ಬಂದಾಗ ಎದುರು ಹೋಗಿ ಕಿರುಚಿ ನಮ್ಮಗೆ ಎಚ್ಚರಗೊಳಿಸುವ ಬೆಕ್ಕುಗಳು ನಮ್ಮ ರಕ್ಷಕರಾಗಿದ್ದಾರೆ. ಬೆಕ್ಕು ಸಾಕುವುದರಿಂದ ನಮಗೆ ತೃಪ್ತಿ, ನೆಮ್ಮದಿ, ಸಂತಸ ಲಭಿಸುತ್ತದೆ' ಎನ್ನುವ ಇವರು, ಈ ಮೂಕ ಪ್ರಾಣಿಗಳ ಸೇವೆ ನಿರಂತರವಾಗಿ ಮಾಡುತ್ತೇವೆ ಎನ್ನುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ