ಆ್ಯಪ್ನಗರ

ಕಬ್ಬು ಬೆಳೆಗಾರರ ಹೋರಾಟ ಹತ್ತಿಕ್ಕಲು ಸಂಚು

ಐನಾಪುರ: ಕಬ್ಬು ಬೆಳೆಯದ ಅಥಣಿ ತಾಲೂಕಿನ ಉತ್ತರ ...

Vijaya Karnataka 12 Nov 2018, 5:00 am
ಐನಾಪುರ : ಕಬ್ಬು ಬೆಳೆಯದ ಅಥಣಿ ತಾಲೂಕಿನ ಉತ್ತರ ಭಾಗದ ರೈತರು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಕಾರ್ಖಾನೆ ಪರ ಹೋರಾಟ ಮಾಡುತ್ತಿದ್ದು, ಇದಕ್ಕೆ ಕಬ್ಬು ಬೆಳೆಗಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಉತ್ತರ ಭಾಗದ ರೈತರಿಗಾಗಿ ರೂಪಿಸಿರುವ ಬಸವೇಶ್ವರ ಏತ ನೀರಾವರಿ ಯೋಜನೆ ಐನಾಪುರ ಮಾರ್ಗವಾಗಿ ಹಾಯ್ದು ಹೋಗುತ್ತಿದ್ದು, ಈ ಯೋಜನೆಯನ್ನು ಬಂದ್‌ ಮಾಡುವುದಾಗಿ ಕಬ್ಬು ಬೆಳೆಗಾರರು ಎಚ್ಚರಿಸಿದ್ದಾರೆ.
Vijaya Karnataka Web BEL-11 AINAPUR 01


ಪಟ್ಟಣದಲ್ಲಿ ಭಾನುವಾರ ರೈತ ಹಿತರಕ್ಷ ಣಾ ಸಮಿತಿ ಅಧ್ಯಕ್ಷ ಹಾಗೂ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರವೀಂದ್ರ ಗಾಣಿಗೇರ, ಮುಖಂಡರಾದ ಆದಿನಾಥ ದಾನೊಳ್ಳಿ, ಸಂಜಯ ಭಿರಡಿ ನೇತೃತ್ವದಲ್ಲಿ ಐನಾಪುರ, ಕೃಷ್ಣಾ ಕಿತ್ತೂರ, ಬಣಜವಾಡ, ಕಾತ್ರಾಳ, ಮೋಳೆ ಗ್ರಾಮಗಳ ನೂರಾರು ರೈತರು ಸಭೆ ಸೇರಿ ಈ ತೀರ್ಮಾನ ಕೈಗೊಂಡರು.

ಹಿಂದಿನಿಂದಲೂ ಅಥಣಿ ತಾಲೂಕಿನ ಉತ್ತರ ಭಾಗದ ಮದಬಾವಿ, ಅನಂತಪುರ, ಖಿಳೇಗಾವ, ಶಿರೂರ, ಸಂಬರಗಿ, ಆಜೂರ, ಪಾಂಡೇಗಾಂವ ಸೇರಿದಂತೆ 22 ಗ್ರಾಮಗಳು ಸತತ ಬರಗಾಲಕ್ಕೆ ತುತ್ತಾಗಿವೆ. ಈ ಗ್ರಾಮಸ್ಥರಿಗಾಗಿ ಸರಕಾರ ಬಸವೇಶ್ವರ ಏತ ನೀರಾವರಿ ಯೋಜನೆ ರೂಪಿಸಿದ್ದು, ಇದಕ್ಕಾಗಿ ಕೃಷ್ಣಾ ನದಿ ತೀರದ ಐನಾಪುರದ ರೈತರು ತಮ್ಮ ಜಮೀನು ಕಳೆದುಕೊಂಡು ಉತ್ತರ ಭಾಗದ ರೈತರ ನೀರಾವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಆದರೆ, ಕಬ್ಬು ಬೆಳೆ ಬೆಳೆಯದ ಅಲ್ಲಿನ ರೈತರು ಶಾಸಕರ ಒಡೆತನದ ಸಕ್ಕರೆ ಕಾರ್ಖಾನೆಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕಬ್ಬು ಕಟಾವು ಮಾಡಲು ಅನುಮತಿ ನೀಡುವಂತೆ ರಸ್ತೆ ತಡೆ ಮಾಡುತ್ತಿದ್ದಾರೆ. ಈ ಮೂಲಕ ಕಬ್ಬು ಬೆಳೆಗಾರರ ಹೋರಾಟ ಹತ್ತಿಕ್ಕಲು ಯತ್ನಿಸುತ್ತಿದ್ದಾರೆ ಎಂದು ಸಭೆಯಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಕಬ್ಬಿನ ಬಾಕಿ ಬಿಲ್‌ ನೀಡಬೇಕು. ಪ್ರಸಕ್ತ ಹಂಗಾಮಿಗೆ ಎಫ್‌ಆರ್‌ಪಿ ಪ್ರಕಾರ ದರ ಘೋಷಿಸಿ ನಂತರ ಕಬ್ಬು ನುರಿಸಬೇಕು ಎಂದು ಕಬ್ಬು ಬೆಳೆಗಾರರು ಹೋರಾಟ ಮಾಡುತ್ತಿದ್ದಾರೆ. ಆದರೆ, ಈ ಹೋರಾಟಕ್ಕೆ ವಿರೋಧ ಮಾಡುತ್ತಿರುವವರಿಗೆ ನಾವೇಕೆ ಸಹಕರಿಸಬೇಕು? ಎಂದು ಪ್ರಶ್ನಿಸಿದ ರೈತರು, ತಮ್ಮ ಜಮೀನುಗಳ ಮೂಲಕ ಹಾಯ್ದು ಹೋಗಿರುವ ಬಸವೇಶ್ವರ ಏತ ನೀರಾವರಿ ಹಾಗೂ ಖಾಸಗಿ ನೀರಾವರಿ ಯೋಜನೆಗಳನ್ನು ಸ್ಥಗಿತಗೊಳಿಸಲು ತೀರ್ಮಾನಿಸಿದರು.

ಅಶೋಕ ಅಪರಾಜ, ಅಣ್ಣಾಸಾಬ ಡೂಗನವರ, ರಮೇಶ ಶೇಗುಣಶಿ, ಕುಮಾರ ಅಪರಾಜ, ವಿಶ್ವನಾಥ ನಾಮದಾರ, ಗುರುರಾಜ ಮಡಿವಾಳರ, ಸಂತೋಷ ನಿಕ್ಕಂ, ಬಾಹುಬಲಿ ಕುಸನಾಳೆ, ರಾಮು ಸವದತ್ತಿ, ಮಲ್ಲಪ್ಪ ಅಪರಾಜ, ಸಿದ್ದು ಅಡಿಸೇರಿ, ಅಪ್ಪಾಸಾಬ ಬಸ್ತವಾಡೆ, ಸಂಜು ಕುಸನಾಳೆ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ