ಆ್ಯಪ್ನಗರ

ಪ್ರಧಾನಿ ಮೋದಿ ಯುವ ಭಾರತದ ಸ್ಫೂರ್ತಿಯ ಸೆಲೆ

ಬೆಳಗಾವಿ : ಪ್ರಧಾನಿ ನರೇಂದ್ರ ಮೋದಿ ಯುವ ಭಾರತದ ಸ್ಫೂರ್ತಿಯ ಸೆಲೆಯಂತಿದ್ದಾರೆ. ದಿನದ 24 ಗಂಟೆಯೂ ...

Vijaya Karnataka 25 Mar 2019, 5:00 am
ಬೆಳಗಾವಿ : ಪ್ರಧಾನಿ ನರೇಂದ್ರ ಮೋದಿ ಯುವ ಭಾರತದ ಸ್ಫೂರ್ತಿಯ ಸೆಲೆಯಂತಿದ್ದಾರೆ. ದಿನದ 24 ಗಂಟೆಯೂ ಕಾರ್ಯತತ್ಪರವಾಗಿರುವ ಅವರು ಜನಪರವಾದ ಕೆಲಸ ಮಾಡಲು ಎಂದೂ ಹಿಂಜರಿಯುವುದಿಲ್ಲ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಹಾಗೂ ಪರಿಸರ ಖಾತೆ ಸಚಿವ ಡಾ.ಹರ್ಷವರ್ಧನ ಹೇಳಿದರು.
Vijaya Karnataka Web BLG-2403-2-52-24RAJU-4


ಇಲ್ಲಿನ ಜೆಎನ್‌ಎಂಸಿ ಆವರಣದ ಕೆಎಲ್‌ಇ ಶತಮಾನೋತ್ಸವ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರಬುದ್ಧರೊಂದಿಗಿನ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗುಜರಾತ್‌ ಮುಖ್ಯಮಂತ್ರಿ ಆಗಿದ್ದಾಗ ನರೇಂದ್ರ ಮೋದಿಯ ಕ್ರಿಯಾಶೀಲತೆ ಮೆಚ್ಚಿಕೊಂಡಿದ್ದ ಜನ ಇವರು ಪ್ರಧಾನಿ ಆಗಬೇಕೆಂದು 2014ರಲ್ಲಿ ನಿಶ್ಚಯಿಸಿಕೊಂಡಿದ್ದರು. ಹೀಗಾಗಿ ವಿಶ್ವದ ನಾನಾ ಕಡೆಗಳಲ್ಲಿ ಕೆಲಸದಲ್ಲಿರುವವರೂ ಭಾರತಕ್ಕೆ ಬಂದು ಚುನಾವಣೆ ಪ್ರಚಾರ ಮಾಡಿದರು. ಇದೇ ಉಮೇದು ಈ ಬಾರಿಯೂ ಇದೆ. ಎಲ್ಲ ಕಡೆಗೂ ಮೋದಿ ಅಲೆ ಇದೆ ಎಂದರು.

ಮೋದಿ ಒಂದು ಉತ್ತಮ ವಿಚಾರದ ಕುರಿತು ಮೊದಲು ಗಂಭೀರ ಚಿಂತನೆ ಮಾಡುತ್ತಾರೆ. ನಂತರ ಕಾರ್ಯಯೋಜನೆ ರೂಪಿಸುತ್ತಾರೆ. ಆಮೇಲೆ ಅನುಷ್ಠಾನಕ್ಕೆ ಇಳಿಯುತ್ತಾರೆ. ಬ್ರಿಟಿಷ್‌ ಕಾಲದಿಂದ ಜನರಿಗೆ ಬೇಡವಾದ 1,500 ಕಾನೂನುಗಳನ್ನು ಕಸದ ಬುಟ್ಟಿಗೆ ಹಾಕಿದರು. ಜನರ ಹಿತ ಕಾಯಲು ಹೊಸ ಕಾನೂನುಗಳ ರಚನೆ ಮಾಡಿದರು. ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಮೊದಲ ಕ್ಯಾಬಿನೆಟ್‌ದಲ್ಲೇ ಭ್ರಷ್ಟಾಚಾರದ ವಿರುದ್ಧ ಗದಾ ಪ್ರಹಾರ ಮಾಡಿದರು. ಈ ಮೂಲಕ ಯುಪಿಎ ಕಾಲದಲ್ಲಿ ಹಗರಣಗಳಿಂದ ಬೇಸತ್ತಿದ್ದ ಜನತೆಗೆ ಸಮಾಧಾನ ತಂದರು ಎಂದು ತಿಳಿಸಿದರು.

ಸಂಸದ ಸುರೇಶ ಅಂಗಡಿ ಮಾತನಾಡಿ, ಕಳೆದ ಮೂರು ಸಂಸದ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ತಿಳಿಸಿದರು.

ಸಚಿವರೊಂದಿಗೆ ಸಂವಾದ: ಈ ಸಂದರ್ಭದಲ್ಲಿ ಸಚಿವರೊಂದಿಗೆ ಸಂವಾದ ನಡೆಯಿತು. ಆರ್‌.ಎಸ್‌. ಮುತಾಲಿಕ, ಡಾ. ಎಚ್‌.ಬಿ. ರಾಜಶೇಖರ, ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ, ಡಾ. ದೀಪಾ ಪಾಟೀಲ ಮತ್ತಿತರರು ಕೇಂದ್ರದ ಯೋಜನೆ ಅನುಷ್ಠಾನದಲ್ಲಿ ರಾಜ್ಯ ಸರಕಾರದ ಧೋರಣೆ, ಶಿಕ್ಷಣ ನೀತಿ, ನ್ಯಾಯಾಂಗ ವ್ಯವಸ್ಥೆ ಬಲಪಡಿಸುವುದು, ಸರಕಾರದ ಆರೋಗ್ಯ ಯೋಜನೆಗಳು, ಜಿಎಸ್ಟಿ ಒಳಗೊಂಡು ಇತರೆ ವಿಷಯವಾಗಿ ಪ್ರಶ್ನೆ ಕೇಳಿದರು.

ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ವೇದಿಕೆ ಮೇಲಿದ್ದರು. ಈರಣ್ಣ ಕಡಾಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕರಾದ ಮಹಾದೇವಪ್ಪ ಯಾದವಾಡ, ಆನಂದ ಮಾಮನಿ, ಅನಿಲ ಬೆನಕೆ, ವಿಧಾನ ಪರಿಷತ್‌ ಪ್ರತಿಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಹರಕುಣಿ, ಕಿರಣ ಜಾಧವ, ಬಸವರಾಜ ರೊಟ್ಟಿ, ಡಾ.ರವಿ ಪಾಟೀಲ, ರಾಜು ಚಿಕ್ಕನಗೌಡರ್‌, ಲೀನಾ ಟೋಪಣ್ಣವರ್‌, ಶಂಕರಗೌಡ ಪಾಟೀಲ, ಲಿಂಗರಾಜ ಪಾಟೀಲ, ವೈದ್ಯರು, ಉದ್ಯಮಿಗಳು, ನ್ಯಾಯವಾದಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ದೇಶಕ್ಕೆ ಅಸಾಧಾರಣ ನಾಯಕತ್ವ :
ದೇಶಕ್ಕೆ ಅಸಾಧಾರಣ ನಾಯಕತ್ವ ಸಿಕ್ಕಿದೆ. ಜಗತ್ತು ನಮ್ಮ ಪ್ರಗತಿ ಬಗ್ಗೆ ಬೆರಗುಗೊಳ್ಳುವಂತಾಗಿದೆ. ಆರ್ಥಿಕ ಬೆಳವಣಿಗೆ ವೇಗಗತಿಯಲ್ಲಿ ನಡೆದಿದೆ. ಉದ್ಯೋಗ ಸೃಷ್ಟಿಯಾಗುತ್ತಿದೆ. ಭಯೋತ್ಪಾದನೆಗೆ ಪ್ರತಿಕಾರ ತಗೆದುಕೊಳ್ಳಲಾಗುತ್ತಿದೆ. ಮಹಾಘಟಬಂಧನದಿಂದ ಬಿಜೆಪಿಗೆ ಯಾವುದೇ ಧಕ್ಕೆ ಇಲ್ಲ. ಎಲ್ಲರೂ ಚೌಕಿದಾರ ರೂಪದಲ್ಲಿ ಕೆಲಸ ಮಾಡಿ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಡಾ. ಹರ್ಷವರ್ಧನ ಕೋರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ