ಆ್ಯಪ್ನಗರ

ರಮೇಶ್‌ ಬಿಜೆಪಿ ಸೇರಿರುವುದು ಸಾಲ ತೀರಿಸಿಕೊಳ್ಳಲು: ಸತೀಶ್‌ ಜಾರಕಿಹೊಳಿ

"ದೊಡ್ಡ ದೊಡ್ಡ ಮಹಾನುಭಾವರು ಜನಿಸಿದ ಮಮದಾಪುರ ಮೂವರ ಕೈಯಲ್ಲಿ ಸಿಲುಕಿ ನಲುಗುತ್ತಿದೆ. ಅವರಿಂದಾಗಿ ನೂರೆಂಟು ಸಮಸ್ಯೆಗಳು ಇಲ್ಲಿ ತಲೆ ಎತ್ತಿವೆ. ಮಾವ ಡೆಲ್ಲಿಯಲ್ಲಿ, ಅಳಿಯ ಮುಂಬೈನಲ್ಲಿ, ನಾವು ಇಲ್ಲಿಯ ಗದ್ದೆಗಳಲ್ಲಿ," - ಲಖನ್‌ ಜಾರಕಿಹೊಳಿ.

Vijaya Karnataka 17 Oct 2019, 7:10 pm
ಗೋಕಾಕ: "ರಮೇಶ್‌ ಪಕ್ಷ ಬೆಳೆಸಲು ಬಿಜೆಪಿಗೆ ಹೋಗಿಲ್ಲ. ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದರಿಂದ ಅದನ್ನು ತೀರಿಸಿಕೊಳ್ಳಲು ಅಲ್ಲಿಗೆ ಹೋಗಿದ್ದಾನೆ", ಎಂದು ಯಮಕನಮರಡಿ ಶಾಸಕ ಸತೀಶ್‌ ಜಾರಕಿಹೊಳಿ ಸಹೋದರನ ವಿರುದ್ಧ ಮತ್ತೆ ಹರಿಹಾಯ್ದಿದ್ದಾರೆ.
Vijaya Karnataka Web Satish Jarkiholi


ತಾಲೂಕಿನ ಮಮದಾಪುರ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, "ರಮೇಶ್‌ ಸಾಲ ತೀರಿಸಿಕೊಳ್ಳಲು ಬಂದಿದ್ದಾನೆಂಬುದು ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿಯವರಿಗೆ ಗೊತ್ತಾಗಬೇಕು. ಇವನನ್ನು ಅವರು ನಂಬಿರಬಹುದು. ಆದರೆ, ಸ್ವಾರ್ಥಕ್ಕಾಗಿ ಬಿಜೆಪಿ ಸೇರಿದ್ದಾನೆ. ಇದರ ವಿರುದ್ಧ ನಮ್ಮ ಹೋರಾಟ ನಡೆಯುತ್ತಿದೆ," ಎಂದರು.

"ರಮೇಶ್‌ 20 ವರ್ಷಗಳಿಂದ ಕಾಂಗ್ರೆಸ್‌ ವೋಟ್‌, ಜಾರಕಿಹೊಳಿ ಬ್ರ್ಯಾಂಡ್‌ ಹಾಗೂ ಲಖನ್‌ ಜಾರಕಿಹೊಳಿ ಬೆಂಬಲದಿಂದ ಗೆಲ್ಲುತ್ತಾ ಬಂದಿದ್ದಾನೆ. ಅವರೇನು ಅಭಿವೃದ್ಧಿ ಕೆಲಸಗಳಿಂದ ಗೆಲುವು ಪಡೆಯುತ್ತಿಲ್ಲ. 20 ವರ್ಷಗಳಲ್ಲಿ ನಿಮ್ಮ ಹಳ್ಳಿಗಳಿಗೆ ಒಂದು ಬಸ್‌ ಬಿಡಲು ಸಾಧ್ಯವಾಗದ ಎಂಎಲ್‌ಎ ನಿಮಗೆ ಬೇಕಾ?" ಎಂದು ಪ್ರಶ್ನಿಸಿದ ಸತೀಶ್‌, "ಲಖನ್‌ ಈಗಾಗಲೇ ಜನರ ಪರವಾಗಿ ಕೆಲಸ ಮಾಡುತ್ತಿದ್ದಾನೆ. ಶೇ. 20-30ರಷ್ಟು ಅವನೀಗ ಎಂಎಲ್‌ಎ ಇದ್ದಂತೆಯೇ," ಎಂದರು.

ಸರಕಾರ ಕೆಡವಿದವರ ನಾವು ಕೆಡವೋಣ


ಕಾಂಗ್ರೆಸ್‌ ಸಂಭಾವ್ಯ ಅಭ್ಯರ್ಥಿ ಎಂದೇ ಗುರುತಿಸಿಕೊಂಡಿರುವ ಲಖನ್‌ ಜಾರಕಿಹೊಳಿ, "ಅಲ್ಲಿ ಸರಕಾರ ಕೆಡವಿ ಬಂದಿರೋರನ್ನ ಇಲ್ಲಿ ನಾವು ಉಪಚುನಾವಣೆಯಲ್ಲಿ ಕೆಡವೋಣ," ಎಂದು ಗುಡುಗಿದರು.

"ಇಲ್ಲಿ ಕಾಂಗ್ರೆಸ್‌ -ಬಿಜೆಪಿ ಪ್ರಶ್ನೆ ಬಂದಿಲ್ಲ. ಬಿಜೆಪಿ ವಿರುದ್ಧ ನಮ್ಮ ಹೋರಾಟ ಅಲ್ಲ. ಬದಲಾಗಿ ರಮೇಶ್‌, ಅವನ ಅಳಿಯ, ಅವರ ಗುಂಪಿನ ವಿರುದ್ಧ; ಅವರು ನಡೆಸಿರುವ ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ," ಎಂದರು.

''ಅಣ್ತಮ್ಮಂದಿರು ನಾವೆಲ್ಲಒಂದೇ, ಮುಂದೆ ಒಂದಾಗ್ತಾರೆ ಅಂತ ನೀವು ಅನ್ಕೋಬೇಡಿ. ಅವರು ಭ್ರಷ್ಟಾಚಾರ ಮಾಡಿದ್ದರಿಂದ ನಮ್ಮ ಹೆಸರು ಕೂಡ ಕೆಡುತ್ತಿದೆ. ಮುಖ ಮುಚ್ಚಿಕೊಂಡು ಓಡಾಡುವಂತಾಗಿದೆ. ಮುಂದೆಂದೂ ಅವರ ಜತೆ ನಾವು ಸೇರುವುದಿಲ್ಲ. ಈಗ ಅವರದು ಪಾಟೀಲ್‌ ಫ್ಯಾಮಿಲಿ, ನಮ್ಮದು ಜಾರಕಿಹೊಳಿ ಫ್ಯಾಮಿಲಿ. ಅವರು ಯಾವಾಗ ಭ್ರಷ್ಟಾಚಾರದಲ್ಲಿ ತೊಡಗಿದರೋ ಅಂದೇ ಅವರ ಕೈಬಿಟ್ಟೆವು," ಎಂದು ಸ್ಪಷ್ಟಪಡಿಸಿದರು.

"ಈ ಚುನಾವಣೆಯಲ್ಲಿ ನಾವು ಆಯ್ಕೆಯಾಗಿ ಬಂದರೂ ಎಲ್ಲಅಭಿವೃದ್ಧಿ ಕಾರ್ಯಗಳು ಸತೀಶಣ್ಣನ ನೇತೃತ್ವದಲ್ಲಿ ನಡೆಯಲಿವೆ. ಯಮಕನಮರಡಿಯಲ್ಲಿ ನಡೆದಿರುವಂತೆ ಗೋಕಾಕ್‌ ತಾಲೂಕಿನಲ್ಲಿ ಅಭಿವೃದ್ಧಿಯ ಪರ್ವ ಶುರುವಾಗಲಿದೆ," ಎಂದು ಲಖನ್‌ ಹೇಳಿದರು.

ದೊಡ್ಡ ದೊಡ್ಡ ಮಹಾನುಭಾವರು ಜನಿಸಿದ ಮಮದಾಪುರ ಮೂವರ ಕೈಯಲ್ಲಿ ಸಿಲುಕಿ ನಲುಗುತ್ತಿದೆ. ಅವರಿಂದಾಗಿ ನೂರೆಂಟು ಸಮಸ್ಯೆಗಳು ಇಲ್ಲಿ ತಲೆ ಎತ್ತಿವೆ. ಮಾವ ಡೆಲ್ಲಿಯಲ್ಲಿ, ಅಳಿಯ ಮುಂಬೈನಲ್ಲಿ, ನಾವು ಇಲ್ಲಿಯ ಗದ್ದೆಗಳಲ್ಲಿ ಎಂಬಂತಾಗಿದೆ ಎಂಬುದಾಗಿ ಲಖನ್‌ ಪರಿಸ್ಥಿತಿಯನ್ನು ವಿಶ್ಲೇಷಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ