ಆ್ಯಪ್ನಗರ

ಶಾಸಕಿ ಅಂಜಲಿ ನಿಂಬಾಳ್ಕರ್‌ ಕ್ಷಮೆಗೆ ಪಟ್ಟು, ಇಂದು ಪ್ರತಿಭಟನೆ

ಬೆಳಗಾವಿ: ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದ ...

Vijaya Karnataka Web 12 Aug 2020, 5:00 am
ಬೆಳಗಾವಿ: ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದ ಶಿವಾಜಿ ಮೂರ್ತಿ ತೆರವು ಪ್ರಕರಣದಲ್ಲಿ'ಕರ್ನಾಟಕ ಸರಕಾರ ಕ್ಷಮೆ ಕೇಳಬೇಕು' ಎಂದು ಆಗ್ರಹಿಸಿರುವ ಖಾನಾಪುರ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್‌ ವಿರುದ್ಧ ಜಿಲ್ಲೆಯಲ್ಲಿ ಆಕ್ರೋಶ ಹೆಚ್ಚಾಗುತ್ತಿದೆ.
Vijaya Karnataka Web 11YMD3080525
ಮಣಗುತ್ತಿ ಗ್ರಾಮದಲ್ಲಿಪಂಚ ಮೂರ್ತಿ ಸ್ಥಾಪನೆಗೆ ಮಂಗಳವಾರ ಚಾಲನೆ ನೀಡಲಾಯಿತು.


ಕನ್ನಡ ಸಂಘಟನೆಗಳು ಶಾಸಕಿ ವಿರುದ್ಧ ಬುಧವಾರ ಪ್ರತಿಭಟನೆ ನಡೆಸಲು ನಿರ್ಧರಿಸಿವೆ. ಅಲ್ಲದೆ, ಶಾಸಕಿ ಕನ್ನಡಿಗರು ಮತ್ತು ಕರ್ನಾಟಕ ಸರಕಾರದ ಮುಂದೆ ಬಹಿರಂಗ ಕ್ಷಮೆ ಕೇಳಬೇಕು ಎಂದು ಕನ್ನಡಾಭಿಮಾನಿಗಳು ಬಹಿರಂಗ ಪತ್ರ ಬರೆದು ಒತ್ತಾಯಿಸಿದ್ದಾರೆ.

ಮಣಗುತ್ತಿಯಲ್ಲಿಶಿವಾಜಿ ಮೂರ್ತಿ ತೆರವುಗೊಳಿಸಿದ ವಿಷಯದ ಸತ್ಯಾಸತ್ಯತೆ ಅರಿಯದೆ 'ರಾಷ್ಟ್ರನಾಯಕನಿಗೆ ರಾಜ್ಯ ಸರಕಾರ ಅಪಮಾನ ಮಾಡಿದೆ. ತಕ್ಷಣ ಕ್ಷಮೆ ಕೇಳಿ ಮೂರ್ತಿ ತೆರವುಗೊಳಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ಶಾಸಕಿ ಅಂಜಲಿ ಟ್ವೀಟ್‌ ಮಾಡಿದ್ದರು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿ ಕನ್ನಡಿಗರು ಅವರನ್ನು ಜಾಲತಾಣಗಳಲ್ಲೇ ತರಾಟೆಗೆ ತೆಗೆದುಕೊಂಡಿದ್ದರು. ಶಾಸಕಿ ಹೇಳಿಕೆ ಕುರಿತಂತೆ 'ವಿಕ' ಮಂಗಳವಾರ ವಿಸ್ತೃತ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

ಬಹಿರಂಗ ಪತ್ರ: ಈ ಸಂಬಂಧ, ಹಿತಚಿಂತಕರೊಬ್ಬರು ಶಾಸಕಿಗೆ ಬಹಿರಂಗ ಪತ್ರ ಬರೆದು ಸಾಮಾಜಿಕ ಜಾಲತಾಣಗಳಲ್ಲಿಹಂಚಿಕೊಂಡಿದ್ದು,'ವಿರೋಧ ಪಕ್ಷ ಎಂದೊಡನೆ ಎಲ್ಲಕೆಲಸದಲ್ಲೂಮೂಗು ತೂರಿಸುವುದು ನಿಮಗೆ ಶೋಭೆಯಲ್ಲ. ವಿಷಯದ ಬಗ್ಗೆ ಪೂರ್ಣ ಮಾಹಿತಿ ಹೊಂದಲಾರದ ಹಾಗೂ ನಿಮ್ಮ ಅಧಿಕಾರಕ್ಕೆ ಸಂಬಂಧವಿಲ್ಲದ ತಾಲೂಕಿನ ಬಗ್ಗೆ ಮಾತನಾಡುವ ಮೊದಲು ನೀವು ಅಲ್ಲಿಗೆ ಹೋಗಿ ವಿಷಯದ ಕುರಿತು ವಿಚಾರಣೆ ಮಾಡಿದ್ದೀರಾ? ಅಲ್ಲಿನಡೆದಿದ್ದು ಶೇ.100 ರಷ್ಟು ತಪ್ಪು ಎಂದು ನೀವು ನಿರೂಪಿಸುವಿರಾ?' ಎಂದು ಸವಾಲು ಹಾಕಿದ್ದಾರೆ.

ಇಂದು ಕರವೇ ಪ್ರತಿಭಟನೆ

ಕರ್ನಾಟಕ ಸರಕಾರದ ವಿರುದ್ಧ ಟ್ವೀಟ್‌ ಮಾಡಿ ಕನ್ನಡಿಗರಿಗೆ ಅವಮಾನ ಮಾಡಿರುವ ಶಾಸಕಿ ಅಂಜಲಿ ವಿರುದ್ಧ ಬುಧವಾರ ನಗರದಲ್ಲಿಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಘಟಕದ ದೀಪಕ್‌ ಗುಡಗನಟ್ಟಿ ತಿಳಿಸಿದ್ದಾರೆ. ''ಮಣಗುತ್ತಿಯಲ್ಲಿಸರಕಾರದಿಂದಾಗಲಿ, ಜಿಲ್ಲಾಡಳಿತದಿಂದಾಗಲಿ ಅಥವಾ ಕನ್ನಡಿಗರಿಂದಾಗಲಿ ಶಿವಾಜಿ ಮೂರ್ತಿಗೆ ಅವಮಾನವಾಗಿಲ್ಲ. ಮೂರ್ತಿ ಪ್ರತಿಷ್ಠಾಪನೆ ಮಾಡಿದವರೇ ತೆರವು ಮಾಡಿ ಸೌಹಾರ್ದದಿಂದ ಪ್ರತಿಷ್ಠಾಪನೆಗೆ ನಿರ್ಧರಿಸಿದ್ದಾರೆ. ಇದರ ಅರಿವಿಲ್ಲದ ಶಾಸಕಿ ಮಹಾರಾಷ್ಟ್ರ ಸರಕಾರ ಮತ್ತು ಅಲ್ಲಿನ ಸಂಘಟನೆಗಳ ಪರ ವಕಾಲತ್ತು ವಹಿಸಿ ಮಾತನಾಡಿ ಕನ್ನಡದ ನೆಲಕ್ಕೆ ದ್ರೋಹ ಮಾಡಿದ್ದಾರೆ'', ಎಂದಿದ್ದಾರೆ.

ಬಾಬ್ರಿ ಮಸೀದಿ ಧ್ವಂಸಕ್ಕೆ ಹೋಲಿಸಿದ 'ಸಾಮ್ನಾ'

ಮಣಗುತ್ತಿ ಗ್ರಾಮದ ಶಿವಾಜಿ ಮೂರ್ತಿ ತೆರವು ವಿಷಯವನ್ನು ಮಹಾರಾಷ್ಟ್ರದ 'ಸಾಮ್ನಾ' ಪತ್ರಿಕೆ ಬಾಬ್ರಿ ಮಸೀದಿ ಧ್ವಂಸಕ್ಕೆ ಹೋಲಿಸಿ ಮರಾಠಿಗರನ್ನು ಇನ್ನಷ್ಟು ಪ್ರಚೋದಿಸುವ ಕೆಲಸ ಮಾಡಿದೆ. ''ಕರ್ನಾಟಕದ ಮಣಗುತ್ತಿಯಲ್ಲಿಶಿವಾಜಿ ಮೂರ್ತಿ ತೆರವುಗೊಳಿಸಿದ್ದರೂ ಬಿಜೆಪಿ ಸರಕಾರ ಮೌನ ವಹಿಸಿದೆ. ಇದೇ ಘಟನೆ ಕಾಂಗ್ರೆಸ್‌ ಅಥವಾ ಅನ್ಯ ಪಕ್ಷಗಳ ಸರಕಾರ ಇರುವ ರಾಜ್ಯಗಳಲ್ಲಿನಡೆದಿದ್ದರೆ ಭೂಮಿ-ಆಕಾಶ ಒಂದಾಗುವ ರೀತಿ ಪ್ರತಿಭಟಿಸುತ್ತಿದ್ದರು'', ಎಂದು ವ್ಯಂಗ್ಯವಾಡಿದೆ. ''ರಾಮ ಮಂದಿರ ಪೂಜೆ ವೇಳೆ ಶಿವಾಜಿ ಮಹಾರಾಜರ ಬಗ್ಗೆ ಮಾತನಾಡುವ ಪ್ರಧಾನಿ ಮೋದಿ ಅವರ ಪಕ್ಷವೇ ಅಧಿಕಾರ ಇರುವ ರಾಜ್ಯದಲ್ಲಿರಾತ್ರೋ ರಾತ್ರಿ ಶಿವಾಜಿ ಮೂರ್ತಿ ತೆರವುಗೊಳಿಸಿರುವುದು ರಾವಣ ಕೃತ್ಯ'', ಎಂದು ಬರೆಯಲಾಗಿದೆ.

ಸ್ವಕ್ಷೇತ್ರದಲ್ಲೂಕನ್ನಡಿಗರ ಕಿಡಿ

ಖಾನಾಪುರ: ಶಾಸಕಿ ಡಾ. ಅಂಜಲಿ ನಿಂಬಾಳ್ಕರ್‌ ಅವರ ಸ್ವಕ್ಷೇತ್ರದಲ್ಲೂಅವರ ಹೇಳಿಕೆ ವಿರುದ್ಧ ಕನ್ನಡಿಗರು ಕಿಡಿಕಾರಿದ್ದಾರೆ. ಶಾಸಕಿ ಕನ್ನಡ ನಾಡು-ನುಡಿಗೆ ದ್ರೋಹವೆಸಗಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಆರೋಪಿಸಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಕರವೇ ತಾಲೂಕು ಘಟಕದ ಉಪಾಧ್ಯಕ್ಷ ವಿಠಲ ಹಿಂಡಲಕರ, ''ಡಾ.ಅಂಜಲಿ ಅವರು ಕರ್ನಾಟಕದ ಶಾಸಕರು ಎಂಬುದನ್ನು ಮರೆತು ಮಹಾರಾಷ್ಟ್ರಕ್ಕೆ ಬೆಂಬಲ ನೀಡುವ ಹೇಳಿಕೆಗಳನ್ನು ನೀಡಿ ಬೇಜವಾಬ್ದಾರಿ ಮೆರೆದಿದ್ದಾರೆ. ಕ್ಷೇತ್ರದ ಮರಾಠಿಗರ ಓಲೈಕೆಗಾಗಿ ಇಂತಹ ಅಸಂಬದ್ಧ ಹೇಳಿಕೆ ನೀಡಿದ್ದು, ಕೂಡಲೇ ಅವರು ಕರ್ನಾಟಕ ಸರಕಾರ ಹಾಗೂ ಕನ್ನಡಿಗರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು'', ಎಂದು ಎಚ್ಚರಿಸಿದ್ದಾರೆ.

ಬಗೆಹರಿದ ವಿವಾದ, ಪಂಚ ಮೂರ್ತಿ ಸ್ಥಾಪನೆಗೆ ನಿರ್ಧಾರ
ಯಮಕನಮರಡಿ: ಈ ಮಧ್ಯೆ, ಮಣಗುತ್ತಿ ಗ್ರಾಮದಲ್ಲಿಮಂಗಳವಾರ ಶಾಂತಿ ಸಭೆ ನಡೆಸಿರುವ ಮಣಗುತ್ತಿ, ಬೋಶ್ಯಾನಹಟ್ಟಿ, ಬೆನಕನಹೊಳಿ ಗ್ರಾಮಸ್ಥರು ಹಾಗೂ ಪೊಲೀಸ್‌ ಅಧಿಕಾರಿಗಳು, ಪಂಚ ಕಮಿಟಿ ಸದಸ್ಯರು ಪಂಚಮೂರ್ತಿಗಳ ಸ್ಥಾಪನೆಗೆ ನಿರ್ಧರಿಸಿ ವಿವಾದಕ್ಕೆ ಸೌಹಾರ್ದದ ತೆರೆ ಎಳೆದಿದ್ದಾರೆ. ಅಲ್ಲದೆ, ಗ್ರಾಮದ ಹೊರವಲಯದ ಬಸವಣ್ಣ ಗುಡಿಯ ಹತ್ತಿರ ಶಿವಾಜಿ, ಅಂಬೇಡ್ಕರ್‌, ಬಸವಣ್ಣ, ವಾಲ್ಮೀಕಿ ಹಾಗೂ ಕೃಷ್ಣನ ಮೂರ್ತಿಗಳ ಸ್ಥಾಪನೆಗೆ ಮಂಗಳವಾರವೇ ಚಾಲನೆ ಕೂಡ ನೀಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ