ಆ್ಯಪ್ನಗರ

2'ಎ' ವರ್ಗಕ್ಕೆ ರಡ್ಡಿ ಜನಾಂಗ

ರಡ್ಡಿ ಜನಾಂಗವನ್ನು 2ಎ ವರ್ಗಕ್ಕೆ ಸೇರಿಸುವ ಪ್ರಯತ್ನ ಸರಕಾರದ ಮಟ್ಟದಲ್ಲಿ ನಡೆದಿದೆ ಎಂದು ಕೃಷಿ ಸಚಿವ ಶಿವಶಂಕರರೆಡ್ಡಿ ಹೇಳಿದ್ದಾರೆ.

Vijaya Karnataka 23 Jun 2019, 5:00 am
ರಾಮದುರ್ಗ: ರಡ್ಡಿ ಜನಾಂಗವನ್ನು 2ಎ ವರ್ಗಕ್ಕೆ ಸೇರಿಸುವ ಪ್ರಯತ್ನ ಸರಕಾರದ ಮಟ್ಟದಲ್ಲಿ ನಡೆದಿದೆ ಎಂದು ಕೃಷಿ ಸಚಿವ ಶಿವಶಂಕರರೆಡ್ಡಿ ಹೇಳಿದ್ದಾರೆ.
Vijaya Karnataka Web BEL-22RD1


ಪಟ್ಟಣದ ಆಂಜನೇಯ ನಗರದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಹಾಗೂ ಸಭಾಭವನ ಉದ್ಘಾಟನೆ, ಕಳಸಾರೋಹಣ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಶನಿವಾರ ಅವರು ಮಾತನಾಡಿದರು.

''ರಡ್ಡಿ ಸಮುದಾಯ ಇಂದು ರಾಜ್ಯದಲ್ಲಿ ದೊಡ್ಡ ಸಮಾಜವಾಗಿ ಬೆಳೆದು ನಿಂತಿದೆ. ಸಮಾಜದ ಮುಖಂಡರ ಒತ್ತಾಯದ ಮೇರೆಗೆ ಸರಕಾರ ವೇಮನರ ಹಾಗೂ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲು ಅನುಮತಿಸಿದೆ. ವಿಧಾನಸೌಧದ ಆವರಣದಲ್ಲಿ ರಾಜ್ಯ ಪ್ರಥಮ ಮುಖ್ಯಮಂತ್ರಿ ದಿ.ಕೆ.ಸಿ.ರೆಡ್ಡಿ ಅವರ ಪ್ರತಿಮೆ ನಿರ್ಮಿಸಲಾಗಿದೆ'', ಎಂದರು.

ಮಾಜಿ ಸಚಿವ ರಾಮಲಿಂಗಾರಡ್ಡಿ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಉದ್ಘಾಟಿಸಿ ಮಾತನಾಡಿ, ''ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ವಿದ್ಯಾರ್ಥಿ ನಿಲಯ, ಸಮುದಾಯ ಭವನ ಹಾಗೂ ಮಂಗಲ ಭವನ ನಿರ್ಮಿಸಬೇಕು. ಎಲ್ಲ ಸಮಾಜದವರಿಗೂ ಉಪಯೋಗಿಸಲು ಅವಕಾಶ ನೀಡಬೇಕು'', ಎಂದು ಹೇಳಿದರು.

ಮಾಜಿ ಶಾಸಕ ಅಶೋಕ ಪಟ್ಟಣ, ಸಮಾಜದ ಅಭಿವೃದ್ಧಿಗಾಗಿ ರಾಜಕೀಯದಲ್ಲಿರುವ ರಡ್ಡಿ ನಾಯಕರೊಂದಿಗೆ ಕೈಜೋಡಿಸುವ ಭರವಸೆ ನೀಡಿದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್‌.ಎಚ್‌.ಕೋನರಡ್ಡಿ ರಡ್ಡಿ ಸಮಾಜದ ಪತ್ರಿಕೆ ಬಿಡುಗಡೆಗೊಳಿಸಿದರು. ರಾಜ್ಯ ರಡ್ಡಿ ಸಮಾಜದ ಕಾರ್ಯದರ್ಶಿ ಶೇಖರರಡ್ಡಿ ಸಮುದಾಯ ಭವನಕ್ಕೆ 2 ಲಕ್ಷ ರೂ. ದೇಣಿಗೆ ನೀಡುವ ಭರವಸೆ ನೀಡಿದರು.

ರಡ್ಡಿಪೀಠದ ವೇಮನಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಗುರುದೇವ ಆತ್ಮಾನಂದ ಪುಣ್ಯಾಶ್ರಮದ ಸಮರ್ಥ ಶಿವಾನಂದ ಸ್ವಾಮೀಜಿ, ಮುಳ್ಳೂರಿನ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶ್ರೀಪತಿನಗರದ ಜಗದಾತ್ಮಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಾಲೂಕು ರಡ್ಡಿ ಸಮಾಜದ ಅಧ್ಯಕ್ಷ ಜ್ಞಾನೇಶ್ವರ ಮೇಲಪ್ಪಗೋಳ ಅಧ್ಯಕ್ಷ ತೆ ವಹಿಸಿದ್ದರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.

ರಡ್ಡಿ ಸಮಾಜದ ಮುಖಂಡರಾದ ಡಾ.ಎಸ್‌.ಎನ್‌.ಅಮಾತೆಪ್ಪನವರ, ಡಾ.ಆರ್‌.ಎ.ಕಣಬೂರ, ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್‌ ಸಿಟಿ ಜಂಟಿ ನಿರ್ದೇಶಕಿ ಗೀತಾ ಕೌಲಗಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಉಮಾ ಸಾಲಿಗೌಡ್ರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ವೆಂಕಟರಮಣರೆಡ್ಡಿ, ತೋಟಗಾರಿಕೆ ಉಪನಿರ್ದೇಶಕ ರವೀಂದ್ರ ಹಕಾಟಿ, ಡಾ.ಮಲ್ಲಣ್ಣ ಯಾದವಾಡ, ಚನ್ನಬಸು ಹಿರೇರಡ್ಡಿ, ಡಾ.ಕೆ.ವಿ.ಪಾಟೀಲ, ಡಾ.ಎ.ಜಿ.ಪಾಟೀಲ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ವೈ.ವಿ.ಮಳಲಿ ಸ್ವಾಗತಿಸಿದರು. ಆನಂದ ಪಾಟೀಲ ನಿರೂಪಿಸಿದರು. ವಿ.ಟಿ.ಪಾಟೀಲ ವಂದಿಸಿದರು.

ಸಮಾಜದಿಂದ ಹಲವು ನಾಯಕರು
ಸಂಸದ ಸುರೇಶ ಅಂಗಡಿ ಅವರ ಅನುದಾನದಲ್ಲಿ ನಿರ್ಮಿಸಿದ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಎಚ್‌.ಕೆ.ಪಾಟೀಲ, ''ಬಾಂಬೆ ಸ್ಟೇಟ್‌ ಇದ್ದಾಗ ಪ್ರಥಮ ಶಾಸಕ ಹುಲಕುಂದ ಎಚ್‌.ವೈ.ಮುಂಬರಡ್ಡಿ, ಕರ್ನಾಟಕದ ಗಾಂಧಿ ಎನಿಸಿಕೊಂಡಿರುವ ಪಂಚಗಾವಿ, ಹೂಲಿ ವೆಂಕರಡ್ಡಿ ಸೇರಿದಂತೆ ಅನೇಕರನ್ನು ರಾಜಕೀಯದಲ್ಲಿ ಬಹು ಎತ್ತರಕ್ಕೆ ಒಯ್ದಿರುವುದು ರಡ್ಡಿ ಸಮಾಜ. ಧಾರವಾಡ ಕವಿವಿಯಲ್ಲಿ ವೇಮನ ಅಧ್ಯಯನ ಪೀಠದ ಮುಖ್ಯಸ್ಥ ಪ್ರೊ.ನೀಲಗುಂದ ಅವರು ವೇಮನರ 4 ಸಾವಿರಕ್ಕೂ ಅಧಿಕ ವಚನಗಳನ್ನು ದಾಖಲಿಸಿದ್ದಾರೆ. ಮಕ್ಕಳಿಗೆ ವೇಮನ ಅಧ್ಯಯನ ಮಾಡಲು ಪ್ರೇರಣೆ ನೀಡಬೇಕು'', ಎಂದು ಹೇಳಿದರು.

ಭವ್ಯ ಮೆರವಣಿಗೆ
ಕಾರ್ಯಕ್ರಮದ ಪೂರ್ವದಲ್ಲಿ ಹೇಮರಡ್ಡಿ ಮಲ್ಲಮ್ಮಳ ಮೂರ್ತಿಯನ್ನು ಇಲ್ಲಿನ ವೆಂಕಟೇಶ್ವರ ದೇವಸ್ಥಾನದಿಂದ ಭವ್ಯ ಮೆರವಣಿಗೆ ಮೂಲಕ ಸಭಾವೇದಿಕೆಗೆ ತರಲಾಯಿತು. ಪೂರ್ಣಕುಂಭ ಮೇಳ, ಆನೆ ಹಾಗೂ ವಿವಿಧ ವಾದ್ಯಮೇಳಗಳು ಮೆರವಣಿಗೆ ಕಳೆ ಹೆಚ್ಚಿಸಿದವು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ