ಆ್ಯಪ್ನಗರ

ಶಿರಗುಪ್ಪಿ ಶುಗರ್ಸ್‌ ವಿಸ್ತರಣೆಗೆ ಪರ-ವಿರೋಧ ಅಭಿಪ್ರಾಯ

ಕಾಗವಾಡ: ಗ್ರಾಮದ ಶಿರಗುಪ್ಪಿ ಶುಗರ್‌ ವರ್ಕ್ಸ್‌ ಲಿಮಿಟೆಡ್‌ ಸಕ್ಕರೆ ಕಾರ್ಖಾನೆ ವಿಸ್ತರಣಾ ...

Vijaya Karnataka 25 Jun 2019, 5:00 am
ಕಾಗವಾಡ : ಗ್ರಾಮದ ಶಿರಗುಪ್ಪಿ ಶುಗರ್‌ ವರ್ಕ್ಸ್‌ ಲಿಮಿಟೆಡ್‌ ಸಕ್ಕರೆ ಕಾರ್ಖಾನೆ ವಿಸ್ತರಣಾ ಯೋಜನೆಯಿಂದ ಪರಿಸರದ ಮೇಲಾಗಲಿರುವ ಸಾಧಕ, ಬಾಧಕ ಪರಿಣಾಮಗಳ ಕುರಿತು ಕಾರ್ಖಾನೆ ಆವರಣದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆಯೋಜಿಸಿದ್ದ ಸಾರ್ವಜನಿಕ ಅಹವಾಲು ಸಭೆಯಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.
Vijaya Karnataka Web BEL-24 KAGWAD 1 A NEWS PHOTO


ಸಭೆಯ ಆರಂಭದಲ್ಲಿ ಪ್ರಾದೇಶಿಕ ಮಾಲಿನ್ಯ ಅಧಿಕಾರಿ ಐ.ಎಚ್‌.ಜಗದೀಶ ಸ್ವಾಗತಿಸಿ ಮಾಹಿತಿ ನೀಡಿ, ಶಿರಗುಪ್ಪಿ ಸಕ್ಕರೆ ಕಾರ್ಖಾನೆ ಈಗಾಗಲೇ ಪ್ರತಿದಿನ 4 ಸಾವಿರ ಟನ್‌ ಕಬ್ಬು ನುರಿಸುವ ಸಾಮರ್ಥ್ಯ‌ ಹೊಂದಿದೆ. ಇದನ್ನು 10 ಸಾವಿರ ಟನ್‌ವರೆಗೆ ವಿಸ್ತರಿಸಲಾವುದು, ಕಬ್ಬು ನುರಿಸಿ ಉಳಿದ ಬಗ್ಯಾಸ್‌ ಬಳಸಿ, ಈಗಾಗಲೇ 15 ಮೆ.ವ್ಯಾಟ್‌ ಕೋ-ಜನರೇಷನ್‌ ಘಟಕದಿಂದ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತಿದ್ದು ಇದರ ಸಾಮರ್ಥ್ಯ‌ ವಿಸ್ತರಿಸಲಾಗುವುದು. 120 ಕೆಎಲ್‌ಪಿಡಿ ಸಾಮರ್ಥ್ಯ‌ದ ಕಾಕಂಬಿ ಆಧಾರಿತ ಇಥೆನಾಲ್‌ ಉತ್ಪಾದನೆಗಾಗಿ ಪ್ರಕಲ್ಪ(ತ್ಯಾಜ್ಯ ನೀರು ವಿಲೆವಾರಿ ರಹಿತ) ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಕಾಗವಾಡದ ರೈತ ಮುಖಂಡರಾದ ನಾಥಗೌಡಾ ಪಾಟೀಲ, ರಮೇಶ ಚೌಗುಲೆ, ಸಹದೇವ ಚೌಗುಲೆ, ಕಾಕಾಸಾಹೇಬ ಪಾಟೀಲ, ಕಾಕಾಸಾಹೇಬ ಚೌಗುಲೆ, ಅನಿಲ ಕೋರೆ, ಮತ್ತು ಶಶಿಕಾಂತ ಜೋಶಿ ಸೇರಿದಂತೆ ನೂರಾರು ರೈತರು ಸಕ್ಕರೆ ಕಾರ್ಖಾನೆ ಆವರಣದಲ್ಲಿ ಘಟಕ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದರು.

ಅವರು ಜಿಲ್ಲಾಧಿಕಾರಿಗಳಿಗೆ ಕೆಲ ದಾಖಲೆಗಳನ್ನು ನೀಡಿ, ಸಕ್ಕರೆ ಕಾರ್ಖಾನೆ ಪ್ರಾರಂಭವಾಗಿ ಇಂದಿನ ವರೆಗೆ ಕಾಗವಾಡ ಗ್ರಾಮಕ್ಕೆ ಯಾವುದೇ ಸಹಕಾರ ನೀಡಿಲ್ಲ. ಇಲ್ಲಿಯ ಯುವಕರನ್ನು ಕಾರ್ಖಾನೆ ಕಾರ್ಮಿಕರಾಗಿ ಮಾಡುವುದಾಗಿ ಹೇಳಿದಂತೆ ನಡೆದುಕೊಂಡಿಲ್ಲ. ಕಬ್ಬು ನೀಡಿದ ರೈತರಿಗೆ ಎಫ್‌ಆರ್‌ಪಿ ನೀಡಿಲ್ಲ. ಇಲ್ಲಿಯ ಅನೇಕ ಬಾವಿ, ಕೊಳವೆ ಬಾವಿಗಳ ನೀರು ಕಲುಶಿತಗೊಂಡಿದ್ದು ಕಾರ್ಖಾನೆ ಹೆಚ್ಚಿನ ವಿಸ್ತರಣೆಗೆ ನೀಡಬಾರದೆಂದು ಒತ್ತಾಯಿಸಿದರು.

ರೈತ ಮುಖಂಡರಾದ ಗೋಟು ಚೌಗುಲೆ, ಮಹಾದೇವ ಮಾಳಿ, ಜಯೇಂದ್ರ ಮಾಳಿ, ಚಂದು ಪರಿಟ, ಜಾವೇದ್‌ ಶೇಖ್‌, ನೇತಾಜಿ ಕಾಟೆ, ಅನಿಲ ಮಗದುಮ್ಮ, ಮಾರುತಿ ಕನಾಳ, ತಾತ್ಯಂಭಟ್ಟ ಜೋಶಿ, ಅಜಿತ ಕರವ, ಸೇರಿದಂತೆ ಕೆಲ ರೈತರು ಪರ-ವಿರೋಧ ವಿಚಾರ ವ್ಯಕ್ತಪಡಿಸಿದರು.

ಸಕ್ಕರೆ ಕಾರ್ಖಾನೆ 10 ವರ್ಷಗಳ ಹಿಂದೆ ಪ್ರಾರಂಭಿಸದೆ ಹೋಗಿದ್ದರೆ ಕಬ್ಬು ನುರಿಸುವ ವ್ಯವಸ್ಥೆ ಕಾಗವಾಡದಲ್ಲಿ ಇರುತ್ತಿರಲಿಲ್ಲ. ಇದರಿಂದ ಅನೇಕ ರೈತರಿಗೆ ಸಹಾಯವಾಗಿದೆ ಎಂದು ಕೆಲ ರೈತರು ಹೇಳಿದರು. ಸಮಸ್ಯೆಗಳಿಗೆ ಸ್ಪಂದಿಸಿ ಮಾಲಿನ್ಯ ಆಗದಂತೆ ನೋಡಿಕೊಂಡು ಸಕಾಲದಲ್ಲಿ ಕಬ್ಬಿಗೆ ಬಿಲ್ಲು ನೀಡಿ ಸಹಕರಿಸಿದರೆ ಕಾರ್ಖಾನೆ ಕೈಗೊಂಡ ವಿಸ್ತರಣೆ ಮಾಡಬಹುದೆಂದು ಕೆಲವರು ಸಮ್ಮತಿಸಿದರು.

ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಕಲ್ಲಪ್ಪಣ್ಣಾ ಮಗೆಣ್ಣವರ, ಎಂಡಿ ಡಾ. ರಾಜು ದೊಡ್ಡಣ್ಣವರ ''ಕಾರ್ಖಾನೆ ಡಿಸ್ಟಿಲರಿ ವಿಸ್ತರಣೆ ಕುರಿತು ನೀಡುತ್ತಿರುವ ಆದೇಶ ಪಾಲಿಸಿ ರೈತರು ಮತ್ತು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡಿದ್ದೇವೆ. ಈ ಮುಂದೆಯೂ ನೋಡಿಕೊಳ್ಳುತ್ತೇವೆ'' ಎಂದು ಹೇಳಿದರು.

ಅಧ್ಯಕ್ಷ ತೆ ಬೆಳಗಾವಿ ಅಪರ ಜಿಲ್ಲಾಧಿಕಾರಿ ಡಾ. ಎಚ್‌.ಬಿ. ಬೂದೆಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಕಾಗವಾಡ ತಹಸೀಲ್ದಾರ್‌ ಪರಿಮಳಾ ದೇಶಪಾಂಡೆ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ