ಆ್ಯಪ್ನಗರ

ಹಲವೆಡೆ ಮಳೆರಾಯನ ಆರ್ಭಟ, ಜನಜೀವನ ಅಸ್ತವ್ಯಸ್ತ

ಬೆಳಗಾವಿ: ಕೊರೊನಾ ಲಾಕ್‌ಡೌನ್‌ನಲ್ಲಿರುವ ನಗರ ಸೇರಿದಂತೆ ...

Vijaya Karnataka 17 Apr 2020, 5:00 am
ಬೆಳಗಾವಿ: ಕೊರೊನಾ ಲಾಕ್‌ಡೌನ್‌ನಲ್ಲಿರುವ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಗುರುವಾರ ಸಂಜೆ ಗುಡುಗು-ಗಾಳಿ ಸಹಿತ ಸುರಿದ ಮಳೆ ಬಿಸಿಲಿನಿಂದ ಬಸವಳಿದ ಜನತೆಗೆ ತಂಪಿನ ಅನುಭವ ನೀಡಿದೆ. ಗಾಳಿಯ ರಭಸಕ್ಕೆ ನಗರದ ಯಡಿಯೂರಪ್ಪ ಮಾರ್ಗದ ಮಾಲಿನಿ ಸಿಟಿಯಲ್ಲಿನಿರ್ಮಿಸಿದ ತಾತ್ಕಾಲಿಕ ತರಕಾರಿ ಮಾರುಕಟ್ಟೆಯ ಚಾವಣಿಯ ತಗಡುಗಳು ಹಾರಿ ಹೋಗಿವೆ. ಇದರಿಂದ ಮಾರುಕಟ್ಟೆ ಸಂಪೂರ್ಣ ಅಸ್ತವ್ಯಸ್ತವಾಗಿದೆ.
Vijaya Karnataka Web 16LBS1_53
ಗಾಳಿ- ಮಳೆಗೆ ಧರಾಶಾಹಿಯಾದ ಬೆಳಗಾವಿಯ ತಾತ್ಕಾಲಿಕ ತರಕಾರಿ ಮಾರುಕಟ್ಟೆ ಶೆಡ್‌ಗಳು.


ಕೆಲವು ಕಡೆ ಆಲಿಕಲ್ಲುಮಳೆಯಾಗಿದೆ. ಅಥಣಿ ತಾಲೂಕಿನ ನಾಗನೂರು ಪಿ.ಕೆ. ಗ್ರಾಮದಲ್ಲಿಸಿಡಿಲು ಬಡಿದು ತೆಂಗಿನ ಮರಕ್ಕೆ ಬೆಂಕಿ ತಗುಲಿದ್ದರಿಂದ ಹೊತ್ತಿ ಉರಿದಿದೆ. ಗೋಕಾಕ, ಮುರಗೋಡ, ಹಣ್ಣಿಕೇರಿ, ಅರಟಾಳ, ಮರಕುಂಬಿ, ಅಡಹಳ್ಳಿ, ಹಾರೂಗೇರಿ, ನೇಸರಗಿ, ಬಾವನಸೌಂದತ್ತಿಯಲ್ಲಿಮಳೆ ಸುರಿದಿದೆ. ಭಾರೀ ಮಳೆಯಿಂದ ಹಲವು ಕಡೆ ಆಸ್ತಿಪಾಸ್ತಿ ಹಾನಿಯಾಗಿದೆ. ಕೊಯ್ಲಿಗೆ ಬಂದ ಮಾವಿನ ಬೆಳೆ, ಹಿಂಗಾರಿನ ಮೆಕ್ಕೆಜೋಳ, ತರಕಾರಿ ಬೆಳೆಗಳು ಹಾನಿಗೊಂಡಿವೆ. ಈಗಾಗಲೇ ಲಾಕ್‌ಡೌನ್‌ನಿಂದ ವ್ಯಾಪಾರ-ವಹಿವಾಟು ಇಲ್ಲದೆ ಕಂಗಾಲಾದ ರೈತರಿಗೆ ಬೇಸಿಗೆ ಮಳೆ ಮತ್ತಷ್ಟು ಪೆಟ್ಟು ನೀಡಿದೆ.

ಬೈಲಹೊಂಗಲ ವರದಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಗುರುವಾರ ಆಲಿಕಲ್ಲುಮಳೆ ಸುರಿಯಿತು. ಮಧ್ಯಾಹ್ನ ಹೊತ್ತು ಗುಡುಗು, ಮಿಂಚು, ಗಾಳಿಯೊಂದಿಗೆ ಧರೆಗಿಳಿದ ಮಳೆರಾಯ ಕೆಲಕಾಲ ಅಬ್ಬರಿಸಿದ. ಜೋರಾದ ಗಾಳಿ, ಮಳೆಗೆ ಬೀದಿ ಬದಿಗಳಲ್ಲಿಮಾರಾಟಕ್ಕಿಟ್ಟಿದ್ದ ತರಕಾರಿ, ಹಣ್ಣು, ಹೂವುಗಳು ಕೊಚ್ಚಿಕೊಂಡು ಹಳ್ಳ ಸೇರಿದವು. ಬೀದಿ ರಸ್ತೆ, ಜಮೀನುಗಳಲ್ಲಿಮಳೆ ನೀರು ಸಂಗ್ರಹವಾಗಿತ್ತು. ಪಟ್ಟಣದೆಲ್ಲೆಡೆ ಸೀಲ್‌ಡೌನ್‌ ಮಾಡಿದ್ದರಿಂದ ಮನೆ ಬಿಟ್ಟು ಹೊರ ಬಾರದ ಜನ ಮಳೆ ನಿಂತ ಮೇಲೆ ರಸ್ತೆಗಳಲ್ಲಿಬರುವ ಪ್ರಯತ್ನ ಮಾಡಿದರು. ಆದರೆ ಕೆಸರಾಗಿದ್ದ ರಸ್ತೆಗಳಲ್ಲಿತೆರಳಲು ತೊಂದರೆ ಅನುಭವಿಸಿದರು. ಕೆಲವು ಅಂಗಡಿ, ಮನೆಗಳಲ್ಲಿನೀರು ನಿಂತಿದ್ದು ಕಂಡು ಬಂದಿತು. 1 ಗಂಟೆಗೂ ಹೆಚ್ಚುಕಾಲ ಮಳೆ ಸುರಿಯಿತು.

ಬಿತ್ತನೆಗೆ ಪೂರಕ

ಅಥಣಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಗುಡುಗು ಸಹಿತ ಮಳೆ ಸುರಿದಿದೆ. ಈಗಾಗಲೇ ಹಲವು ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದರಿಂದ ನೆಲ ಹದ ಮಾಡಿಕೊಂಡಿರುವ ರೈತರಿಗೆ ಮಳೆಯಿಂದ ಅನುಕೂಲವಾಗಲಿದೆ.

ಒಣದ್ರಾಕ್ಷಿ ರಕ್ಷಿಸಿಕೊಳ್ಳಲು ಪರದಾಟ

ತೆಲಸಂಗ ಹೋಬಳಿಯ ಬಹುತೇಕ ಹಳ್ಳಿಗಳಲ್ಲಿಗುಡುಗು ಸಹಿತ ಆಲಿಕಲ್ಲುಮಳೆ ಸುರಿದಿದೆ. ಶೆಡ್‌ನಲ್ಲಿಇರುವ ಒಣ ದ್ರಾಕ್ಷಿಯನ್ನು ಮಳೆಯಿಂದ ರಕ್ಷಿಸಿಕೊಳ್ಳಲು ರೈತರು ಪರದಾಡಿದರು. ಕೆಲವರು ಪ್ಲಾಸ್ಟಿಕ್‌ ಶೀಟ್‌ ಮುಚ್ಚಿ ಒಣ ದ್ರಾಕ್ಷಿಗೆ ಮಳೆ ನೀರು ತಗುಲದಂತೆ ನೋಡಿಕೊಂಡರು. ಭಾರೀ ಗಾಳಿಗೆ ಕೆಲವು ಕಡೆ ಪತ್ರಾಸ್‌ಗಳು ಉರುಳಿ ಬಿದ್ದಿವೆ.

ಫಸಲು ಹಾಳಾಗುವ ಭೀತಿ

ರಾಯಬಾಗ ತಾಲೂಕು ದಿಗ್ಗೇವಾಡಿ, ಕಂಚಕರವಾಡಿ, ಜಲಾಲಪುರ, ಭಿರಡಿ, ಚಿಂಚಲಿ ಗ್ರಾಮಗಳಲ್ಲಿಕೆಲ ನಿಮಿಷಗಳ ಕಾಲ ಆಲಿಕಲ್ಲುಸಹಿತ ಮಳೆ ಸುರಿದಿದೆ. ಲಾಕ್‌ಡೌನ್‌ನಿಂದ ತರಕಾರಿ ಬೆಳೆಗಳಿಗೆ ಮಾರುಕಟ್ಟೆ ಇಲ್ಲದೇ ರೈತರು ಕಂಗಾಲಾಗಿದ್ದು ಈ ಸಂದರ್ಭದಲ್ಲೇ ಸುರಿದ ಆಲಿಕಲ್ಲುಮಳೆ ಅನ್ನದಾತರಿಗೆ ಪೆಟ್ಟು ನೀಡಿದೆ. ಮುಸುಕಿನಜೋಳ, ಜೋಳದ ಬೆಳೆ ಹಾನಿಯಾಗುವ ಆತಂಕ ಎದುರಾಗಿದೆ. ಕೆಲವು ಕಡೆ ಮುಸುಕಿನ ಜೋಳ ಕಟಾವು ಮಾಡಿ ರಾಶಿ ಹಾಕಲಾಗಿದ್ದು ಫಸಲು ಕೊಳೆಯುವ ಭೀತಿ ಎದುರಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ