ಆ್ಯಪ್ನಗರ

ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸುತ್ತೇನೆ ಎಂದ ಸತೀಶ ಜಾರಕಿಹೊಳಿ

ರಾಜ್ಯ ವಿಧಾನಸಭೆ ಚುನಾವಣೆಗೆ ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸುತ್ತೇನೆ ಎನ್ನುತ್ತಿರುವ ಎಐಸಿಸಿ ಕಾರ್ಯದರ್ಶಿ, ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಉಮೇದುವಾರಿಗೆ ಸಲ್ಲಿಸುವ ಮೊದಲೇ 'ರಾಹು' ಸಮಸ್ಯೆ ಎದುರಾಗಿದೆ!

Vijaya Karnataka 22 Apr 2018, 9:45 am
ಬೆಳಗಾವಿ: ರಾಜ್ಯ ವಿಧಾನಸಭೆ ಚುನಾವಣೆಗೆ ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸುತ್ತೇನೆ ಎನ್ನುತ್ತಿರುವ ಎಐಸಿಸಿ ಕಾರ್ಯದರ್ಶಿ, ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಉಮೇದುವಾರಿಗೆ ಸಲ್ಲಿಸುವ ಮೊದಲೇ 'ರಾಹು' ಸಮಸ್ಯೆ ಎದುರಾಗಿದೆ!
Vijaya Karnataka Web ಸತೀಶ ನಾಮಪತ್ರ ಸಲ್ಲಿಕೆಗೆ ‘ರಾಹು’ಕಾಲವೇ ಅಡ್ಡಿ!


ಮೌಢ್ಯ ವಿರೋಧಿ ಹೋರಾಟ ನಡೆಸುತ್ತಿರುವ ಸತೀಶ ಜಾರಕಿಹೊಳಿ ಅವರು, ಉಮೇದುವಾರಿಕೆ ಸಲ್ಲಿಸುವ ಕೊನೆಯ ದಿನ ಏ.24ರಂದು ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದಾರೆ. ಅಲ್ಲದೆ, 'ಮಧ್ಯಾಹ್ನ 3ರಿಂದ 4.30ರ ಅವಧಿಯಲ್ಲಿ ರಾಹುಕಾಲ ಇದೆ. ಅದೇ ಅವಧಿಯಲ್ಲಿ ಹುಕ್ಕೇರಿ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸುತ್ತೇನೆ. ಈ ವೇಳೆ ಅದ್ಧೂರಿ ಮೆರವಣಿಗೆ, ಆಡಂಬರ ಇರುವುದಿಲ್ಲ' ಎಂದು ಅವರು ಪ್ರಕಟಣೆ ಹೊರಡಿಸಿದ್ದಾರೆ. ಆದರೆ, ಅವರ ಈ ಬಯಕೆಗೆ ಈಗಲೇ ರಾಹು ಅಡ್ಡಿಯಾಗಿದೆ. ಅವರು ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿದರೆ ಚುನಾವಣೆ ಕಣದಿಂದಲೇ ಹೊರ ಬೀಳಲಿದ್ದಾರೆ.

ಇದು ಯಾವುದೇ ಸ್ವಾಮೀಜಿಗಳ ನುಡಿಯಲ್ಲ. ಯಾರ ಶಾಪವೂ ಅಲ್ಲ. ಅಸಲಿಗೆ ಈ ವೇಳೆಯಲ್ಲಿ ನಾಮಪತ್ರ ಸ್ವೀಕಾರವೇ ನಡೆಯುವುದಿಲ್ಲ. ಚುನಾವಣಾ ಆಯೋಗದ ನಿಯಮದ ಪ್ರಕಾರ ಬೆಳಗ್ಗೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಮಾತ್ರ ನಾಮಪತ್ರ ಸ್ವೀಕರಿಸಲಾಗುತ್ತದೆ. ಆದರೆ, ಏ.24ರಂದು 3 ಗಂಟೆ ನಂತರ ರಾಹುಕಾಲ ಆರಂಭವಾಗುವುದರಿಂದ ಸತೀಶ ಜಾರಕಿಹೊಳಿ ಅವರು ಬೇರೆ ಗಳಿಗೆಯಲ್ಲಿ ನಾಮಪತ್ರ ಸಲ್ಲಿಸುವುದು ಅನಿವಾರ್ಯ.

ಜ್ಯೋತಿಷ್ಯ ನಂಬದವರಿಗೆ ರಾಹುಕಾಲ ತಿಳಿದದ್ದು ಹೇಗೆ?: ರಾಹು ಕಾಲದಲ್ಲಿ ನಾಮಪತ್ರ ಸಲ್ಲಿಸುವ ಸತೀಶ ಜಾರಕಿಹೊಳಿ ಅವರ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಆರಂಭಿಸಿದ್ದಾರೆ. ಜ್ಯೋತಿಷ್ಯವನ್ನೇ ನಂಬದೇ ಇರುವವರು ರಾಹುಕಾಲ ಸಮಯವನ್ನು ಹೇಗೆ ಹುಡುಕಿಕೊಂಡರು ಎಂದು ಕಾಲೆಳೆಯಲು ಶುರುಮಾಡಿದ್ದಾರೆ. ಇನ್ನೊಂದೆಡೆ ಜನರನ್ನು ದಾರಿ ತಪ್ಪಿಸಲು ಶಾಸಕರು ಸುಳ್ಳು ಹೇಳಿದರು ಎಂದೂ ಹಲವರು ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ