ಆ್ಯಪ್ನಗರ

ಸುಣಧೋಳಿ ಮತಗಟ್ಟೆ ಸ್ಥಳಾಂತರಕ್ಕೆ ಪಟ್ಟು

ಮೂಡಲಗಿ: ಜಡಿಸಿದ್ಧೇಶ್ವರ ಜಾತ್ರೆಯ ...

Vijaya Karnataka 25 Mar 2019, 5:00 am
ಮೂಡಲಗಿ: ಜಡಿಸಿದ್ಧೇಶ್ವರ ಜಾತ್ರೆಯ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆಯ ಮೂರು ಮತಗಟ್ಟೆಗಳ ಸ್ಥಳಾಂತರಕ್ಕೆ ಆಗ್ರಹಿಸಿದ ಸುಣಧೋಳಿ ಗ್ರಾಮಸ್ಥರು, ಒಂದು ವೇಳೆ ಮತಗಟ್ಟೆಗಳನ್ನು ಸ್ಥಳಾಂತರ ಮಾಡದಿದ್ದರೆ ಚುನಾವಣೆಯನ್ನೇ ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ.
Vijaya Karnataka Web BEL-24MDL3


ಲೋಕಸಭೆ ಚುನಾವಣೆ ಹಾಗೂ ಸುಣಧೋಳಿ ಜಡಿಸಿದ್ಧೇಶ್ವರ ಯೋಗೀಂದ್ರ ಜಾತ್ರಾ ರಥೋತ್ಸವ ಒಂದೇ ದಿನ ಬಂದಿದ್ದು, ಚುನಾವಣೆ ಆಯೋಗದ ನಿರ್ಬಂಧಗಳ ಹಿನ್ನೆಲೆಯಲ್ಲಿ ಜಾತ್ರೆಗೆ ಬರುವ ಭಕ್ತರಿಗೆ ತೊಂದರೆ ಆಗುತ್ತದೆ. ಆದ್ದರಿಂದ ಮೂರು ಮತಗಟ್ಟೆಗಳನ್ನು ಬೇರೆಡೆ ಸ್ಥಳಾಂತರಿಸಬೇಕೆಂದು ಸುಣಧೋಳಿ ಗ್ರಾಮಸ್ಥರು ತಹಸೀಲ್ದಾರ ಹಾಗೂ ಚುನಾವಣೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಜಾತ್ರೆಗೆ ಆಗಮಿಸುವ ಭಕ್ತರಿಗೆ, ವಾಹನ ನಿಲುಗಡೆಗೆ, ಅಂಗಡಿ ಮುಂಗಟ್ಟುಗಳಿಗೆ, ಜಾತ್ರೆಯ ರಥೋತ್ಸವಕ್ಕೆ ತೊಂದರೆ ಆಗುತ್ತದೆ. ರಥೋತ್ಸವವನ್ನು ಯಾವುದೇ ಕಾರಣಕ್ಕೂ ಮುಂದೂಡಲು ಆಗುವುದಿಲ್ಲ. ಆದ್ದರಿಂದ ಶ್ರೀ ಮಠದ ಹತ್ತಿರವಿರುವ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮೂರು ಮತಗಟ್ಟೆಗಳನ್ನು ಬೇರೆಡೆ ಸ್ಥಳಾಂತರ ಮಾಡಬೇಕೆಂದು ಮನವಿಯಲ್ಲಿ ತಿಳಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ ಮೂಡಲಗಿ ತಹಸೀಲ್ದಾರ ಮುರಳೀಧರ, ಅರಬಾವಿ ಬ್ಲಾಕ್‌ ಸಹಾಯಕ ಚುನಾವಣಾಧಿಕಾರಿ ವೆಂಕಟಸ್ವಾಮಿ ಸ್ಥಳ ಪರಿಶೀಲನೆ ಮಾಡಲು ಹಾಗೂ ಗ್ರಾಮಸ್ಥರ ಮನವೊಲಿಸಲು ಆಗಮಿಸಿದ್ದರು. ಮಠದ ಕಮಿಟಿ ಹಾಗೂ ಗ್ರಾಮಸ್ಥರೊಡನೆ ಚರ್ಚಿಸಿದ ಅಧಿಕಾರಿಗಳು, ''ಮನವಿಯನ್ನು ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿದೆ. ಬಹುತೇಕ ಮತಗಟ್ಟೆ ಸ್ಥಳಾಂತರ ಸಾಧ್ಯವಿಲ್ಲ. ನಿಗದಿಯಾದ ಸ್ಥಳದಲ್ಲಿ ಪೊಲೀಸ್‌ ಬಂದೋಬಸ್ತ್‌ನಲ್ಲಿ ಮತದಾನ ನಡೆಯುತ್ತದೆ'', ಎಂದು ಅಧಿಕಾರಿಗಳು ತಿಳಿಸಿದರು.

ನಂತರ ಶ್ರೀಮಠದ ಪೀಠಾಧಿಕಾರಿ ಶ್ರೀ ಶಿವಾನಂದ ಸ್ವಾಮೀಜಿ, ಗ್ರಾಮದ ಮುಖಂಡರ ಜತೆ ಚರ್ಚಿಸಿದರು. ಕೊನೆಗೆ ತಮಗೆ ಚುನಾವಣೆಗಿಂತ ಜಾತ್ರೆಯೇ ಮುಖ್ಯ ಎಂದು ಚುನಾವಣೆ ಬಹಿಷ್ಕಾರದ ಘೋಷಣೆ ಮಾಡಿದರು. ಯಾವುದೇ ರಾಜಕೀಯ ಪಕ್ಷ ದವರು ಪ್ರಚಾರಕ್ಕೆ ಬರುವಂತಿಲ್ಲ ಎಂದೂ ಈ ಮೂಲಕ ತಿಳಿಸಿದರು.

ಸಿ.ಎಸ್‌.ವಾಲಿ, ಸಿ.ಎ.ಗಾಣಿಗೇರ, ಬಿ.ಬಿ.ಹೊಟ್ಟಿಹೊಳಿ, ಶಿವಕುಮಾರ ಅಂಗಡಿ, ದುಂಡಪ್ಪ ಚೌಗಲಾ, ಮಾಯಪ್ಪ ಢವಳೇಶ್ವರ, ಶಂಕರ ಕರಾಳೆ, ಮಹಾದೇವ ಹೊರಟ್ಟಿ, ಬಸು ಪಾಶಿ, ಸಿದ್ದಾರೂಡ ಕಮತಿ, ಮಹಾನಿಂಗಯ್ಯ ಹಿರೇಮಠ, ಶಂಭುಲಿಂಗ ಮಾದರ ಮತ್ತಿತರರು ಉಪಸ್ಥಿತರಿದ್ದರು.

ಚುನಾವಣೆ ಆಯೋಗದ ಆದೇಶಕ್ಕೆ ಕಾಯುತ್ತಿದ್ದೇವೆ. ಸ್ಥಳಾಂತರಕ್ಕೆ ಆದೇಶ ಬರದಿದ್ದರೆ ನಿಗದಿತ ಸ್ಥಳದಲ್ಲಿಯೇ ಮತದಾನ ನಡೆಯುವುದು.
- ಮುರಳೀಧರ, ಮೂಡಲಗಿ ತಹಸೀಲ್ದಾರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ