ಆ್ಯಪ್ನಗರ

ಜಕನಿ ಬಾವಿಯಲ್ಲಿ ಮೇಲೆದ್ದ ಕೊಡಗಳು

ರಾಮದುರ್ಗ: ತಾಲೂಕಿನ ಗುತ್ತಿಗೋಳಿ -ಹೊಸಕೋಟಿಯಲ್ಲಿರುವ ಜಕನಿ ...

Vijaya Karnataka 1 Jun 2018, 5:00 am
ರಾಮದುರ್ಗ: ತಾಲೂಕಿನ ಗುತ್ತಿಗೋಳಿ -ಹೊಸಕೋಟಿಯಲ್ಲಿರುವ ಜಕನಿ ಬಾವಿಯಲ್ಲಿ ನೀರಿನ ಕೊಡಗಳು ಮೇಲೆದ್ದಿರುವುದು ಜನರಿಗೆ ಪವಾಡ ಸದೃಶ ಅನುಭವ ನೀಡಿದ್ದು, ಇದನ್ನು ವೀಕ್ಷಿಸಲು ಗ್ರಾಮಸ್ಥರು ತಂಡೋಪ ತಂಡವಾಗಿ ಬರುತ್ತಿದ್ದಾರೆ.
Vijaya Karnataka Web BEL-31RD4


ಶತಮಾನದಷ್ಟು ಹಳೆಯದಾದ ಈ ಜಕನಿ ಬಾವಿಯಲ್ಲಿ ಒಂದು ವರ್ಷ, ಎರಡು ವರ್ಷ ಇಲ್ಲವೆ ಮೂರು ವರ್ಷಕ್ಕೊಮ್ಮೆ ತಾಮ್ರದ ಮತ್ತು ಮಣ್ಣಿನ ಕೊಡಗಳು ಕಾಣಿಸಿಕೊಳ್ಳುತ್ತಾ ಬಂದಿವೆ. ಜಲಕನ್ಯೆಯರು ರಾತ್ರಿ ವೇಳೆ ಬಾವಿಯಲ್ಲಿ ಜಲಕ್ರೀಡೆಯಾಡುತ್ತಾರೆ. ಇಲ್ಲಿಯೂ ಅವರು ಬಂದು ಈ ಬಾವಿಯಲ್ಲಿ ಸ್ನಾನ ಮಾಡುವುದರಿಂದ ಇದಕ್ಕೆ 'ಜಕನಿ ಬಾವಿ' ಎಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ.

ಗುತ್ತಿಗೋಳಿ ಹಾಗೂ ಹೊಸಕೋಟಿ ಗ್ರಾಮಗಳಿಂದ ತಲಾ ಒಂದೊಂದು ತಾಮ್ರದ ಕೊಡ ಹಾಗೂ ಒಂದೊಂದು ಮಣ್ಣಿನ ಕೊಡಗಳನ್ನು ಬಸವ ಜಯಂತಿ ನಂತರ ಪೂಜೆ ಮಾಡಿ ಜಕನಿ ಬಾವಿಯಲ್ಲಿ ಮುಳುಗಿಸುವ ಸಂಪ್ರದಾಯ ಅನಾದಿ ಕಾಲದಿಂದ ನಡೆದುಕೊಂಡು ಬಂದಿದೆ. ಮುಳುಗಿದ ಆ ಕೊಡಗಳು 1 ವರ್ಷಕ್ಕೊ ಇಲ್ಲವೆ ಎರಡರಿಂದ ಮೂರು ವರ್ಷಕ್ಕೊಮ್ಮೆ ತಾವೇ ಮೇಲೇಳುತ್ತವೆ.

ತುಂಬಿದ ಕೊಡ ಮೇಲ್ಮುಖವಾಗಿ ಮೇಲೆದ್ದರೆ ಆ ವರ್ಷ ಸಮೃದ್ಧ ಮಳೆ, ಬೆಳೆ, ನೆಮ್ಮದಿ ಲಭಿಸುತ್ತದೆ. ಒಂದು ಕಡೆ ವಾಲಿದ್ದರೆ ಅಷ್ಟೊಂದು ಉತ್ತಮವಲ್ಲ ಎಂಬುದು ಗ್ರಾಮಸ್ಥರ ನಂಬಿಕೆಯಾಗಿದೆ.

ಅದೇ ರೀತಿ ಈ ಬಾರಿ ಎರಡು ವರ್ಷಗಳ ನಂತರ ಜಕನಿ ಬಾವಿಯಲ್ಲಿ ಒಂದು ತಾಮ್ರದ ಕೊಡ ಹಾಗೂ ಒಂದು ಮಣ್ಣಿನ ಕೊಡ ಮೇಲೆದ್ದಿವೆ. ಇದು ಗಮನಕ್ಕೆ ಬಂದ ಕೂಡಲೇ ಅವಳಿ ಗ್ರಾಮಗಳಲ್ಲಿರುವ ಎಲ್ಲ ದೇವತೆಗಳಿಗೆ ಸುಮಂಗಲೆಯರ ಪೂರ್ಣಕುಂಭ ಮೇಳದೊಂದಿಗೆ ತೆರಳಿ ಉಡಿ ತುಂಬಿ ಜಕನಿ ಬಾವಿಗೆ ಪೂಜೆ ಸಲ್ಲಿಸಿದ್ದಾರೆ.

ಈ ಬಾವಿಯನ್ನು 20 ವರ್ಷದ ಹಿಂದೆ ಸ್ವಚ್ಛಗೊಳಿಸಲಾಗಿತ್ತು. ಆಗ 180 ತಾಮ್ರದ ಕೊಡಗಳು, ತಂಬಿಗೆ, ಬಕೆಟ್‌ಗಳು ದೊರೆತಿದ್ದವು. ಅವುಗಳನ್ನು ಮಾರಾಟ ಮಾಡಿ ಬಾವಿ ಸುತ್ತ ಕಂಪೌಂಡ ನಿರ್ಮಿಸಲಾಗಿದೆ. ಪ್ರತಿವರ್ಷವೂ ಸುಗ್ಗಿಕಾಲ ಮುಗಿದ ಮೇಲೆ ಬಾವಿಗೆ ಪೂಜೆ ಸಲ್ಲಿಸುವ ಸಂಪ್ರದಾಯವಿದೆ. ಕಲಹಾಳ, ನಾಡಗೌಡ್ರ, ಪಾಟೀಲ ಕುಟುಂಬದಿಂದ ಪ್ರತಿವರ್ಷವೂ ಅನ್ನ ಸಂತರ್ಪಣೆ ನಡೆಯುತ್ತಿದೆ ಎಂದು ಗ್ರಾಮದ ಹಿರಿಯ ಸಾಹಿತಿ ಎಚ್‌.ಆರ್‌.ಮುದಿಗೌಡ್ರ ಹೇಳುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ